ಆತಂಕ ಮೂಡಿಸಿದೆ 3ನೇ ಅಲೆ ಭೀತಿ
ಕೋವಿಡ್ಗೆ 2 ವರ್ಷದ ಮಗುಬಲಿ; ಜಿಲ್ಲೆಯಲ್ಲಿ ಚಿಕ್ಕಮಕ್ಕಳ 20 ಖಾಸಗಿ ಆಸ್ಪತ್ರೆ; 40 ವೈದ್ಯರ ಲಭ್ಯತೆ
Team Udayavani, Sep 1, 2021, 7:47 PM IST
ವಿಜಯಪುರ: ವಿಶ್ವವನ್ನು ತಲ್ಲಣಗೊಳಿಸಿರುವ ಕೋವಿಡ್-19 ಸಾಂಕ್ರಾಮಿಕ ಕೋವಿಡ್ ಸೋಂಕು ಜಿಲ್ಲೆಯಲ್ಲಿ ಮೊದಲ ಬಾರಿಗೆ ಮಗುವೊಂದನ್ನು ಬಲಿ ಪಡೆದಿದೆ. ಇದರಿಂದ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ತಜ್ಞರ ವರದಿ ಹಿನ್ನೆಲೆ ಸಂಭವನೀಯ ಕೋವಿಡ್ ಮೂರನೇ ಅಲೆ ಗಂಭೀರತೆ ಕುರಿತು ಆತಂಕ ಹೆಚ್ಚಿದ್ದು ಜಿಲ್ಲಾಡಳಿತ ಪರಿಸ್ಥಿತಿ ಎದುರಿಸಲು ಅಗತ್ಯ ಸಿದ್ಧತೆಗೆ ಮುಂದಾಗಿದೆ.
ನಗರದ ಶಹಾಪೇಟೆ ನಿವಾಸಿಯಾಗಿದ್ದ 2 ವರ್ಷ ಹೆಣ್ಣುಮಗು ತೀವ್ರ ಅನಾರೋಗ್ಯದಿಂದಾಗಿ ಚಿಕಿತ್ಸೆಗಾಗಿ ಆ. 14ರಂದು ನಗರದ ಖಾಸಗಿ ಆಸ್ಪತ್ರೆ ಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲೆ ಮೃತಪಟ್ಟಿದ್ದಳು. ಮೃತ ಮಗುವಿಗೆ ಕೋವಿಡ್ ಸೋಂಕು ಇರುವುದು ಆ. 24ರಂದು ದೃಢಪಟ್ಟಿದ್ದು, ಜಿಲ್ಲೆಯ ಕೋವಿಡ್ಗೆ ಬಲಿಯಾದ ಒಟ್ಟು ಸಾವಿನ ಸಂಖ್ಯೆಯ 493 ಪ್ರಕರಣದಲ್ಲಿ ಈ ಮಗುವಿನ ಸಾವು ಮಕ್ಕಳ ಸಾವಿನ ಮೊದಲ ಪ್ರಕರಣ ಎನಿಸಿದೆ.ಮತ್ತೊಂದೆಡೆ ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಎಂದಿರುವುದು ಈ ಸಾವು ಹೆಚ್ಚು ಆತಂಕ ಸೃ ಷ್ಟಿಸಿದೆ.
ಜಿಲ್ಲೆಯಲ್ಲಿ ಕೋವಿಡ್ನ ಮೊದಲ ಹಾಗೂ ಎರಡನೇ ಅಲೆಯಲ್ಲಿ ವರೆಗೆ 36,211 ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ ಮೊದಲ ಅಲೆಯಲ್ಲಿ
1681 ಮಕ್ಕಳಿಗೆ ಹಾಗೂ ಎರಡನೇ ಅಲೆಯಲ್ಲಿ 2212 ಮಕ್ಕಳು ಸೇರಿದಂತೆ 3892 ಮಕ್ಕಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. 493 ಜನರು ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ಇದರಲ್ಲಿ ಮೃತ ಸಂಖ್ಯೆ 492ನೇ ಸಂಖ್ಯೆಯೇ ಸೋಂಕಿತ ಮಗುವಿನ ಮೊದಲ ಸಾವಿನ ಪ್ರಕರಣ ಎನಿಸಿದೆ.
ಇದನ್ನೂ ಓದಿ:ಬಾಲಿವುಡ್ ಡ್ರಗ್ ಪ್ರಕರಣ : ನಟ ಅರ್ಮಾನ್ಗೆ 14 ದಿನ ನ್ಯಾಯಾಂಗ ಬಂಧನ
ಇದರಿಂದಾಗಿ ಜಿಲ್ಲಾಡಳಿತ ಕೋವಿಡ್ ಸಂಭಭನೀಯ ಮೂರನೇಅಲೆಯನ್ನು ಎದುರಿಸಲು ಅತ್ಯಂತ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಜಿಲ್ಲಾಧಿಕಾರಿ ಸುನೀಲ ಕುಮಾರ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ವೈದ್ಯರ ಅದರಲ್ಲೂ ಚಿಕ್ಕಮಕ್ಕಳ ವೈದ್ಯರ ಹಾಗೂ ಮುಖ್ಯಸ್ಥರ ಸಭೆ ನಡೆಸಿ, ಸಂಭವನೀಯ ಪರಿಸ್ಥಿತಿ ಎದುರಿಸುವಲ್ಲಿ ಸಮರ ಸಿದ್ಧತೆಯಲ್ಲಿ ಇರುವಂತೆ ಸೂಚಿಸಿದ್ದಾರೆ. ಅಲ್ಲದೇ ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಅಗತ್ಯ ಸಿದ್ಧತೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಜಿಲ್ಲೆಯಾದ್ಯಂತ ಚಿಕ್ಕ ಮಕ್ಕಳಿಗೆ ಕೋವಿಡ್ ಸೋಂಕು ದೃಢಪಟ್ಟಲ್ಲಿ ತಕ್ಷಣ ಚಿಕಿತ್ಸೆ ನೀಡಲು ಖಾಸಗಿ ವಲಯದ 21 ಆಸ್ಪತ್ರೆಗಳಲ್ಲಿ 781 ಹಾಸಿಗೆ
ಮೀಸಲಿರಿಸಿವೆ. ಇದರಲ್ಲಿ 475 ಸಾಮಾನ್ಯ ಹಾಸಿಗೆ ಇದ್ದು, ಉಳಿದವು ಐಸಿಯು, ವೆಂಟಿಲೇಟರ್ ಹೀಗೆ ವಿಶೇಷ ಸೌಲಭ್ಯ ಹೊಂದಿವೆ. ಇದಲ್ಲದೇ ಜಿಲ್ಲೆಯಲ್ಲಿ ಚಿಕ್ಕಮಕ್ಕಳ ತಜ್ಞ 40 ವೈದ್ಯರನ್ನೂ ಗುರುತಿಸಲಾಗಿದೆ.
ಜಿಲ್ಲೆಯಲ್ಲಿರುವ ಸರ್ಕಾರಿ ವ್ಯವಸ್ಥೆಯ 9 ಆಸ್ಪತ್ರೆಗಳಲ್ಲಿ 82 ಹಾಸಿಗೆ ಲಭ್ಯ ಇದ್ದು, ಸಾಮಾನ್ಯ 44 ಹಾಸಿಗೆ ಹೊರತು ಪಡಿಸಿ ಉಳಿದೆಲ್ಲವೂ ವಿವಿಧ ಸೌಲಭ್ಯಗಳ ಐಸಿಯು ಹಾಸಿಗೆಗಳನ್ನು ಮಕ್ಕಳ ಚಿಕಿತ್ಸೆಗೆ ಮೀಸಲಿರಿಸಿದೆ.
ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಮಕ್ಕಳಿಗೆ 50 ಹಾಸಿಗೆಯನ್ನು ಮೀಸಲಿರಿಸಿದ್ದು, ಇದರಲ್ಲಿ 10 ಹಾಸಿಗೆ ಐಸಿಯು ಸೌಲಭ್ಯ ಹೊಂದಿವೆ. ಇನ್ನು ಚಿಕ್ಕಮಕ್ಕಳ 6 ತಜ್ಞ ವೈದ್ಯರು ಸೇವೆಗೆ ಲಭ್ಯ ಇದ್ದಾರೆ. ಇನ್ನು ಮೂಲ ತಾಲೂಕುಗಳಲ್ಲಿ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಮುದ್ದೇಬಿಹಾಳ 58 ಹಾಸಿಗೆಯಲ್ಲಿ 20 ಹಾಸಿಗೆ ಮಕ್ಕಳಿಗೆ ಮೀಸಲಿರಿಸಿದ್ದು, ಬಸವನಬಾಗೇವಾಡಿ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿರುವ 50 ಹಾಸಿಗೆಯಲ್ಲಿ ಐಸಿಯು ಸೌಲಭ್ಯ ಸೇರಿದಂತೆ10 ಹಾಸಿಗೆ ಮೀಸಲಿರಿಸಲಾಗಿದೆ.
ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿರುವ 50 ಹಾಸಿಗೆಯಲ್ಲಿ 10 ಹಾಸಿಗೆಯನ್ನು ಮಕ್ಕಳಿಗೆ ಮೀಸಲಿರಿಸಿದ್ದರೆ, ಇಂಡಿ ತಾಲೂಕು ಆಸ್ಪತ್ರೆಯಲ್ಲಿನ
50 ಹಾಸಿಗೆಯಲ್ಲಿ 5 ಹಾಸಿಗೆಯನ್ನು ಮಕ್ಕಳಿಗೆ ಚಿಕಿತ್ಸೆ ನೀಡಲು ಕಾಯ್ದಿರಿಸಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಎದುರಿಸಲು ಅಗತ್ಯ ಇರುವ ಎಲ್ಲ ಸಿಬ್ಬಂದಿ ಸಿದ್ಧರಿದ್ದಾರೆ. ಆಸ್ಪತ್ರೆ,ಹಾಸಿಗೆ, ವೈದ್ಯರು, ಔಷಧ, ಆಕ್ಸಿಜನ್ಹೀಗೆ ಎಲ್ಲವನ್ನೂ ಸಿದ್ಧತೆ ಮಾಡಿಕೊಂಡಿದ್ದೇವೆ.
-ಪಿ.ಸುನೀಲಕುಮಾರ
ಜಿಲ್ಲಾಧಿಕಾರಿ, ವಿಜಯಪುರ
ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮೊದಲ ಬಾರಿಗೆ ಎರಡು ವರ್ಷದ ಮಗುವೊಂದು ಬಲಿಯಾಗಿದೆ.ಕೋವಿಡ್ ಮೂರನೇ ಅಲೆ ಮಕ್ಕಳ ಮೆಲೆ ಗಂಭೀರ ಪರಿಣಾಮ ಬೀರಿದರೂ ತುರ್ತು ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ.
-ಡಾ| ರಾಜಕುಮಾರಯರಗಲ್
ಡಿಚ್ಒ, ವಿಜಯಪುರ
ಕೋವಿಡ್ ಸೋಂಕು ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಿದರೂ ಜಿಲ್ಲೆಯಲ್ಲಿ ಚಿಕ್ಕಮಕ್ಕಳ ವಿಶೇಷ ಚಿಕಿತ್ಸೆಯ 20 ಖಾಸಗಿ ಆಸ್ಪತ್ರೆಗಳು ಸೇವೆಗೆ ಸಿದ್ಧವಾಗಿದೆ. ಚಿಕ್ಕಮಕ್ಕಳ ಖಾಸಗಿ 40 ವೈದ್ಯರು ಸೇವೆಗೆ ಸದಾ ಸನ್ನದ್ಧರಾಗಿರುತ್ತೇವೆ.
-ಡಾ|ಎಲ್.ಎಚ್.ಬಿದರಿ ಚಿಕ್ಕಮಕ್ಕಳ ತಜ್ಞ ವೈದ್ಯರು ಬಿದರಿ ಅಶ್ವಿನಿ ಆಸ್ಪತ್ರೆ, ವಿಜಯಪುರ
-ಜಿ.ಎಸ್. ಕಮತರ