ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ
Team Udayavani, Dec 3, 2021, 4:10 PM IST
ಸಿಂಧನೂರು: ಮರಳು ಅಕ್ರಮ ತಡೆಯಲು ಹೋದ ಸರಕಾರಿ ನೌಕರರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ವ್ಯಕಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಸರಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಗುರುವಾರ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಮಾತನಾಡಿ, ಬಳ್ಳಾರಿ ತಾಲೂಕಿನಲ್ಲಿ ಕಂದಾಯ ನಿರೀಕ್ಷಕ ವೆಂಕಟಸ್ವಾಮಿ ಅವರು, ತೋಳಮಾಮಿಡಿ ಗ್ರಾಮದಲ್ಲಿ ಮರಳು ಅಕ್ರಮ ತಡೆಯಲು ಹೋದಾಗ ಒಂದು ಟ್ರ್ಯಾಕ್ಟರ್ ಹಿಡಿದಿದ್ದು, ಉದ್ರಿಕ್ತ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.1ರಂದು ಬಳ್ಳಾರಿ ನಗರದಲ್ಲಿನ ಕಂದಾಯ ನಿರೀಕ್ಷಕರ ಮನೆಗೆ ನುಗ್ಗಿದ 20 ಜನರು ಮಾರಾಕಸ್ತ್ರಗಳಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಸರಕಾರಿ ನೌಕರರಲ್ಲಿ ಭಯ ಸೃಷ್ಟಿಯಾಗಿದೆ. ನೌಕರರ ಕುಟುಂಬದ ಮೇಲೆ ಹತ್ಯೆಗೆ ಯತ್ನಿಸಿದ ಘಟನೆ ಅಮಾನವೀಯ. ಸರಕಾರ ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಬಂಧನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಶಿರಸ್ತೇದಾರ್ ಸಾದಿಕ್ ಅವರು ಮನವಿ ಸ್ವೀಕರಿಸಿ, ಸರಕಾರಕ್ಕೆ ರವಾನಿಸುವುದಾಗಿ ಭರವಸೆ ನೀಡಿದರು. ಸರಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಆನಂದ ಮೋಹನ, ರಾಜ್ಯ ಪರಿಷತ್ ಸದಸ್ಯ ಶಶಿಧರ ಹಳ್ಳಿ, ಖಜಾಂಚಿ ಹನುಮಂತಪ್ಪ ನಾಯಕ, ಕಾರ್ಯದರ್ಶಿ ಭರತ್ ಕುಮಾರ್, ಹಿರಿಯ ಮುಖಂಡ ಶಾಂತಕುಮಾರ್, ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷ ಲಿಂಗಪ್ಪ, ರವಿಕುಮಾರ ಹಿರೇಮಠ, ಅರುಣ್, ಫಸೀವುಲ್ಲಾ, ಎಫ್ಡಿಸಿ ಕೃಷ್ಣ ಸೇರಿದಂತೆ ಇತರರು ಇದ್ದರು.