ಕಾರಂಜಾ ಸಂತ್ರಸ್ತರ ಬೇಡಿಕೆಗೆ ಸ್ಪಂದಿಸಿ
Team Udayavani, Mar 26, 2022, 3:06 PM IST
ಬೀದರ: ಭೂಮಿಗೆ ವೈಜ್ಞಾನಿಕ ಪರಿಹಾರ ಸೇರಿದಂತೆ ಕಾರಂಜಾ ಸಂತ್ರಸ್ತರ ಬೇಡಿಕೆಗಳಿಗೆ ಸ್ಪಂದಿಸುವಂತೆ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಬೆಂಗಳೂರು ಚಲೋ ಜಾಥಾ ನಡೆಸಿರುವ ಸಮಿತಿಯ ಪ್ರಮುಖರು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗುಂಗೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಬೀದರ ವಿಶೇಷ ಭೂಸ್ವಾಧೀನ ಕಚೇರಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ಕೊರತೆಯಿಂದ ಕಾರಂಜಾ ಸಂತ್ರಸ್ತರ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಬೇಜವಾಬ್ದಾರಿತನದ ವರ್ತನೆ ತೋರಲಾಗುತ್ತಿದೆ. ಇದರಿಂದ ಹೆಚ್ಚುವರಿ ಜಮೀನು ಭೂಸ್ವಾಧೀನ ಪ್ರಕ್ರಿಯೆ ಸೇರಿ ಇನ್ನಿತರ ಕೆಲಸಗಳು ವಿಳಂಬವಾಗುತ್ತಿವೆ ಎಂದು ಗಮನ ಸೆಳೆದರು.
ಸಮಿತಿಯ ಸಮಸ್ಯೆಗಳನ್ನು ಆಲಿಸಿದ ವ್ಯವಸ್ಥಾಪಕ ನಿರ್ದೇಶಕರು, ಸಂತ್ರಸ್ತರ ಸಮಸ್ಯೆಗಳ ಕುರಿತಂತೆ ಏಪ್ರಿಲ್ ಮೊದಲ ವಾರದಲ್ಲಿ ಬೀದರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಚರ್ಚಿಸಿ, ಬಗೆಹರಿಸುವುದಾಗಿ ಭರವಸೆ ನೀಡಿದರು.
ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೊಚಕನಳ್ಳಿ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ ಹಚ್ಚಿ, ಸೂರ್ಯಕಾಂತ, ಮಲಶೆಟ್ಟೆಪ್ಪ, ಲಕ್ಷ್ಮೀಬಾಯಿ, ಪ್ರಭಾವತಿ, ಮಲ್ಲಮ್ಮ, ಗಂಗೂಬಾಯಿ, ಚನ್ನಬಸಯ್ಯ ಸ್ವಾಮಿ ಡಾಕುಳಗಿ, ಮಹೇಶ ಇನ್ನಿತರರಿದ್ದರು.