ಸಂಬಂಧಿ ಜೊತೆ ಪತ್ನಿಯ ಅನೈತಿಕ ಸಂಬಂಧ: ಮನನೊಂದ ಪತಿ ಆತ್ಮಹತ್ಯೆ
Team Udayavani, Sep 25, 2021, 11:57 AM IST
ವಿಜಯಪುರ: ತನ್ನ ಸಂಬಂಧಿ ವ್ಯಕ್ತಿ ಜೊತೆಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದ ಪತ್ನಿ ತನ್ನನ್ನು ನಿರಾಕರಿಸಿದ್ದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಳಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಜಿಲ್ಲೆಯ ತಾಳಿಕೋಟಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವೆಂಕಟೇಶ ದ್ವಾರನಹಳ್ಳಿ (25 ವ) ಆತ್ಮಹತ್ಯೆ ಮಾಡಿಕೊಂಡಾತ.
ವೆಂಕಟೇಶ ಆತ್ಮಹತ್ಯೆಗೆ ಮುನ್ನ ಫೇಸ್ಬುಕ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ಹಾಕಿ ಜಮೀನಿನಲ್ಲಿ ಇದ್ದ ಮರಕ್ಕೆ ನೇಣಿಗೆ ಶರಣಾಗಿದ್ದಾನೆ. ತನ್ನ ಸಾವಿಗೆ ಪಕ್ಕದ ಮನೆಯ ಶ್ರೀಶೈಲನೇ ಕಾರಣ ಎಂದೂ ದೂರಿದ್ದಾನೆ.
ವಿಷಯ ತಿಳಿದ ಸ್ನೇಹಿತರು, ಕುಟುಂಬ ಸದಸ್ಯರು ಕೂಡಲೇ ಸ್ಥಳಕ್ಕೆ ಧಾವಿಸಿ, ರಕ್ಷಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಉಸಿರು ಚೆಲ್ಲಿದ್ದಾನೆ.
ಇದನ್ನೂ ಓದಿ:ಯುಪಿಎಸ್ ಸಿ ಪರೀಕ್ಷೆಯಲ್ಲಿ ಚಾ.ನಗರ ಜಿಲ್ಲೆಯ ಪ್ರಮೋದ್ ಆರಾಧ್ಯ 601 ನೇ ರ್ಯಾಂಕ್
ವೆಂಕಟೇಶ ಎರಡು ವರ್ಷಗಳ ಹಿಂದೆ ಪ್ರೀತಿಸಿದ ಯುವತಿ ಜೊತೆ ಮದುವೆಯಾಗಿದ್ದ. ಆದರೆ ಈಚೆಗೆ ವೆಂಕಟೇಶನ ಪತ್ನಿ ಪಕ್ಕದ ಮನೆಯ ಶ್ರೀಶೈಲ ಎಂಬಾತನ ಜೊತೆ ಮನೆಬಿಟ್ಟು ಪರಾರಿಯಾಗಿದ್ದಳು.
ವೆಂಕಟೇಶ ದೂರು ನೀಡಿದ ಬಳಿಕ ತಾಳಿಕೋಟೆ ಪೊಲೀಸರು ಕರೆತಂದರೂ ವೆಂಕಟೇಶ ತನಗೆ ಬೇಡ, ನಾನು ಶ್ರೀಶೈಲನ ಜೊತೆಯೇ ಇರುವುದಾಗಿ ಹಠ ಹಿಡಿದಿದ್ದಳು. ಪರಿಣಾಮ ಪೊಲೀಸರು ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಿದ್ದರು.
ಇದರಿಂದ ಮನನೊಂದ ವೆಂಕಟೇಶ ಫೇಸ್ಬುಕ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸಂದೇಶ ಹಾಕಿ ನೇಣಿಗೆ ಶರಣಾಗಿದ್ದಾನೆ.
ತಾಳಿಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.