ಯಲಗೂರ ದೇವಸ್ಥಾನ ಬಂದ್
alamatti-yalagura-temple-band
Team Udayavani, Mar 25, 2020, 5:33 PM IST
ಆಲಮಟ್ಟಿ: ದೇಶದೆಲ್ಲೆಡೆ ನೊವೆಲ್ ಕೊರೊನಾ ವೈರಸ್ ಹಾವಳಿಯಿಂದ ಜನನಿಬಿಡ ಪ್ರದೇಶ ಪಟ್ಟಣದಲ್ಲಿ ಜನರಿಲ್ಲದೇ ಬಿಕೋ ಎನ್ನುವಂತಾಗಿದೆ. ಪ್ರತಿ ಅಮವಾಸ್ಯೆ ಹಾಗೂ ವಿಶೇಷ ದಿನಗಳಂದು ಮತ್ತು ಯುಗಾದಿ, ದೀಪಾವಳಿ ಅಮವಾಸ್ಯೆಗಳಲ್ಲಿ ಕೃಷ್ಣಾ ನದಿ ಸ್ನಾನಕ್ಕೆ ನೂರಾರು ಗ್ರಾಮಗಳಿಂದ ದೇವರ ಪಲ್ಲಕ್ಕಿಗಳೊಂದಿಗೆ ಸಾವಿರಾರು ಭಕ್ತರು ಆಗಮಿಸಿ ಕೃಷ್ಣೆಯಲ್ಲಿ ಮಿಂದು ಪಲ್ಲಕ್ಕಿಗಳನ್ನೂ ಶುಚಿಮಾಡಿಕೊಂಡು ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದರು. ಆದರೆ ಈ ಬಾರಿ ಕೊರೋನಾ (ಕೋವಿಡ್-19) ವೈರಸ್ ಹಾವಳಿಯಿಂದ ಯುಗಾದಿ ಹಬ್ಬವು ಕಳೆಗುಂದುವಂತಾಯಿತು.
ಸುಕ್ಷೇತ್ರಗಳಾಗಿರುವ ಇಲ್ಲಿನ ಚಂದ್ರಮ್ಮ ದೇವಿ ದೇವಸ್ಥಾನ, ಸಿದ್ದಲಿಂಗೇಶ್ವರ ತಪೋ ಮಂದಿರ, ಯಲಗೂರಿನ ಯಲಗೂರೇಶ್ವರ ದೇವಸ್ಥಾನ, ಯಲ್ಲಮ್ಮನಬೂದಿಹಾಳದ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ, ಗಣಿ ಯಲ್ಲಮ್ಮದೇವಿ, ವಂದಾಲದ ಬನಶಂಕರಿದೇವಿ ದೇವಸ್ಥಾನಗಳು ಸೇರಿದಂತೆ ಸುತ್ತಲಿನ ಹಲವಾರು ಸುಕ್ಷೇತ್ರಗಳಿಗೆ ನಾಡಿನ ವಿವಿಧ ಭಾಗಗಳಿಂದ ಹಾಗೂ ನೆರೆಯ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದರು.
ಮಹಾರಾಷ್ಟ್ರ ಹಾಗೂ ನೆರೆ ಜಿಲ್ಲೆಗಳಾಗಿರುವ ಬೆಳಗಾವಿ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳು ಕೊರೊನಾ ಹಾವಳಿಯಿಂದ ಜಿಲ್ಲೆಯ ಗಡಿಭಾಗ ಬಂದ್ ಮಾಡಿರುವುದಲ್ಲದೇ ಹೊರಜಿಲ್ಲೆ ಜನರು ಜಿಲ್ಲೆಗೆ ಆಗಮಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದಲ್ಲದೇ ಎಲ್ಲ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಮುಗಿಸಿದ ನಂತರ ಎಲ್ಲ ದೇವಸ್ಥಾನಗಳನ್ನು ಬಂದ್ ಮಾಡಿ ಭಕ್ತರ ಪ್ರವೇಶ ನಿಷೇಧಿಸಲಾಯಿತು.