Muddebihala: 3-4 ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
Team Udayavani, Nov 30, 2023, 12:45 PM IST
ಮುದ್ದೇಬಿಹಾಳ: ಪಟ್ಟಣದ ಎಂಟು ಗಡಗಡೆ ಬಾವಿಯ ಎದುರಿಗೆ ಇರುವ ನಿರ್ಜನ ಪ್ರದೇಶದಲ್ಲಿ ಶಂಕಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮೃತನನ್ನು ಮುದ್ದೇಬಿಹಾಳ ಪಟ್ಟಣದ ಮೋಮಿನ್ ಗಲ್ಲಿ ನಿವಾಸಿ ಅವಿವಾಹಿತ ಹಮೀದ ಅಬ್ದುಲ್ ಅಜೀಜ್ ಮೋಮಿನ್ (49) ಎಂದು ಗುರುತಿಸಲಾಗಿದೆ.
ಕಳೆದ 3-4 ದಿನದಿಂದ ಮನೆಗೆ ಬಾರದ ಈತನಿಗಾಗಿ ಕುಟುಂಬದವರು ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ. ಇಂದು ಬೆಳಿಗ್ಗೆ ಬಹಿರ್ದೆಸೆಗೆ ಹೋದವರೊಬ್ಬರು ಮುಖ ಕೆಳಗೆ ಮಾಡಿ ಕೊಳಚೆ ನೀರಲ್ಲಿ ಬಿದ್ದಿರುವ ರೀತಿಯಲ್ಲಿದ್ದ ವ್ಯಕ್ತಿ ಕಂಡುಬಂದಿದ್ದು ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೃತಪಟ್ಟು ಎರಡು ಮೂರು ದಿನಗಳು ಆಗಿರಬಹುದು ಎನ್ನಲಾಗಿದೆ. ಆಸ್ತಿ ವಿಷಯದಲ್ಲಿ ಕುಟುಂಬದ ನಡುವೆ ಜಗಳ ಇತ್ತು ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಪಿಎಸೈ ಸಂಜಯ್ ತಿಪರಡ್ಡಿ ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆ.