42 ಗ್ರಾಂ ಚಿನ್ನದ ಸರ ಹಿಂದಿರುಗಿಸಿ ಮಹಿಳೆಯ ಪ್ರಾಮಾಣಿಕತೆ
Team Udayavani, Aug 22, 2022, 9:32 PM IST
ಚಾಮರಾಜನಗರ: ಮದುವೆ ಮನೆಯಲ್ಲಿ ಕಳೆದುಕೊಂಡಿದ್ದ 42 ಗ್ರಾಂ ಚಿನ್ನದ ಸರವನ್ನು ಗೃಹಿಣಿಯೊಬ್ಬರು ಅದರ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.ರಾಮಸಮುದ್ರದ ನಿರ್ಮಲಾ ನಾಗರಾಜು ಎಂಬ ಮಹಿಳೆ ಪ್ರಾಮಾಣಿಕತೆ ತೋರಿದವರು.
ನಗರದ ರಾಮಸಮುದ್ರ ಬಡಾವಣೆಯ ನಿವಾಸಿ ಆರೋಗ್ಯ ಇಲಾಖೆಯ ರವಿ ಮತ್ತು ಯು.ಬಿ. ಮಹದೇವಮ್ಮ ಅವರ ಪುತ್ರಿ ಡಾ. ಅನ್ನಪೂರ್ಣ ಮತ್ತು ಡಾ. ಗುರುಪ್ರಸಾದ್ ರವರ ವಿವಾಹವು ಚಾಮರಾಜನಗರದ ನಂದಿಭವನದಲ್ಲಿ ಭಾನುವಾರ ನಡೆಯಿತು.
ಈ ಮದುವೆಗೆ ಆಗಮಿಸಿದ್ದ ರಾಮಸಮುದ್ರದವರೇ ಆದ ಬ್ರಿಜೇಶ್ ಕುಮಾರ್ ( ಬಾಂಬೆ) ಪತ್ನಿ ಭಾನುಮತಿ ಅವರ, 42 ಗ್ರಾಂ ತೂಕದ ಸುಮಾರು 2 ಲಕ್ಷದ 30 ಸಾವಿರ ಮೌಲ್ಯದ ಚಿನ್ನದ ಸರ, ಮದುವೆ ಮನೆಯಲ್ಲಿ ಜನಜಂಗುಳಿ ನಡುವೆ ಕಳೆದು ಹೋಯಿತು.
ಚಿನ್ನದ ಸರ ಕಳೆದುಕೊಂಡ ಮಹಿಳೆ ಭಾನುಮತಿ ಆತಂಕಕ್ಕೆ ಒಳಗಾಗಿ ಕಣ್ಣೀರು ಸುರಿಸುತ್ತಾ ಕಳೆದುಕೊಂಡ ಚಿನ್ನದ ಸರದ ಹುಡುಕಾಟ ನಡೆಸಿದ್ದರು. ಈ ವೇಳೆ ಹುಡುಕಾಟ ಗಮನಿಸಿದ ರಾಮಸಮುದ್ರದ ಗೃಹಿಣಿ ನಿರ್ಮಲಾ ನಾಗರಾಜು ಅವರು ಚಿನ್ನದ ಸರ ನನಗೆ ಸಿಕ್ಕಿದೆ ಎಂದು ಭಾನುಮತಿ ಅವರಿಗೆ ಹಿಂದಿರುಗಿಸಿದರು. ಮದುವೆ ಮನೆಯಲ್ಲಿದ್ದವರು ನಿರ್ಮಲಾ ಅವರ ಪ್ರಾಮಾಣಿಕತೆಯನ್ನು ಪ್ರಶಂಸಿಸಿದರು.