ಡಿ.10ರಿಂದ ದೆಹಲಿಯಲ್ಲಿ ಲಿಂಗಾಯತ ರ್ಯಾಲಿ: ಮಾತೆ
Team Udayavani, Nov 4, 2018, 6:05 AM IST
ಬೀದರ್: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುವುದಕ್ಕಾಗಿ ಡಿ.10ರಿಂದ 12ರವರೆಗೆ ನವದೆಹಲಿಯಲ್ಲಿ ಲಿಂಗಾಯತ ಮಹಾ ರ್ಯಾಲಿ ನಡೆಸಲಾಗುತ್ತಿದೆ ಎಂದು ಬಸವ ಧರ್ಮ ಪೀಠದ ಡಾ.ಮಾತೆ ಮಹಾದೇವಿ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವದೆಹಲಿಯ ತಾಲ್ಕಟೋರಾ ಒಳಾಂಗಣ ಮೈದಾನದಲ್ಲಿ ರ್ಯಾಲಿ ಆಯೋಜಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವ ಧಿಯಲ್ಲಿ ರಚಿಸಿದ ಸಮಿತಿ ವರದಿ ಆಧರಿಸಿ, ರಾಜ್ಯದ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೆಂದು ಘೋಷಿಸಿದ್ದು, ಧಾರ್ಮಿಕ ಅಲ್ಪಸಂಖ್ಯಾಂತ ಸ್ಥಾನಮಾನ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆ ಶಿಫಾರಸು ಇದೀಗ ಕೇಂದ್ರದ ಮುಂದಿದ್ದು, ಕೇಂದ್ರದ ಗಮನ ಸೆಳೆಯಲು ಮಹಾರ್ಯಾಲಿ ನಡೆಸಲಾಗುತ್ತಿದೆ.
ಡಿ.10ರಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಲಿಂಗಾಯತ ಸಮಾವೇಶ ಉದ್ಘಾಟಿಸಲಿದ್ದಾರೆ. ಡಿ.11ರಂದು ಸರ್ವಧರ್ಮ ಸಮನ್ವಯ ಹಾಗೂ ಧರ್ಮಗುರುಗಳು ಉಪನ್ಯಾಸ ನೀಡುವರು. ಡಿ.12ರಂದು ಬೃಹತ್ ರ್ಯಾಲಿ ನಡೆಯಲಿದೆ. ರ್ಯಾಲಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಗೋವಾ ಸೇರಿ ವಿವಿಧ ರಾಜ್ಯಗಳ ಜನರು ಭಾಗವಹಿಸಲಿದ್ದಾರೆ ಎಂದರು.