Vijayapura; ಸನಾತನ ಧರ್ಮದ ಬಗ್ಗೆ ಮಾತನಾಡಿದವರು ಉದ್ಧಾರ ಆಗಿಲ್ಲ: ಕೆ.ಎಸ್ ಈಶ್ವರಪ್ಪ
Team Udayavani, Sep 7, 2023, 3:36 PM IST
ವಿಜಯಪುರ : ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದ್ದು, ಯಾರವನು ಉದಯನಿಧಿ ಸ್ಟಾಲಿನ್, ಅವನೊಬ್ಬ ಅಯೋಗ್ಯ, ಹುಚ್ಚ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದಯನಿಧಿಗೂ ಸನಾತನ ಧರ್ಮಕ್ಕೂ ಏನು ಸಂಬಂಧ. ಸಾವಿರಾರು ವರ್ಷಗಳ ಇತಿಹಾಸ ಇರುವ ಸನತನ ಧರ್ಮದ ಬಗ್ಗೆ ಮಾತನಾಡಿದವರೆಲ್ಲ ಉದ್ಧಾರವಾಗಿದ್ದಾರಾ ಎಂದು ಪ್ರಶ್ನಿಸಿದರು.
ಸನಾತನ ಧರ್ಮ ನಾಶಕ್ಕೆ ಯತ್ನಿಸಿದ ಯಾರೂ ಉಳಿದಿಲ್ಲ. ಇಷ್ಟಕ್ಕೂ ಉದಯನಿಧಿ ಅಪ್ಪ, ಅಜ್ಜನಿಂದಲೇ ಸನಾತನ ಧರ್ಮದ ವಿರುದ್ಧ ಏನೂ ಮಾಡಲಾಗಿಲ್ಲ. ಇನ್ನು ಈ ಬಚ್ಛಾ ಏನು ಮಾಡಲು ಸಾಧ್ಯ ಕುಟುಕಿದರು.
ಇವರಿಗೆ ನಿಜಕ್ಕೂ ತಾಕತ್ತಿದ್ದರೆ ಮುಸ್ಲಿಂ ಧರ್ಮದ ಬಗ್ಗೆ ಹೇಳಿಕೆ ನೀಡಿ ಬದುಕುಳಿಯಲಿ ನೋಡೋಣ. ಇವರಿಗೆ ಅವರ ಧರ್ಮದ ಬಗ್ಗೆ ಮಾತನಾಡುವ ಶಕ್ತಿ ಇಲ್ಲದೇ ಪದೇ ಪದೇ ಪದೇ ಶಾಂತ ಪ್ರಿಯರೆಂಬ ಕಾರಣಕ್ಕೆ ಹಿಂದೂಗಳ ವಿರುದ್ಧ ಮಾತನಾಡುತ್ತಾರೆ ಎಂದು ಹರಿಹಾಯ್ದರು.
ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರಿಗೆ ತಮ್ಮ ತಾತ-ಮುತ್ತಾರ ಬಗ್ಗೆಯೇ ಗೊತ್ತಿಲ್ಲ, ತಮ್ಮದೇ ಕುಟುಂಬ ನೂರು-ಇನ್ನೂರು ವರ್ಷದ ಹಿರಿಯರ ಬಗ್ಗೆ ತಿಳಿಯದ ಇವರಿಗೆ ಇನ್ನು ಸನಾತನ ಧರ್ಮದ ಬಗ್ಗೆ ತಿಳಿದಿರಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದರು.
ನಾನು ಹಿಂದೂ ಅಲ್ಲ ತಂದೆ-ತಾಯಿಗೆ ಹುಟ್ಟಿದ್ದೇನೆ ಎಂದು ಚಿತ್ರನಟ ಪ್ರಕಾಶರಾಜ್ ಹೇಳಿಕೆಗೆ ಕೆಂಡ ಕಾರಿದ ಈಶ್ವರಪ್ಪ, ಈ ವ್ಯಕ್ತಿ ತನ್ನ ಮೂಲದ ಬಗ್ಗೆ ಮೊದಲು ಅರಿಯಲಿ ಎಂದು ಸಿಡುಕಿದರು. ಭಾರತ ಇಡೀ ವಿಶ್ವಕ್ಕೆ ಶಾಂತಿಯ ಧರ್ಮ ನೀಡಿದೆ. ಅದನ್ನು ಹೇಳುವ ಸೌಜನ್ಯ ಇಂಥವರಲ್ಲಿ ಕಂಡುಬರುವುದಿಲ್ಲ ಎಂದು ಕಿಡಿಕಾರಿದರು.
ಸರ್ವ ಜನಾಂಗದ ಶಾಂತಿಯ ತೋಟ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿಕೊಳ್ಳುವ ಕಾಂಗ್ರೆಸ್, ಮತ್ತೊಂದೆಡೆ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದೆ. ಮುಸ್ಲಿಮರನ್ನು ಕೆಣಕಲಿ ನೋಡೋಣ, ಸನಾತನ ಧರ್ಮದ ಬಗ್ಗೆ ಮಾತನಾಡುವಾಗ ಮೈಮೇಲೆ ಜ್ಞಾನ ಇರಿಸಿಕೊಂಡು ಮಾತನಾಡಲಿ ಎಂದು ಎಚ್ಚರಿಸಿದರು.
ಕುರಾನ್ ಹುಟ್ಟಿದ್ದು ಯಾವಾಗ, ಮುಸಲ್ಮಾನರು ಎಲ್ಲಿ ಹುಟ್ಟಿದರು, ಯಾವಾಗ ಹುಟ್ಟಿದರು ಎಂದು ಪ್ರಶ್ನಿಸಿ ಇವರು ಬದುಕುಳಿದಾರೆಯೇ ಎಂದ ಈಶ್ವರಪ್ಪ, ಹಾಗಂತ ಮುಸ್ಲಿಂ ಧರ್ಮದವರಿಗೆ ನೋವು, ಅಪಮಾನ ಮಾಡಿ ಎಂಬುದು ನನ್ನ ಹೇಳಿಕೆ ಉದ್ದೇಶವಲ್ಲ ಎಂದು ಸಮಜಾಯಿಷಿ ನೀಡಿದರು.