22ರಂದು ಹಗರಿಬೊಮ್ಮನಹಳ್ಳಿ ಬಂದ್ಗೆ ಕರೆ
Team Udayavani, Sep 21, 2019, 5:23 PM IST
ಹಗರಿಬೊಮ್ಮನಹಳ್ಳಿ: ಪೂರ್ವಭಾವಿ ಸಭೆಯಲ್ಲಿ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಂ. ವೀರಸಂಗಯ್ಯ ಮಾತನಾಡಿದರು.
ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನ ಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ಆಗ್ರಹಿಸಿ ಸೆ. 22ರಂದು ಹಗರಿಬೊಮ್ಮನಳ್ಳಿ ಬಂದ್ಗೆ ಕರೆ ನೀಡಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಂ. ವೀರಸಂಗಯ್ಯ ತಿಳಿಸಿದರು.
ಪಟ್ಟಣದ ಈಶ್ವರ ದೇವಸ್ಥಾನದ ಆವರಣದಲ್ಲಿ ಸರಕಾರವನ್ನು ಒತ್ತಾಯಿಸಲು ವಿವಿಧ ಸಂಘಟನೆ ಮುಖಂಡರು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಹಗರಿಬೊಮ್ಮನಹಳ್ಳಿ ತಾಲೂಕು ಜಿಲ್ಲಾ ಕೇಂದ್ರ ಮಾಡಲು ಸೂಕ್ತ ಸ್ಥಳವಾಗಿದೆ. ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಮರಿಯಮ್ಮನಹಳ್ಳಿ
ಪಟ್ಟಣ ಸೇರಿಕೊಂಡು ಹಗರಿಬೊಮ್ಮನಹಳ್ಳಿ ಭೌಗೋಳಿಕವಾಗಿ ಮಧ್ಯ ಇರುವುದರಿಂದ
ಜಿಲ್ಲಾ ಕೇಂದ್ರ ಮಾಡಲು ಸೂಕ್ತವಾಗಿದೆ ಎಂದರು.
ರಾಜ್ಯ ಸರ್ಕಾರ ತರಾತುರಿಯಲ್ಲಿ ಯಾವುದೇ ಒತ್ತಡಕ್ಕೆ ಮಣಿದು ಜಿಲ್ಲೆಯನ್ನು
ರಚನೆ ಮಾಡಬಾರದು. ಹೈದ್ರಾಬಾದ್ ಕರ್ನಾಟಕ 371ಜೆ ವ್ಯಾಪ್ತಿಯಲ್ಲಿ
ರಾಜ್ಯದಲ್ಲಿ ಕೇವಲ ಆರು ಜಿಲ್ಲೆಗಳಿಗೆ ಮಾತ್ರ ಮೀಸಲಾಗಿದ್ದು 7ನೇ ಜಿಲ್ಲೆಗೆ
ಅವಕಾಶವಿರುವುದಿಲ್ಲ. ಈ ದಿಸೆಯಲ್ಲಿ ಹೊಸದಾಗಿ ಮಾಡುವ ಹೈದ್ರಾಬಾದ್
ಕರ್ನಾಟಕದ ನೂತನ ಜಿಲ್ಲೆಗೆ 371ಜೆ ಸವಲತ್ತುಗಳು ಹೊಸ ಜಿಲ್ಲೆಯ ಎಲ್ಲ
ತಾಲೂಕುಗಳಿಗೆ ದೊರಕುವಂತೆ ಆಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ತರಾತುರಿ
ನಿರ್ಧಾರವನ್ನು ತೆಗೆದುಕೊಳ್ಳಬಾರದು. ಇದರ ಅಂಗವಾಗಿ ಸೆ. 22ರಂದು ಬಂದ್ಗೆ ಕರೆ ನೀಡಲಾಗಿದೆ. ಇದರಲ್ಲಿ ತಾಲೂಕಿನ ವಿವಿಧ ಸಂಘಟನೆಗಳು ಭಾಗವಹಿಸಲಿವೆ. ಪಟ್ಟಣದ ಎಲ್ಲ ಅಂಗಡಿ, ಮುಂಗಟ್ಟುಗಳು ಸ್ವಇಚ್ಛೆಯಿಂದ ಬಂದ್ ಮಾಡಿ ಪ್ರತಿಭಟನೆಗೆ ಕೈಜೋಡಿಸುವರು ಎಂದು ತಿಳಿಸಿದರು. ಇದೇ ವೇಳೆ ಬಂದ್ ಕುರಿತಾಗಿ ತಹಶೀಲ್ದಾರ್ ಆಶಪ್ಪ ಪೂಜಾರ ಹಾಗೂ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು.
ಜಿಪಂ ಮಾಜಿ ಸದಸ್ಯರಾದ ಅಕ್ಕಿ ತೋಟೇಶ್, ಹಂಪಾಟ್ಟಣ ಭೀಮಪ್ಪ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ್, ಪಂಚಮಸಾಲಿ ಸಮಾಜ ಗೌರವಾದ್ಯಕ್ಷ ಬಾವಿ ಬೆಟ್ಟಪ್ಪ, ಸತ್ಸಂಗ ಸಮಿತಿ ಅಧ್ಯಕ್ಷ ಜಿ. ಲಕ್ಷ್ಮಿಪತಿ, ನೀಲಕಂಠಪ್ಪ, ಹಿ.ಮ. ಗುರುಬಸವರಾಜ್, ಜೆಡಿಎಸ್ ತಾಲೂಕು ಮಾಜಿ ಅಧ್ಯಕ್ಷ ವೈ. ಮಲ್ಲಿಕಾರ್ಜುನ, ತಾಲೂಕು ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಎ. ಕೊಟ್ರೇಶ, ಪುರಸಭೆ ಸದಸ್ಯ ಬಾಬುವಲಿ, ಆಟೋ
ಚಾಲಕ ಸಂಘದ ಗೌರವಾಧ್ಯಕ್ಷ ಕೈಲಾಸನಾಥ, ವಕೀಲರ ಸಂಘದ ಉಪಾಧ್ಯಕ್ಷ ಕೊಟ್ರೇಶ್
ಶೆಟ್ಟರ್, ತೆಲಿಗಿ ನೆಲ್ಲು ಇಸ್ಮಾಯಿಲ್, ಗುತ್ತಿಗೆದಾರ ಉಮಾಪತಿ, ಕೇಶವ ರಡ್ಡಿ,
ರೆಹಮಾನ್, ಗೂಡ್ಲಾನೂರು ವಸಂತ, ಏಣಿಗಿ ಮಾಬುಸಾಬ್, ಹೊಯ್ಸಳ,
ಮೈಲಾರಪ್ಪ, ಹಾಲ್ದಾಳ ವಿಜಯಕುಮಾರ, ವೀರಣ್ಣ, ವಿವಿಧ ಸಂಘಟನೆ
ಪದಾಧಿಕಾರಿಗಳು ಉಪಸ್ಥಿತರಿದ್ದರು.