ವಿಜಯಪುರ: ತೋಟದ ಬಾವಿಯಲ್ಲಿ ಅಡಗಿದ್ದ ಬೃಹತ್ ಮೊಸಳೆ ಸೆರೆ
Team Udayavani, May 1, 2021, 8:43 PM IST
ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ತಾಲೂಕು ನಾಲತವಾಡ ಗ್ರಾಮದಲ್ಲಿ ತೋಟದ ಬಾವಿಯಲ್ಲಿ ಅಡಗಿದ್ದ ಬೃಹತ್ ಮೊಸಳೆಯನ್ನು ಸೆರೆ ಹಿಡಿದು ಕೃಷ್ಣಾ ನದಿಗೆ ಬಿಟ್ಟಿರುವ ಘಟನೆ ಜರುಗಿದೆ.
ನಾಲತವಾಡ ಪಟ್ಟಣದ ರಾಯಪ್ಪ ವಾಲಿ ಎಂಬುವರ ತೋಟದ ಬಾವಿಯಲ್ಲಿ ಕಳೆದ ಹಲವು ದಿನಗಳ ಹಿಂದೆ ಬಂದ ಬೃಹತ್ ಮೊಸಳೆ ಅಡಗಿ ಕುಳಿತಿತ್ತು.ಇದರಿಂದ ಜಮೀನಿನ ರೈತ ಮಾತ್ರವಲ್ಲದೇ ಸುತ್ತಲಿನ ರೈತರೂ ಆತಂಕದಲ್ಲಿದ್ದರು. ಅಲ್ಲದೆ ಈ ಪ್ರದೇಶದ ಜಮೀನುಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂಜರಿಯುತ್ತಿದ್ದರು.
ಇದರಿಂದ ಕಂಗಾಲಾದ ರೈತರು ಮೊಸಳೆಯನ್ನು ಬಾವಿಯಿಂದ ಹೊರಹಾಕಲು ಮೊಸಳೆ ಸೆರೆ ಹಿಡಿಯುವಲ್ಲಿ ನಿಪುಣರ ಹುಡುಕಾಟಕ್ಕೆ ಮುಂದಾಗಿದ್ದರು.
ಇದನ್ನೂ ಓದಿ:ಕೋವಿಡ್ ಅಬ್ಬರ: ಹೂವು, ಹಣ್ಣು ,ತರಕಾರಿ ವ್ಯಾಪಾರಿಗಳು ಕಂಗಾಲು
ಈ ಹಂತದಲ್ಲಿ ಮೊಸಳೆ ಸೆರೆಹಿಡಿಯುವ ಪರಿಣಿತ ನಿಡಗುಂದಿ ಪಟ್ಟಣದ ನಾಗೇಶ ವಡ್ಡರ ನೇತೃತ್ವದ ತಂಡದವರು ಸ್ಥಳಕ್ಕೆ ಆಗಮಿಸಿ ಬೃಹತ್ ಮೊಸಳೆಯನ್ನು ಬಾವಿಯಿಂದ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಬಾವಿಯ ನೀರನ್ನು ಖಾಲಿ ಮಾಡಿ, ಬೃಹತ್ ಮೊಸಳೆಯನ್ನು ಸೆರೆ ಹಿಡಿದ ಯುವಕರ ತಂಡ, ನಂತರ ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಮೊಸಳೆಯನ್ನು ಸುರಕ್ಷಿತವಾಗಿ ಕೃಷ್ಣಾ ನದಿಗೆ ಬಿಟ್ಟು ಬಂದಿದ್ದಾರೆ.
ಸತತ ಐದು ಗಂಟೆ ನಡೆದ ಮೊಸಳೆ ಸೆರೆ ಕಾರ್ಯಾಚರಣೆ ಸಂದರ್ಭದಲ್ಲಿ ಅರಣ್ಯ ಇಲಾಖೆ, ನಾಲತವಾಡ ಹೂರ ಠಾಣೆ ಪೋಲಿಸ್ ಸಿಬ್ಬಂದಿ ಹಾಗೂ ಸ್ಥಳೀಯರು ಸಹಕಾರ ನೀಡಿದರು.