ಸಿಎಂ ಆಗಬೇಕೆಂದು ನನ್ನ ಹಣೆ ಬರಹದಲ್ಲಿ ಬರೆದಿದ್ದರೆ ತಪ್ಪಿಸುವವರು ಯಾರು: ಯತ್ನಾಳ್ ಹೊಸ ಬಾಂಬ್
ರಾಜ್ಯದಲ್ಲಿ ಮುಂದಿನ ಸಂಕ್ರಾಂತಿ ಬಳಿಕ ಭಾರಿ ಬದಲಾವಣೆ ಆಗುವುದಿದೆ
Team Udayavani, Dec 25, 2020, 4:29 PM IST
ವಿಜಯಪುರ: ರಾಜ್ಯದಲ್ಲಿ ಮುಂದಿನ ಸಂಕ್ರಾಂತಿ ಬಳಿಕ ಭಾರಿ ಬದಲಾವಣೆ ಆಗುವುದಿದೆ. ನನಗೆ ಮಂತ್ರಿ ಆಗೋ ಆಸೆ ಇಲ್ಲ, ಮುಖ್ಯಮಂತ್ರಿ ಆಗೋದು ನನ್ನ ಹಣೆ ಬರಹದಲ್ಲಿ ಬರೆದಿದ್ದರೆ ತಪ್ಪಿಸುವವರು ಯಾರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮೋತ್ಸವದ ಅಂಗವಾಗಿ ವಾಜಪೇಯಿ ಮಾರ್ಗ ಹಾಗೂ ಪುತ್ಥಳಿ ಲೋಕಾರ್ಪಣೆ ಸಮಾರಂಭದ ಬಳಿಕ ಪತ್ರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬುದು ನನಗಂತೂ ಖಚಿತ ಮಾಹಿತಿ ಇಲ್ಲ. ನೀವು ಮಾಧ್ಯಮದವರೇ ಅದನ್ನು ಎಬ್ಬಿಸಿದ್ದೀರಿ, ನೀವು ಯಾವಾಗ ಯಾರ ಪರವಾಗಿ ಹೊಡಿತಿರೋ ಗೊತ್ತಿಲ್ಲ ಎಂದು ಛೇಡಿಸಿದರು.
ಸದ್ಯ ಎಲ್ಲವೂ ನಿಗೂಢವಾಗಿದ್ದು, ಮಕರ ಸಂಕ್ರಮಣದ ಬಳಿಕ ಐತಿಹಾಸಿಕ ಬದಲಾವಣೆ ಆಗಲಿವೆ ಎಂದಷ್ಟೇ ಹೇಳಬಲ್ಲೆ. ಸಂಕ್ರಮಣದ ಬಳಿಕ ಉತ್ತರಾಯಣ ಕಾಲ ಆರಂಭವಾಗಲಿದೆ. ಸೂರ್ಯ ಉತ್ತರ ಪಥದಿಂದ ಬರುತ್ತಾನೆ, ಈ ವೇಳೆ ಉತ್ತರ ಕರ್ನಾಟಕಕ್ಕೆ ಉತ್ತರಾಯಣ ಆಗಲಿದೆ ಎಂದರು.
ಇದನ್ನೂ ಓದಿ:ರಾತ್ರಿ ಕರ್ಫ್ಯೂನಿರ್ಧಾರ ಮಾಡಿದ್ದು ಆ ಸಚಿವ, ಅವರಿಗೇನಾದರೂ ಪರಿಜ್ಞಾನ ಇದೆಯೇ? ಡಿಕೆಶಿ ತರಾಟೆ
ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಎಂಬುದನ್ನು ನಾನು ಹೇಳುವುದಿಲ್ಲ, ನಾನು ಅದರಲ್ಲಿ ಆಸಕ್ತಿ ಹೊಂದಿಲ್ಲ. ದಯವಿಟ್ಟು ಯತ್ನಾಳರ ಹೆಸರು ಇದೆ ಎಂದು ಮಾಧ್ಯಮದವರು ಸುದ್ದಿ ಮಾಡಬೇಡಿ. ನಾನು ಮಂತ್ರಿಯಾಗುವುದಿಲ್ಲ, ಮಂತ್ರಿ ಆಗುವ ಆಸಕ್ತಿಯೂ ನನಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ಮತ್ತೊಂದೆಡೆ ವಿಜಯಪುರ ಜಿಲ್ಲೆಗೆ ಇಷ್ಟು ದಿನ ಆದ ಅನ್ಯಾಯಕ್ಕೆ ನ್ಯಾಯ ಕೊಡುವ ಕೆಲಸ ಕೇಂದ್ರ ಮಾಡಲಿದೆ ಎಂದು ತಾವು ಸಿಎಂ ಆಗುವ ಕನಸು ಮತ್ತೆ ಬಿಚ್ಚಿಟ್ಟರು.
ಮುಂದೆ ಯಾರ ಹಣೆಬರಹದಲ್ಲಿ ಯಾರಿಗೆ ಏನು ಬರೆದಿದೆ ಎಂದು ಯಾರಿಗೂ ಗೊತ್ತಿಲ್ಲ. ನನ್ನ ಹಣೆ ಬರಹದಲ್ಲಿ ಬರೆದಿದ್ದರೆ ನಾನೂ ಮುಖ್ಯಮಂತ್ರಿ ಆಗಬಹುದು, ಆಗಬಾರದು ಅಂತೆಲ್ಲಿದೆ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು.
ಕೇಂದ್ರ ಹೈಕಮಾಂಡ್ ನೂರಕ್ಕೆ ನೂರರಷ್ಟು ಒಳ್ಳೆಯ ನಿರ್ಣಯ ತೆಗೆದುಕೊಳ್ಳುತ್ತೆ ಎಂಬ ವಿಶ್ವಾಸವಿದೆ ಎಂದು ಸಂಕ್ರಾಂತಿ ಬಳಿಕ ತಾವು ಮುಖ್ಯಮಂತ್ರಿ ಆದರೂ ಅಚ್ಚರಿ ಇಲ್ಲ ಎಂಬಂತೆ ಮಾರ್ಮಿಕವಾಗಿ ಮಾತನಾಡಿದರು.
ರಿಮೋಟ್ ನಿಮ್ಮ ಬಳಿಯೇ (ಮಾಧ್ಯಮಗಳ) ಇವೆ, ಯಾವಾಗ ಯಾರನ್ನ ಹೊಗಳುತ್ತೀರೋ, ಯಾವಾಗ ಯಾರನ್ನ ಮಣ್ಣಲ್ಲಿ ಇಡುತ್ತೀರೋ ಗೊತ್ತಿಲ್ಲ ಎಂದು ಪತ್ರಕರ್ತರನ್ನು ಕುಟುಕಿದರು.