ಬೀದಿಗೆ ಬಿದ್ದ 38 ಬಸವ ವಸತಿ ಫಲಾನುಭವಿಗಳು
Team Udayavani, Apr 28, 2019, 3:00 AM IST
ಸಂತೆಮರಹಳ್ಳಿ: ವಸತಿ ಫಲಾನುಭಗಳನ್ನು ಆಯ್ಕೆ ಮಾಡಿ ವರ್ಷ ಕಳೆದರೂ ಇನ್ನೂ ಹಣ ಬಾರದ ಹಿನ್ನೆಲೆಯಲ್ಲಿ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಪಂ ವ್ಯಾಪ್ತಿಯ ಕೆಸ್ತೂರು, ಬಸವಾಪುರ, ಕಟ್ನವಾಡಿ ಹಾಗೂ ಕೆ.ಹೊಸೂರು ಗ್ರಾಮದ 38 ಕುಟುಂಬಗಳು ರಸ್ತೆ ಬದಿಯಲ್ಲಿ, ಶೀಟ್, ತೆಂಗಿನ ಗರಿ ಹಾಕಿಕೊಂಡು ಬೀದಿಯಲ್ಲೇ ವಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಬಾರದ ಹಣ: ಕೆಸ್ತೂರು ಗ್ರಾಪಂ ವ್ಯಾಪ್ತಿಯ ಈ ಗ್ರಾಮಗಳ ಹಿಂದುಳಿದ ವರ್ಗಗಳ ತೀರಾ ಬಡ ಕುಟುಂಬಗಳನ್ನು ಬಸವ ವಸತಿ ಯೋಜನೆಯಡಿ ಗ್ರಾಪಂನಿಂದ ಆಯ್ಕೆ ಮಾಡಲಾಗಿತ್ತು. ಆದರೆ, ಆಯ್ಕೆ ಮಾಡಿ ಒಂದು ವರ್ಷವಾದರೂ ಇನ್ನೂ ಒಂದು ಕಂತಿನ ಹಣವೂ ಬಿಡುಗಡೆಯಾಗಿಲ್ಲ.
ಬೀದಿಗೆ ಬಿದ್ದ ಕುಟುಂಬಗಳು: ವಸತಿ ಯೋಜನೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಈ 38 ಫಲಾನುಭವಿಗಳೂ ತಮ್ಮ ಹಳೆಯ ಶಿಥಿಲ ಮನೆಗಳನ್ನು ಕೆಡವಿ ಹೊಸ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಿಕೊಂಡಿದ್ದರು. ಇದಾದ ನಂತರವೇ ಜಿಪಿಎಸ್ ಮಾಡಿ ಮೊದಲ ಕಂತಿನ ಹಣ ಪಾವತಿಯಾಗುವ ನಿಯಮವಿದೆ.
ಆದರೆ, ಅಡಿಪಾಯವನ್ನು ಸಾಲ ಮಾಡಿ ಹಾಕಿಕೊಂಡಿದ್ದರೂ ಸರ್ಕಾರದಿಂದ ಒಂದು ನಯಾಪೈಸೆ ಬಿಡುಗಡೆ ಆಗಿಲ್ಲ. ಹೀಗಾಗಿ ಮನೆ ಬದಿಯಲ್ಲಿ, ಬೇರೆಯವರ ಜಾಗದಲ್ಲಿ, ಶೀಟ್ಗಳನ್ನು, ತೆಂಗಿನ ಗರಿ ಹಾಕಿಕೊಂಡು ಬದುಕು ಸವೆಸುವ ಸ್ಥಿತಿ ನಿರ್ಮಾಣವಾಗಿದೆ.
ಬಿಸಿಲು ಮಳೆ ಅಳುಕಿನಲ್ಲೇ ಬದುಕು: ಈಚೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದು ಶೀಟ್ ಹಾಕಿಕೊಂಡು ತಾತ್ಕಲಿಕ ಶೆಡ್ ನಿರ್ಮಿಸಿ ಇರುವ ಸ್ವಲ್ಪ ಜಾಗದಲ್ಲೇ ವಾಸವಾಗಿದ್ದೇವೆ. ಆದರೆ ಇತ್ತೀಚೆಗೆ, ಜೋರು ಗಾಳಿ ಬೀಸಿ ಶೀಟ್ಗಳು ಹಾರಿ ಹೋದವು, ಮಳೆಯಲ್ಲೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಯಿತು. ಅಕ್ಕಪಕ್ಕದ ಮನೆಗಳ ಜಗುಲಿಗಳ ಮೇಲೆ ನಾವು ಸಂಸಾರ ಮಾಡುವ ಪರಿಸ್ಥಿತಿ ಇದೆ ಎನ್ನುತ್ತಾರೆ ಕೆಸ್ತೂರು ಗ್ರಾಮದ ಮಂಗಳಮ್ಮ, ನಾರಾಯಣಸ್ವಾಮಿ ದಂಪತಿ.
ನಮ್ಮ ಮನೆಯನ್ನು ಕೆಡವಿ ಸಾಲ ಮಾಡಿ ಅಡಿಪಾಯ ಹಾಕಿದ್ದೆವು, ಆದರೆ, ಪಂಚಾಯ್ತಿ ವತಿಯಿಂದ ಇನ್ನೂ ಒಂದೂ ಬಿಲ್ ಪಾವತಿಯಾಗಿಲ್ಲ. ಇದರ ಮುಂಭಾಗದಲ್ಲೇ ಚರಂಡಿ ಹಾದು ಹೋಗಿದೆ. ಅಡಿಪಾಯದ ಮೇಲ್ಭಾಗದಲ್ಲೇ ತೆಂಗಿನ ಗರಿಯ ಶೆಡ್ ಹಾಕಿ ವಾಸವಾಗಿದ್ದೇವೆ. ರಾತ್ರಿ ವೇಳೆ ಹಾವು, ಚೇಳು ಸೇರಿದಂತೆ ವಿಷಜಂತುಗಳು ಮನೆಯೊಳಗೆ ನುಗ್ಗುತ್ತವೆ. ಜೀವಭಯ ಬಿಟ್ಟು ನಾವು ಬದುಕು ಸಾಗಿಸುವ ಅನಿವಾರ್ಯತೆ ಇದೆ ಎನ್ನುತ್ತಾರೆ ಬಸವಾಪುರ ಗ್ರಾಮದ ಬಟ್ಟಮ್ಮ, ಭಾಗ್ಯ.
ಹಣ ಬಿಡುಗಡೆಯಾಗಲಿ: ಬಸವ ವಸತಿ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳು ತೀರಾ ಹಿಂದುಳಿದ ಸಮುದಾಯದವರಾಗಿದ್ದಾರೆ. ಬಡತನವೂ ಹೆಚ್ಚಾಗಿದೆ. ಇರುವ ಮನೆ ಕೆಡವಿ ಹೊಸ ಮನೆ ನಿರ್ಮಾಣಕ್ಕೆ ಇವರು ಸಾಲ ಮಾಡಿ ಅಡಿಪಾಯ ಹಾಕಿಕೊಂಡಿದ್ದಾರೆ. ಆದರೆ, ಕೆಲವು ತಾಂತ್ರಿಕ ಕಾರಣಗಳ ನೆಪವೊಡ್ಡಿ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಪಂಚಾಯ್ತಿ ಸಬೂಬು ಹೇಳುತ್ತಿದೆ. ಇವರ ಕಷ್ಟಕ್ಕೆ ಕೂಡಲೇ ಸಂಬಂಧಪಟ್ಟವರು ಕ್ರಮ ವಹಿಸಿ ನಿರ್ಗತಿಕರಿಗೆ ಸೂರು ಒದಗಿಸಬೇಕು ಎಂದು ಗ್ರಾಮದ ಸ್ವಾಮಿ, ಮಣಿಕಂಠ ಮತ್ತಿತರರು ದೂರಿದ್ದಾರೆ.
ತಾಂತ್ರಿಕ ಸಮಸ್ಯೆಯಿಂದ ತೊಂದರೆ, ಶೀಘ್ರ ಪರಿಹಾರ: ಕೆಸ್ತೂರು ಗ್ರಾಪಂ ವ್ಯಾಪ್ತಿಯಲ್ಲಿ 2018 ರಲ್ಲೇ 38 ಫಲಾನುಭವಿಗಳನ್ನು ಬಸವ ವಸತಿ ಯೋಜನೆ ಮೂಲಕ ಆಯ್ಕೆ ಮಾಡಲಾಗಿತ್ತು. ಆದರೆ, ಕೆಲವು ತಾಂತ್ರಿಕ ದೋಷಗಳಿಂದ ಇವರಿಗೆ ಇನ್ನೂ ಒಂದೂ ಬಿಲ್ ಆಗಿಲ್ಲ. ಈ ನಡುವೆ, ಕೊಡಗಿನಲ್ಲಿ ಪ್ರವಾಹ ಬಂದ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಯಾಗಿರಲಿಲ್ಲ.
ನಂತರ ಜಿಪಂ ಸಿಇಒ ವರ್ಗಾವಣೆಗೊಂಡರು ಹಾಗೂ ಈಗ ಚುನಾವಣೆ ನೀತಿ ಸಂಹಿತೆ ಬಂದ ಹಿನ್ನೆಲೆಯಲ್ಲಿ ಬಿಲ್ ತಡವಾಗಿದೆ. ಎಲ್ಲಾ ದಾಖಲೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು ಆದಷ್ಟು ಬೇಗ ಹಣ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಪಿಡಿಒ ಲಲಿತಾ ತಿಳಿಸಿದ್ದಾರೆ.
* ಫೈರೋಜ್ ಖಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ