ರಾಷ್ಟ್ರೀಯ ಪದಕ ವಿಜೇತೆಗೆ ಶಾಸಕ ಯತ್ನಾಳ 1 ಲಕ್ಷ ರೂ. ಧನ ಸಹಾಯ
Team Udayavani, Aug 29, 2021, 9:55 PM IST
ವಿಜಯಪುರ : ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ವಿಜಯಪುರ ನಗರದ ಬಡ ವಿದ್ಯಾರ್ಥಿನಿ, ಸೈಕ್ಲಿಸ್ಟ್ ಛಾಯಾ ನಾಗಶೆಟ್ಟಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೈಕಲ್ ವಿತರಿಸಿದ್ದಾರೆ.
ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದರೂ ಬಡತನದ ಕಾರಣ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಗುಣಮಟ್ಟದ ಸೈಕಲ್ ಇರಲಿಲ್ಲ. ಇದನ್ನು ತಿಳಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಾವು ಅಧ್ಯಕ್ಷರಾಗಿರುವ ಸಿದ್ಧಸಿರಿ ಸೌಹಾರ್ದ ಸಹಕಾರಿ ಬ್ಯಾಂಕ್ ಮೂಲಕ ಒಂದು ಲಕ್ಷ ರೂ. ಧನ ಸಹಾಯ ನೀಡಿದ್ದು, ಅದರಲ್ಲಿ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ಅಗತ್ಯವಾದ ಸೈಕಲ್ ಖರೀದಿಸಿ, ಸೈಕ್ಲಿಸ್ಟ್ ಛಾಯಾಳಿಗೆ ಹಸ್ತಾಂತರ ಮಾಡಿದ್ದಾರೆ.
ನಗರದಲ್ಲಿ ನಡೆದ ಸಿದ್ಧಸಿರಿ ಸೌಹಾರ್ದ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಕಂಚಿನಪದಕ ವಿಜೇತೆ ಛಾಯಾಳಿಗೆ ಸೈಕಲ್ ಹಸ್ತಾಂತರಿಸಿದರು.
ಶಾಸಕ ಬಸನಗೌಡ ಯತ್ನಾಳ ಅವರು ನೀಡಿರುವ ಈ ಸೈಕಲ್ ನನ್ನ ಸೈಕ್ಲಿಂಗ್ ಸಾಧನೆಗೆ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ. ಇದರಿಂದ ನಿತ್ಯ ತಾಲೀಮು ನಡೆಸಲು, ತರಬೇತಿ ಪಡೆಯಲು ಹಾಗೂ ರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚು ಪದಕ ಗೆಲ್ಲಲು ಪ್ರೇರಣೆ ನೀಡಿದೆ ಎಂದು ಛಾಯಾ ನಾಗಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾಳೆ.