ಪ್ರತಿಭಟನೆಗೆ ಸೀಮಿತವಾದ ಬಂದ್
Team Udayavani, Sep 29, 2020, 3:49 PM IST
ಸಾಂದರ್ಭಿಕ ಚಿತ್ರ
ಬೀದರ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಮಸೂದೆ ಜಾರಿ ವಿರೋಧಿ ಸಿ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ಸೋಮವಾರ ಕರೆ ನೀಡಿದ್ದ “ಕರ್ನಾಟಕ ಬಂದ್’ಗೆ ಗಡಿ ಜಿಲ್ಲೆ ಬೀದರನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಕೇವಲ ಪ್ರತಿಭಟನೆಗೆ ಮಾತ್ರ ಸೀಮಿತವಾಯಿತು.
ಬೀದರ ನಗರ ಸೇರಿದಂತೆ ಜಿಲ್ಲಾದ್ಯಂತ ಬಂದ್ ಗೆ ಯಾವುದೇ ಸ್ಪಂದನೆ ಸಿಗಲಿಲ್ಲ. ನಗರದ ಗಾಂಧಿ ಗಂಜ್ನ ಅಡತ್, ಕೃಷಿ ಯಂತ್ರೋಪಕರಣ ಮತ್ತು ಔಷಧ ಅಂಗಡಿಗಳ ಮಾರುಕಟ್ಟೆ ಮಾತ್ರ ಬಂದ್ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದವು. ಇವನ್ನು ಹೊರತುಪಡಿಸಿ ಎಲ್ಲ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದವು. ಆಟೋ, ಬಸ್ ಸಂಚಾರ ಸಾಮಾನ್ಯವಾಗಿತ್ತು.
ನಗರದಲ್ಲಿ ಅಖೀಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಎಐಕೆಎಸ್, ಕೆಆರ್ಆರ್ಎಸ್, ಡಿಎಸ್ಎಸ್, ಕಲ್ಯಾಣ
ಕನಾಟಕ ರೈತ ಸಂಘದ, ಎಐಟಿಯುಸಿ, ಬಿಕೆಎಂಯು, ಎಐಟಿಐ ಹಾಗೂ ದಲಿತ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು. ನಗರದ ಅಂಬೇಡ್ಕರ್ ವೃತ್ತದಿಂದ ಭಗತಸಿಂಗ್ ವೃತ್ತ, ತಹಶೀಲ್ದಾರ್ ಕಚೇರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿ ಬಳಿಕ ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತ ಮೂಲಕ ಮನವಿ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಪ್ರತಿಭಟನಾಕಾರರು ಮಾತನಾಡಿ, ಭೂ ಸುಧಾರಣೆಗೆ ಕಾಯ್ದೆ ಜಾರಿ ಮೂಲಕ
ಸರ್ಕಾರ ರೈತ-ಕೃಷಿ ಕಾರ್ಮಿಕರ ಮತ್ತು ಭೂ ರಹಿತ ಬಡಜನರ ಪರವಾದ ಆಶಯಗಳನ್ನೇ ನಾಶ ಮಾಡಿ ಬಂಡವಾಳಶಾಹಿ ಮತ್ತು ಕಾರ್ಪೋರೇಟ್ ವಲಯಕ್ಕೆ ಅನುಕೂಲ ಮಾಡಿಕೊಡಲು ಹೊರಟಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸದಿದ್ದರೆ ಬಂಡವಾಳಶಾಹಿಗಳ ಕಪ್ಪು ಹಣದ ಆಮಿಷಕ್ಕೆ ಸಿಲುಕಿ ತಮ್ಮ ನೆಲದಲ್ಲಿ ತಾವೇ ತಬ್ಬಲಿಗಳಾಗಬೇಕಾದ ದುಸ್ಥಿತಿ ಭೂಮಿ ನಂಬಿದವರಿಗೆ ಬರುವುದು ನಿಶ್ಚಿತ ಎಂದು ಎಚ್ಚರಿಸಿದರು.
ಖಾಸಗಿ ಸಂಘ-ಸಂಸ್ಥೆಗಳಿಗೆ ದೀರ್ಘ ಕಾಲದವರೆಗೆ ಗುತ್ತಿಗೆಗೆ ನೀಡಲಾಗಿದ್ದ ಜಮೀನನ್ನು ಸಹ ಗುತ್ತಿಗೆದಾರರಿಗೆ ಪರಭಾರೆ ಮಾಡಲು ಸರ್ಕಾರನಿರ್ಧರಿಸಿದೆ. ಈ ರೀತಿ ಪ್ರಜಾಸತ್ತಾತ್ಮಕವಲ್ಲದ ವಿಧಾನಗಳಲ್ಲಿ ನೈಸರ್ಗಿಕ ಸಂಪನ್ಮೂಲವನ್ನು ಕೆಲವು ಶ್ರೀಮಂತರು, ಬಂಡವಾಳಶಾಹಿಗಳ ಒಡೆತನಕ್ಕೆಒಪ್ಪಿಸುವುದು ಸಮಾನತೆ ತತ್ವಕ್ಕೆ ವಿರುದ್ಧವಾದುದು. ಆದ್ದರಿಂದ ಇಂತಹ ಅಮಾನುಷ ಆದೇಶಗಳಿಂದ ಜನರಿಗೆ ಉಳಿಗಾಲವಿಲ್ಲ ಎಂದರು.
ಬಿಜೆಪಿ ಸರ್ಕಾರದ ಈ ಅನೈತಿಕ ನಿರ್ಧಾರದಿಂದ ಭೂ-ಒಡೆತನದ ಕನಸು ಕಂಡ ಲಕ್ಷಾಂತರ ಭೂ ರಹಿತರ ಕೃಷಿ ಕಾರ್ಮಿಕರ ಆಸೆಗೆ ಬಿಜೆಪಿ ಸರ್ಕಾರ ಕೊಳ್ಳಿ ಇಟ್ಟುಶಾಶ್ವತವಾಗಿ ಅವರನ್ನು ಭೂಹೀನರನ್ನಾಗಿಸುತ್ತಿದೆ. ಹಾಗಾಗಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ಅಗ್ರಹಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಸ್ವಾಮಿ, ಎಐಕೆಎಸ್ ಉಪಾಧ್ಯಕ್ಷ ಬಾಬುರಾವ್ ಹೊನ್ನಾ, ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಪ್ರಮುಖರಾದ ನಜೀರ್ ಅಹ್ಮದ್, ಖಾಸೀಮ್ ಅಲಿ, ಅರ್.ಪಿ. ರಾಜಾ, ರವಿರಾಜ್, ದಯಾನಂದ ಸ್ವಾಮಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್