ವಿಜಯಪುರ: ಗುಡುಗು ಸಹಿತ ಭಾರೀ ಮಳೆ: ಸಿಡಿಲು ಬಡಿದು ಓರ್ವ ಸಾವು
Team Udayavani, Oct 4, 2020, 8:54 PM IST
ವಿಜಯಪುರ: ಜಿಲ್ಲೆಯ ಹಲವೆಡೆ ಭಾನುವಾರ ಭಾರಿ ಗುಡುಗು ಸಹಿತ ಮಳೆಯಾಗಿದ್ದು, ಓರ್ವ ವ್ಯಕ್ತಿ ಸಿಡಿಲಿಗೆ ಬಲಿಯಾಗಿದ್ದಾನೆ.
ಸಿಡಿಲಿಗೆ ಬಲಿಯಾದ ವ್ಯಕ್ತಿಯನ್ನು ಮುದ್ದೇಬಿಹಾಳ ತಾಲೂಕಿನ ಇಣಚಗಲ್ ಗ್ರಾಮದ ಹುಲ್ಲಪ್ಪ ಮಾದರ (38) ಎಂದು ಗುರುತಿಸಲಾಗಿದೆ. ಹೊಲದಲ್ಲಿ ಕೆಲಸ ಮಾಡುವಾಗ ಮರದ ಕೆಳಗೆ ನಿಂತಿದ್ದವನಿಗೆ ಮಧ್ಯಾಹ್ನ 3-30 ರ ಸುಮಾರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಳೆಯಾಗುತ್ತಿದ್ದ ವೇಳೆ ಜಮೀನಿನ ಮರದ ಕೆಳಗೆ ನಿಂತಿದ್ದ ಹುಲ್ಲಪ್ಪ ಸಿಡಿಲು ಬಡಿದು ಮೃತಪಟ್ಟ ಬಳಿಕ ಎತ್ತುಗಳಷ್ಟೇ ಮನೆಗೆ ಹೋಗಿದ್ದವು. ಆ ಬಳಿಕವೇ ಕುಟುಂಬ ಸದಸ್ಯರು ಆತಂಕಗೊಂಡು ಹೊಲಕ್ಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ.