ಬೀದರ್ ನಲ್ಲೂ ಲೋಕಾಯುಕ್ತ ಬೇಟೆ: ಏಕಕಾಲಕ್ಕೆ ಆರು ಕಡೆ ದಾಳಿ
Team Udayavani, Apr 24, 2023, 11:23 AM IST
ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಸೋಮವಾರ ಬೆಳಂಬೆಳ್ಳಗ್ಗೆ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ಬೀದರ ಸಣ್ಣ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರ ಸುರೇಶ ಮೇದಾ ಮತ್ತು ಬಸವಕಲ್ಯಾಣ ತಾಲೂಕಿನ ಮುಡುಬಿ ಉಪ ತಹಶಿಲ್ದಾರ ವಿಜಯಕುಮಾರ್ ಸ್ವಾಮಿ ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿಗಳು. ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿ ಜಿಲ್ಲೆಯಾದ್ಯಂತ 6 ಕಡೆ ಏಕಕಾಲಕ್ಕೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಸುರೇಶ್ ಮೇದಾ ಅವರ ಬೀದರ್ ನ ಗುರುನಗರದ ನಿವಾಸ ಹಾಗೂ ನೌಬಾದ್ ನಲ್ಲಿರುವ ಕಚೇರಿ ಮೇಲೆ ಹಾಗೂ ಬೀದರ್ ನ ಆನಂದ ನಗರ, ಬಸವಕಲ್ಯಾಣದ ನಿವಾಸ, ಮುಡಬಿ ಪಟ್ಟಣದ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ಲೋಕಾಯುಕ್ತ ಎಸ್.ಪಿ ಎ.ಆರ್ ಕರ್ಲೂನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎನ್. ಎಂ ಓಲೇಕಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮುಂದುವರೆಸಿದ್ದಾರೆ.