ಕುರಿಗಾಹಿಗಳನ್ನು ಬೆದರಿಸಿ ಕುರಿ ಕಳ್ಳತನ ಯತ್ನ: ಪರಾರಿಯಾಗುವ ಭರದಲ್ಲಿ ಕಳ್ಳರ ಕಾರು ಪಲ್ಟಿ!
Team Udayavani, Sep 11, 2021, 8:57 AM IST
ವಿಜಯಪುರ: ಕುರಿಗಳನ್ನು ಕದಿಯಲು ಬಂದಿದ್ದ ಕಳ್ಳರ ಕಾರು ಪಲ್ಟಿಯಾಗಿದ್ದು, ಆರೋಪಿಗಳು ಪರಾರಿಯಾದ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮೂಕರ್ತಿಹಾಳ ಗ್ರಾಮದ ಬಳಿ ನಡೆದಿದೆ.
ಶುಕ್ರವಾರ ಮಧ್ಯರಾತ್ರಿ ಹೊಲಗಳಲ್ಲಿ ಬಿಡಾರ ಹೂಡಿದ್ದ ಕುರಿಗಾರರ ಕುರಿಗಳನ್ನು ಕದಿಯಲು ಕಳ್ಳತನಕ್ಕೆ ಕಾರಿನಲ್ಲಿ ಬಂದಿದ್ದರು. ಕುರಿಗಾರರನ್ನು ಬೆದರಿಸಿ ನಾಲ್ಕು ಕುರಿಗಳನ್ನು ಕದ್ದು ಕಾರಿನಲ್ಲಿ ಹಾಕಿಕೊಂಡಿದ್ದರು. ಕುರಿಗಾರರು ಕೂಗುತ್ತಾ ಬೆನ್ನಟ್ಟಿದಾಗ ಆತುರದಲ್ಲಿ ಓಡಲು ಯತ್ನಿಸಿದಾಗ ಕಾರು ಪಲ್ಟಿಯಾಗಿದೆ.
ಕುರಿಕಳ್ಳತನ ಮಾಡಿಕೊಂಡು ತಾಳಿಕೋಟೆ ಪಟ್ಟಣದ ಕಡೆಗೆ ಆರೋಪಿಗಳು ಪರಾರಿ ಆಗಿದ್ದಾರೆ. ಆದರೆ ಡೋಣಿ ನದಿ ಸೇತುವೆ ಜಲಾವೃತವಾದ ಕಾರಣ ಆರೋಪಿಗಳು ಮರಳಿ ಮೂಕರ್ತಿಹಾಳ ಗ್ರಾಮದತ್ತ ಬಂದಿದ್ದಾರೆ.
ಇದನ್ನೂ ಓದಿ:ಮೆಗಾ ಅಭಿಮಾನಿಗಳಿಗೆ ಶಾಕಿಂಗ್ : ನಟ ಸಾಯಿ ಧರ್ಮತೇಜ್ ಬೈಕ್ ಅಪಘಾತ, ಆಸ್ಪತ್ರೆಗೆ ದಾಖಲು
ಕುರಿಗಾರರ ಕೂಗಾಟಕ್ಕೆ ಸ್ಥಳೀಯರು ಬಡಿಗೆ ಹಿಡಿದು ರಸ್ತೆಯಲ್ಲಿ ಜಮಾಯಿಸಿದ್ದಾರೆ. ರೊಚ್ಚಿಗೆದ್ದಿದ್ದ ಗ್ರಾಮಸ್ಥರ ಕೈಗಳಲ್ಲಿ ಬಡಿಗೆಗಳು ಇರುವುದನ್ನು ಕಂಡ ಕಳ್ಳರು ಭಯಗೊಂಡಿದ್ದಾರೆ. ಹೀಗಾಗಿ ಕುರಿಗಳ್ಳರು ವೇಗವಾಗಿ ಕಾರು ಚಲಾಯಿದಾಗ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿದೆ.
ಕಾರು ಪಲ್ಟಿಯಾಗುತ್ತಲೇ ಕಳ್ಳರು ತಾವು ತಂದಿದ್ದ KA 03 – AE 2627 ಕಾರು ಬಿಟ್ಟು ಅಲ್ಲಿಂದ ಓಡಿ ಹೋಗಿದ್ದಾರೆ. ಕದ್ದಿದ್ದ ಕುರಿಗಳನ್ನು ಕಾರಿಲ್ಲೇ ಬಿಟ್ಟು ಪರಾರಿಯಾದ್ದಾರೆ. ಕಾರು ಬಿಟ್ಟು ಓಡಿ ಹೋಗಿರುವ ಕಳ್ಳರ ವರ್ತನೆ ಗಮನಿಸಿದರೆ, ಕಾರು ಕೂಡ ಕಳ್ಳತನ ಮಾಡಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ.
ಸುದ್ದಿ ತಿಳಿಯುತ್ತಲೇ ತಾಳಿಕೋಟೆ ಪೊಲೀಸರು ಸ್ಥಳಕ್ಕೆ ಭೇಟಿದ್ದಾರೆ. ಗ್ರಾಮಸ್ಥರಿಂದ ಸಮಗ್ರ ಮಾಹಿತಿ ಸಂಗ್ರಹಿಸಿದ್ದು, ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.