ಮುದ್ದೇಬಿಹಾಳ: ಸಿಡಿಲಿಗೆ ಜಾನುವಾರುಗಳು ಬಲಿ
Team Udayavani, Jul 29, 2022, 10:20 PM IST
ಮುದ್ದೇಬಿಹಾಳ: ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಸಿಡಿಲಿನ ಅಬ್ಬರಕ್ಕೆ ಎರಡು ಪ್ರತ್ಯೇಕ ಗ್ರಾಮ ವ್ಯಾಪ್ತಿಯಲ್ಲಿ ಜಾನುವಾರುಗಳು ಬಲಿಯಾಗಿವೆ.
ಸಿದ್ದಾಪೂರ ಪಿಟಿ ಗ್ರಾಮದಲ್ಲಿ ಬಸಪ್ಪ ಗೋಡಿಕಾರ ಅವರಿಗೆ ಸೇರಿದ ಆಕಳು, ನೇಬಗೇರಿ ಗ್ರಾಮದಲ್ಲಿ ಶಿವಪ್ಪ ಬಿಸಲದಿನ್ನಿ ಅವರಿಗೆ ಸೇರಿದ ನಾಲ್ಕು ಆಡು, ಒಂದು ಕುರಿ ಸಾವನ್ನಪ್ಪಿವೆ.
ನೇಬಗೇರಿಯಲ್ಲಿ ಸಿಡಿಲಿನ ಹೊಡೆತಕ್ಕೆ ಮರದ ಬುಡದಲ್ಲಿರುವ ಮೇಲ್ಪದರು ಕಿತ್ತಿ ಹೋಗಿದ್ದು ಮರಕ್ಕೆ ಕಟ್ಟಿದ್ದ ಆಡು, ಕುರಿ ಒಂದೇ ಏಟಿಗೆ ಸಾವನ್ನಪ್ಪಿರುವುದು ಸ್ಥಳದಲ್ಲಿ ಕಂಡು ಬಂತು.
ಇದೇ ವೇಳೆ ಕುರಿ ಕಾಯಲು ಹೋಗಿದ್ದ ಯಮನಪ್ಪ ಬಿಸಲದಿನ್ನಿ ಹಾಗೂ ಬಸವರಾಜ ಮಕಾಶಿ ಅವರು ಆಶ್ರಯಕ್ಕಾಗಿ ಮರದ ಕೆಳಗೆ ನಿಂತಿದ್ದರೂ ಸಿಡಿಲಿನ ಹೊಡೆತದಿಂದ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ ಈ ಕುರಿತು ಮಾಹಿತಿ ಸಂಗ್ರಹಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.