ರೈತರಿಗೆ ತೊಗರಿ ಬೀಜದ ಮಿನಿ ಕಿಟ್ ವಿತರಣೆ
Team Udayavani, Jun 17, 2022, 6:12 PM IST
ಮುದ್ದೇಬಿಹಾಳ: ಹುಲ್ಲೂರ ತಾಂಡಾದ ಶ್ರೀ ಮಾರುತೇಶ್ವರ ದೇವಸ್ಥಾನ ಪ್ರಾಂಗಣದಲ್ಲಿ ಫಲಾನುಭವಿ ರೈತರಿಗೆ ಗ್ರಾಮ ವ್ಯಾಪ್ತಿಯ ಢವಳಗಿ ಹೋಬಳಿ ರೈತ ಸಂಪರ್ಕ ಕೇಂದ್ರದಿಂದ 2022-23ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಜಿಆರ್ಜಿ-811 ತಳಿಯ ತೊಗರಿ ಬೀಜದ ಮಿನಿ ಕಿಟ್ಗಳನ್ನು ಗುರುವಾರ ವಿತರಿಸಲಾಯಿತು.
ಹುಲ್ಲೂರ ಗ್ರಾಪಂ ಸದಸ್ಯ ಶಿವಾನಂದ ಲಮಾಣಿ ಮಾತನಾಡಿ, ರೈತರು ಸರ್ಕಾರದ ಯೋಜನೆ, ಸೌಲಭ್ಯಗಳ ಸದುಪಯೋಗ ಮಾಡಿಕೊಂಡು ಪ್ರಗತಿ ಸಾಧಿಸುವಂತೆ ಸಲಹೆ ನೀಡಿದರು.
ಕೃಷಿ ಅಧಿಕಾರಿ ಪ್ರಭುಗೌಡ ಕಿರದಳ್ಳಿ ಜಿಆರ್ಜಿ-811 ತಳಿಯ ಬೀಜದ ಮಹತ್ವ, ಬಳಕೆ ಮತ್ತು ಸಾಗುವಳಿ ಬಗ್ಗೆ ತಿಳಿಸಿ ಬಿತ್ತುವಿಕೆಗೆ ಜೂನ್-ಜುಲೈ ಸೂಕ್ತ ಕಾಲವಾಗಿದ್ದು, ಸಾಲಿನಿಂದ ಸಾಲಿಗೆ 5-6 ಅಡಿ ಅಂತರ ಕಾಯ್ದುಕೊಂಡರೆ ಪ್ರತಿ ಎಕರೆಗೆ 6-7 ಕ್ವಿಂಟಲ್ ಇಳುವರಿ ಲಭ್ಯವಾಗುತ್ತದೆ. ಈ ತಳಿ ನೆಟೆರೋಗ ನಿರೋಧಕ ಶಕ್ತಿ ಹೊಂದಿದ್ದು ಈ ಬೀಜ ಬಿತ್ತನೆಗೆ ನೀರಾವರಿ ಭೂಮಿ ಯೋಗ್ಯವಾಗಿದೆ. ಬಿತ್ತುವಿಕೆ ಪೂರ್ಣಗೊಂಡ ನಂತರ ಇಳುವರಿ ಬರುವವರೆಗೂ 3 ಹಂತದಲ್ಲಿ ಬೆಳೆಯ ಜಿಪಿಎಸ್ ಸಮೀಕ್ಷೆ ನಡೆಸುವುದಾಗಿ ತಿಳಿ ಹೇಳಿದರು.
ಆತ್ಮಾ ಯೋಜನೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸಂಗಮೇಶ ಸಜ್ಜನ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮದ ಫಲಾನುಭವಿ ರೈತರು ಇದ್ದರು.