ಬಿಜೆಪಿಯವರಿಗೆ ತಾಕತ್ತಿದ್ದರೆ ಸಿದ್ದರಾಮೋತ್ಸವದ ಅರ್ಧದಷ್ಟು ಜನ ಸೇರಿಸಲಿ: ಎಂ ಬಿ ಪಾಟೀಲ್
Team Udayavani, Aug 8, 2022, 2:25 PM IST
ವಿಜಯಪುರ: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಜನ ಸಾಗರ ಕಂಡು ನಿದ್ದೆಗೆಟ್ಟಿರುವ ಬಿಜೆಪಿ ನಾಯಕರು ಕಂಗಾಲಾಗಿದ್ದಾರೆ. ಬಿಜೆಪಿ ಏನೇ ಸಾಹಸ ಮಾಡಿದರೂ ಸಿದ್ದರಾಮಯ್ಯ ಅವರ ಜಮ್ಮೋತ್ಸವ ಕಾರ್ಯಕ್ರಮ ನ ಭೂತೋ, ನ ಭವಿಷ್ಯತಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಕುಟುಕಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಜನ್ಮೋತ್ಸವಕ್ಕೆ ಪರ್ಯಾಯವಾಗಿ ಬಿಜೆಪಿ ಸಮಾವೇಶ ಮಾಡಿ ಜನರನ್ನು ಸೆಳೆಯಲು ಯೋಚಿಸಿದ್ದರಲ್ಲಿ ವಿಶೇಷವೇನಿಲ್ಲ. ವಿಚಲಿತರಾಗಿರುವ ಬಿಜೆಪಿ ಮುಖಂಡರು ಇಂಥ ಚಿಂತನೆ ಮಾಡುವುದು ಸಹಜವೇ ಆದರೂ, ಅಂಥಹ ಜನ ಸಮಾವೇಶ ಮಾಡುವುದು ಅಸಾಧ್ಯ ಎಂದರು.
ಸಿದ್ದರಾಮಯ್ಯ ಅವರಿಗೆ 75ನೇ ಜನ್ಮದಿನದ ಕಾರ್ಯಕ್ರಮವಾಗಿ ನಾವು ಅದ್ದೂರಿಯಾಗಿ ಆಚರಣೆ ಮಾಡಿದೆವು. ಆದರೆ ಬಿಜೆಪಿ ಪಕ್ಷದವರು ಏನಂತಾ ಕಾರ್ಯಕ್ರಮ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ 75ನೇ ಜನ್ಮೋತ್ಸವಕ್ಕೆ ಸ್ವಯಂ ಪ್ರೇರಿತವಾಗಿ ಸೇರಿದ್ದು, ರಾಜ್ಯದಲ್ಲಿ ಹೊಸ ಇತಿಹಾಸ ಬರೆದಿದೆ. ಬಿಜೆಪಿ ಪಕ್ಷದವರಿಗೆ ಶಕ್ತಿ ಇದ್ದರೆ ಅಂಥ ಸಮಾವೇಶ ಮಾಡಿ ನೊಡಲಿ ಎಂದು ಬಿಜೆಪಿಗೆ ಸವಾಲು ಹಾಕಿದರು.
ಸಿದ್ದರಾಮಯ್ಯ ಜನ್ಮದಿನಕ್ಕೆ ಸೇರಿದ್ದ ಆರ್ಧದಷ್ಟು ಜನ ಸೇರಿಸಲಿ ನೋಡೋಣ. ಅಂಥ ಪ್ರಯತ್ನಕ್ಕೆ ಮುಂದಾದರೆ ಬಿಜೆಪಿ ನಾಯಕರು ನಗೆಪಾಟಲಿಗೆ ಈಡಾಗುತ್ತಾರೆ. ಸಿದ್ದರಾಮೋತ್ಸವದಲ್ಲಿ ಸೇರಿದ್ದ ಜನಸ್ತೋಮ ಕಾಂಗ್ರೆಸ್ ಗೆ ಹೊಸ ಹುಮ್ಮಸ್ಸು ನೀಡಿದೆ. ಸಿದ್ದರಾಮಯ್ಯ ಬೆಂಬಲಿಗರು, ಪಕ್ಷದ ಕಾರ್ಯಕರ್ತರಿಂದ ಕಾಂಗ್ರೆಸ್ ಆತ್ಮಸ್ಥೈರ್ಯ ಹೆಚ್ಚಿಸಿದೆ. ಬಿಜೆಪಿ ಬಗ್ಗೆ ಜನರು ಜಿಗುಪ್ಸೆ ಹೊಂದಿದ್ದಾರೆ ಎಂಬುದನ್ನು ದಾವಣಗೆರೆ ಕಾರ್ಯಕ್ರಮ ಸ್ಪಷ್ಟವಾಗಿ ತೋರಿಸುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಪೂರ್ವದಲ್ಲಿ ಸಿಎಂ ಅಭ್ಯರ್ಥಿ ವಿಚಾರದ ಬಗ್ಗೆ ಯಾರೂ ಮಾತನಾಡದಂತೆ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಮೊದಲು ನಮ್ಮ ಪಕ್ಷ ಹೆಚ್ಚಿನ ಸ್ಥಾನ 120-140 ನಮ್ಮ ಶಾಸಕರು ಆಯ್ಕೆಯಾಗಬೇಕು. ಹೆಚ್ಚಿನ ಸ್ಥಾನಗಳು ಬಂದ ಬಳಿಕ ಶಾಸಕಾಂಗ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸುವ ವೀಕ್ಷಕರ ವರದಿ ಆಧರಿಸಿ, ಕಾಂಗ್ರೆಸ್ ಹೈಕಮಾಂಡ್, ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷರು ಸೇರಿ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸುತ್ತಾರೆ ಎಂದರು.
ದಾವಣಗೆರೆಯಲ್ಲಿನ ಸಿದ್ದರಾಮಯ್ಯ ಜನ್ಮದಿನ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಲಿಂಗನವನ್ನು ಟೀಕಿಸಿರುವ ಸಚಿವ ಮುನಿರತ್ನ ಸೀನಿಕ ಮನಸ್ಥಿತಿಗೆ ಸಾಕ್ಷಿ. ತಮ್ಮದೇ ಪಕ್ಷದ ಈಶ್ವರಪ್ಪ ಅವರೇ ಸಿದ್ದರಾಮಯ್ಯ ನೂರ್ಕಾಲ ಬಾಳಲಿ ಎಂದು ಹಾರೈಸಿದ್ದಾರೆ. ಆದರೇ ಒಂದೇ ಪಕ್ಷದ ಅದರಲ್ಲೂ ಪಕ್ಷದ ಅಧ್ಯಕ್ಷ ಶಿವಕುಮಾರ ಹಾರೈಸಿದ್ದನ್ನು ವ್ಯಂಗ್ಯವಾಗಿ ನೋಡುವ ಮನಸ್ಥಿತಿ ಸರಿಯಲ್ಲ ಎಂದರು.