ಭಾರಿ ವಾಹನ ನಿಯಂತ್ರಣಕ್ಕೆ ಅಳವಡಿಸಿದ್ದ ಕಮಾನು ಧರೆಗೆ
Team Udayavani, May 5, 2022, 5:17 PM IST
ಮುದಗಲ್ಲ: ಸ್ಥಳೀಯ ಪಟ್ಟಣದ ಪುರಸಭೆ ಆಡಳಿತ ಸಂಚಾರಿ ಸಮಸ್ಯೆ ನಿವಾರಣೆಗಾಗಿ ಭಾರೀ ವಾಹನಗಳನ್ನು ಪಟ್ಟಣದೊಳಗೆ ಪ್ರವೇಶಿಸದಂತೆ ತಡೆಯಲು ಮಸ್ಕಿ ಕ್ರಾಸ್ನ ರಸ್ತೆಯಲ್ಲಿ ಅಳವಡಿಸಿದ್ದ ಕಬ್ಬಿಣದ ಕಮಾನು ಜಖಂಗೊಂಡಿದೆ.
ಪಟ್ಟಣದ ಮಧ್ಯ ಭಾಗದಲ್ಲಿ ಅಂದರೆ ಪೊಲೀಸ್ ಠಾಣೆಯಿಂದ ಮಸ್ಕಿಗೆ ಹೊರಡುವ ರಸ್ತೆಗೆ ಒಂದು ಕಡೆ ಮತ್ತು ಪಟ್ಟಣಕ್ಕೆ ಪ್ರವೇಶವಾಗುವ ಮಸ್ಕಿ ರಸ್ತೆಗೆ ಒಂದು ಕಡೆ ಸೇರಿ ಒಟ್ಟು ಎರಡು ಕಡೆ ಭಾರಿ ಮತ್ತು ದೊಡ್ಡ ವಾಹನಗಳು ಒಳ ರಸ್ತೆಗೆ ಬಾರದೆ ಪೊಲೀಸ್ ಠಾಣೆ ಮುಂದಿನ ರಸ್ತೆಯಲ್ಲಿಯೇ ಸಂಚರಿಸುವಂತೆ ಸೂಚಿಸಿ ಆರು ತಿಂಗಳ ಹಿಂದೆಯೇ ಲಕ್ಷಾಂತರ ರೂ. ಖರ್ಚು ಮಾಡಿ ಪುರಸಭೆ ಕಬ್ಬಿಣದ ಕಮಾನು ಅಳವಡಿಸಿತ್ತು.
ಆದರೆ ವಾಹನ ಸವಾರರು ಪಟ್ಟಣದ ಮಧ್ಯ ಭಾಗದಲ್ಲಿ ಮತ್ತು ಮಸ್ಕಿ ಕ್ರಾಸ್ದಿಂದ ಮುದಗಲ್ಲಗೆ ಬರುವ ರಸ್ತೆಗೆ ಹಾಕಿದ ಕಮಾನಿಗೆ ಎರಡು ಮೂರು ಭಾರಿ ಜಖಂಗೊಳಿಸಿದ್ದರು. ಅದನ್ನು ಪುರಸಭೆ ಮತ್ತು ಪೊಲೀಸರು ಸೇರಿ ದುರಸ್ತಿ ಮಾಡಿಸಿದ್ದರು. ಆದರೆ ಈ ಬಾರಿ ಮಸ್ಕಿ ಕ್ರಾಸ್ದಿಂದ ಒಳ ಬರುವ ರಸ್ತೆಗೆ ಹಾಕಿದ ಕಮಾನು ಸಂಪೂರ್ಣ ಜಖಂ ಗೊಳಿಸಿದ್ದು ರಸ್ತೆಗೆ ತಾಗಿದೆ. ಇದರಿಂದ ಎರಡು ದಿನಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಮಸ್ಕಿ ರಸ್ತೆಯಲ್ಲಿನ ಕಮಾನು ಯಾರೋ ರಾತ್ರಿ ವೇಳೆ ಹೊಡೆದು ಹಾಕಿದ್ದಾರೆ. ಇಲ್ಲಿಂದ ಭಾರಿ ವಾಹನಗಳು ಬರುವುದರಿಂದ ಸಂಚಾರಿ ಸಮಸ್ಯೆ ಉಂಟಾಗಬಾರದು ಎಂಬ ಉದ್ದೇಶದಿಂದ ಅಳವಡಿಸಲಾಗಿದೆ. ದುರಸ್ತಿಗೊಳಿಸಿ ಪುನಃ ಕಮಾನು ಅಳವಡಿಸುತ್ತೇವೆ. -ಮರಿಲಿಂಗಪ್ಪ, ಪುರಸಭೆ ಮುಖ್ಯಾಧಿಕಾರಿ ಮುದಗಲ್ಲ