ಆಲಮೇಲ ತಾಲೂಕಿನ ನೂರಾರು ಮಕ್ಕಳಿಗೆ ದಡಾರ: ರೋಗದ ಕುರಿತು ಅಧಿಕಾರಿಗಳ ತುರ್ತು ಸಭೆ
Team Udayavani, Jan 26, 2023, 8:41 PM IST
ಆಲಮೇಲ (ವಿಜಯಪುರ) : ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕ ಕೇಂದ್ರದಲ್ಲಿ 200ಕ್ಕೂ ಹೆಚ್ವಿನ ಮಕ್ಕಳಲ್ಲಿ ದಡಾರ ಮತ್ತು ರುಬೇಲ ಸಾಂಕ್ರಾಮಿಕ ಕಾಯಿಲೆ ದೃಡಪಟ್ಟಿರುವ ವರದಿಯಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಒಂದೇ ಗ್ರಾಮದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ದಡಾರ ಪ್ರಕರಣ ಬೆಳಕಿಗೆ ಬಂದಿದೆ.
ಸುಮಾರು ಇನ್ನೂರಕ್ಕೂ ಹೆಚ್ಚು ಮಕ್ಕಳಲ್ಲಿ ಸಾಂಕ್ರಾಮಿಕ ರೂಪದಲ್ಲಿ ಕಾಣಿಸಿಕೊಂಡಿರುವ ಸಾಂಕ್ರಾಮಿಕ ರೋಗದ ಕುರಿತು ಜಿಲ್ಲಾಡಳಿತ ಗಂಭೀರವಾಗಿದ್ದು, ಇಂಡಿ ಕಂದಾಯ ಉಪ ವಿಭಾಗ ಅಧಿಕಾರಿ ನೇತೃತ್ವದಲ್ಲಿ ಗುರುವಾರ ಸಂಜೆ ಆರೋಗ್ಯ ಇಲಾಖೆ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ಸೂಚನೆ ಮೇರೆಗೆ ಸಭೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಮುಕುಂದ ಗಲಗಲಿ ಹೆಳಿದರು.
ಆಲಮೇಲ ಪಟ್ಟಣದಲ್ಲಿ ಹಬ್ಬಿರುವ ದಡಾರ ರೋಗದ ಕುರಿತು ಸರ್ಕಾರಕ್ಕೂ ಮಾಹಿತಿ ಹೋಗಿದ್ದು, ರಾಜ್ಯ ಸರ್ಕಾರದ ಆದೇಶದ ಮೇರೆಗೆ ತುರ್ತು ಚಿಕಿತ್ಸಾ ಅಭಿಯಾನ ಹಮ್ಮಿಕೊಂಡಿದೆ.
ಶುಕ್ರವಾರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಶನಿವಾರ ದಿಂದ ಲಸಿಕಾ ಅಭಿಯಾನ ಹಮ್ಮಿಕೊಳ್ಳುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.