ಗಡಿಯಲ್ಲಿ ಕನ್ನಡ ಉಳಿಸಿ-ಬೆಳೆಸಲು ಪ್ರಯತ್ನಿಸಿ
Team Udayavani, Apr 6, 2022, 11:15 AM IST
ಬೀದರ: ಗಡಿ ಭಾಗದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಂಸ್ಕಾರ ಕಣ್ಮರೆಯಾಗುತ್ತಿದೆ. ಅದನ್ನು ಉಳಿಸಿ-ಬೆಳೆಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಬುಡಾ ಅಧ್ಯಕ್ಷ ಬಾಬು ವಾಲಿ ಹೇಳಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ನೂಪುರ ನೃತ್ಯ ಅಕಾಡೆಮಿ, ಜನಧ್ವನಿ ಟ್ರಸ್ಟ್ ಹಾಗೂ ಗಡಿ ಅಭಿವೃದ್ಧಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗಡಿ ಸಮಸ್ಯೆ ಹಾಗೂ ಭಾಷಾಭಿವೃದ್ಧಿ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿಯಲ್ಲಿ ಅನೇಕ ಸಮಸ್ಯೆಗಳಿವೆ. ರಸ್ತೆ, ನೀರು, ಚರಂಡಿ, ಕನ್ನಡ ಶಾಲೆಗಳು ಹಾಗೂ ಶಿಕ್ಷಕರ ಕೊರತೆ ಇವುಗಳನ್ನು ನೀಗಿಸಲು ಸ್ಥಳೀಯ ಸಂಘ-ಸಂಸ್ಥೆಗಳು ತಮ್ಮ ಹೋರಾಟದ ಮೂಲಕ ಸಮಸ್ಯೆ ನಿವಾರಿಸಲು ಪ್ರಯತ್ನಿಸಬೇಕು. ಜೊತೆಗೆ ತಮ್ಮ ಸಾಮಾಜಿಕ ಜವಾಬ್ದಾರಿ ಮೂಲಕ ಕನ್ನಡ ಭಾಷೆ ಬೆಳೆಸಬೇಕು ಎಂದರು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ಕೇವಲ ಗಡಿ ಸಮಸ್ಯೆ ಕುರಿತು ಮಾತನಾಡುವುದು, ವಿಚಾರ ಸಂಕಿರಣ ಮಾಡುವುದರಿಂದ ಬಗೆಹರಿಯುವುದಿಲ್ಲ. ಬದಲಾಗಿ ಅದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಬೇಕಾಗಿದೆ ಎಂದರು.
ಸಂಘದ ಅಧ್ಯಕ್ಷ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಗಡಿಯಲ್ಲಿ ಎಲ್ಲ ಭಾಷಾ ಮಾಧ್ಯಮಕ್ಕೂ ಒಬ್ಬೊಬ್ಬ ಕನ್ನಡ ಶಿಕ್ಷಕ-ಶಿಕ್ಷಕಿಯರನ್ನು ನೇಮಕ ಮಾಡಬೇಕು. ಶಿಕ್ಷಕರ ಜೊತೆಗೆ ಪಾಲಕರು ಕೂಡ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಕನಿಷ್ಟ 1ರಿಂದ 10ನೇ ತರಗತಿವರೆಗೆ ಕಲಿಸಲು ಶಪಥ ಮಾಡಬೇಕು. ಹೀಗಾದಾಗ ಮಾತ್ರ ಗಡಿಯಲ್ಲಿ ಕನ್ನಡ ಉಳಿಸಲು ಸಾಧ್ಯ ಎಂದರು.
ಅಕಾಡೆಮಿ ಅಧ್ಯಕ್ಷೆ ಉಷಾ ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಸಹಾರ್ದ ಸಂಸ್ಥೆ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು, ಜಾನಪದ ಪರಿಷತ್ತಿನ ಜಿಲ್ಲಾ ಸಂಯೋಜಕ ಡಾ| ರಾಜಕುಮಾರ ಹೆಬ್ಟಾಳೆ, ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ಹಿರಿಯ ಸಾಹಿತಿ ಡಾ| ಎಂ.ಜಿ. ದೇಶಪಾಂಡೆ, ಪ್ರಭಾಕರ ಎ.ಎಸ್ ಇತರರಿದ್ದರು. ಹರ್ಷವರ್ಧನ ಸ್ವಾಮಿ ನಿರೂಪಿಸಿದರು. ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು. ರಾಘವೇಂದ್ರ ಸ್ವಾಮಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಕಲಾವಿದರಾದ ದೇವಿದಾಸ ಚಿಮಕೋಡೆ, ಕಾಶಿನಾಥ ಪಾಟೀಲ, ಶರಣಪ್ಪ ಪಾಟಿಲ, ಮಹಾರುದ್ರಪ್ಪ ಗ್ಯಾನಪನೋರ್, ಮಹಾದೇವಿ ಸಂಗಡಿಗರಿಂದ ಜಾನಪದ ಗಾಯನ, ನೂಪುರ ನೃತ್ಯ ಅಕಾಡೆಮಿಯಿಂದ ಜಾನಪದ ನೃತ್ಯ ಕಾರ್ಯಕ್ರಮ ಜರುಗಿದವು. ನಂತರ ನಡೆದ ಕವಿಗೋಷ್ಠಿಯಲ್ಲಿ ಅನೇಕರು ಸ್ವರಚಿತ ಕವನ ವಾಚನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್