9 ವರ್ಷ ಮಾನಸಿಕ ಹಿಂಸೆ ಅನುಭವಿಸಿದೆ
Team Udayavani, May 8, 2023, 2:37 PM IST
ಗುಂಡ್ಲುಪೇಟೆ: ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡುವವರು ಕೋಮುವಾದಿ ಬಿಜೆಪಿಗೆ ಮತ ಹಾಕಬೇಡಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಬಿ. ಸೋಮಶೇಖರ್ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭ್ರಷ್ಟಾಚಾರದಲ್ಲಿ ಮಾತ್ರ ಬಿಜೆಪಿ ಇತರೆ ಪಕ್ಷಕ್ಕಿಂತ ವಿಭಿನ್ನ. ಸಮಾಜದ ಶಾಂತಿ ಹಾಳು ಮಾಡಿ, ಜಾತಿ ಜಾತಿ ಎತ್ತಿಕಟ್ಟಿ ಗೊಂದಲ ಸೃಷ್ಟಿ ಮಾಡಿ, ಮತ ಪಡೆಯಲು ಏನು ತಂತ್ರಬೇಕು ಅದನ್ನು ಬಿಜೆಪಿ ಮಾಡುತ್ತದೆ. ಮುಸ್ಲಿಂ, ದಲಿತರನ್ನು ಹೊರಗಿಟ್ಟು, ಹಿಂದು ಧರ್ಮ ಬೆಳೆಸುತ್ತೇವೆ ಎಂದು ಹೇಳಿಕೊಂಡು ಹಿಂದುತ್ವ ಬೆಳೆಸುವ ಹುನ್ನಾರ ನಡೆಸಿದ್ದಾರೆ. ಜೊತೆಗೆ ಹಂತವಾಗಿ ಸಂವಿಧಾನಾತ್ಮಕ ಸಂಸ್ಥೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾನಸಿಕ ಹಿಂಸೆ ಅನುಭವಿಸಿದೆ: ಪ್ರಧಾನಿ ನರೇಂದ್ರ ಮೋದಿ ಸುಳ್ಳನ್ನು ಹತ್ತು ಬಾರಿ ಹೇಳಿ ನಿಜ ಮಾಡುವುದರಲ್ಲಿ ನಿಪುಣರು. ನಾನು ಮೋದಿಯನ್ನು ದೊಡ್ಡ ವ್ಯಕ್ತಿ ಎಂದು ಬಿಜೆಪಿ ಸೇರಿದೆ. ಸುದೀರ್ಘ ರಾಜಕೀಯ ಜೀವನದಲ್ಲಿ ಬಿಜೆಪಿಯೇತರ ಪಕ್ಷದಲ್ಲಿದ್ದ ನಾನು 9 ವರ್ಷ ಬಿಜೆಪಿಯಲ್ಲಿ ಮಾನಸಿಕ ಹಿಂಸೆ ಅನುಭವಿಸಿದೆ. ಟಿಕೆಟ್ ಕೂಡ ಕೊಡದೇ ನಿರ್ಲಕ್ಷಿಸಿದರು ಎಂದು ದೂರಿದರು.
ಬಿಜೆಪಿಯವರು ಇಡಿ, ಸಿಬಿಐ ಇತರೆ ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳ ಮೇಲೆ ಛೂ ಬಿಟ್ಟು ಎದುರಿಸುತ್ತಿದೆ. ರಾಹುಲ್ ಗಾಂಧಿ ಆಡಿದ ಸಣ್ಣ ಮಾತನ್ನು ದೊಡ್ಡದು ಮಾಡಿ ಸದಸ್ಯತ್ವ ರದ್ದು ಮಾಡಿದ್ದೂ ಅಲ್ಲದೇ, ಅವರಿದ್ದ ಮನೆ ಖಾಲಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ದೂರ ಇಡಿ: ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಗ ಪ್ರಿಯಾಂಕ ಖರ್ಗೆ ಮತ್ತು ಕುಟುಂಬಕ್ಕೆ ಜೀವಬೆದರಿಕೆ ಹಾಕಿದ್ದಾರೆ. ಬಿಜೆಪಿ ಕೋಮುವಾದಿ ಆಗಿದ್ದು, ಅಲ್ಲಿ ಹಿಂದುಳಿದವರು, ದಲಿತರಿಗೆ ಉಳಿಗಾಲವಿಲ್ಲ. ಆದ್ದರಿಂದ ಆ ಪಕ್ಷ ದೂರವಿಡಿ ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವದ ಗುಣ ಇಲ್ಲ. ಯಡಿಯೂರಪ್ಪ ನಿವೃತ್ತರಾಗಿದ್ದಾರೆ. ಶೆಟ್ಟರ್, ಸವದಿ ಕಾಂಗ್ರೆಸ್ ಸೇರಿಸಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಯಾರ ನಾಯಕತ್ವಕ್ಕೆ ಜನ ಬೆಂಬಲ ಕೊಡುತ್ತಾರೆ. ಚುನಾವಣೆ ಸಲುವಾಗಿ ಪ್ರಧಾನಿ ಮೋದಿ ರಾಜ್ಯಕ್ಕೆ ಇಷ್ಟು ಸಮಯ ಬರುತ್ತಿರುವುದು ಆಶ್ಚರ್ಯ ತಂದಿದೆ. ಡಬಲ್ ಎಂಜಿನ್ ಸರಕಾರ ಎನ್ನುತ್ತಾರೆ. ಆದರೆ, ಅಧಿಕಾರ ಕೇಂದ್ರದಲ್ಲೇ ಕೇಂದ್ರಿಕೃತವಾಗಿದೆ. ರಾಜ್ಯಕ್ಕೆ ಜಿಎಸ್ಟಿ ಪಾಲು ಕಡಿಮೆ ಸಿಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಕಿತ್ತು ಹಾಕಿದರೆ ನಾಲ್ಕೈದು ರಾಜ್ಯಗಳ ಮೇಲೆ ಪರಿಣಾಮ ಬೀರಲಿದೆ. ಕಾಂಗ್ರೆಸ್ ಪಕ್ಷವೊಂದೇ ಪ್ರಜಾಪ್ರಭುತ್ವ ಉಳಿವು ಮತ್ತು ಸಂವಿಧಾನ ಅಡಿಯಲ್ಲಿ ಕೆಲಸ ಮಾಡುತ್ತದೆ. ದಲಿತ ವರ್ಗಕ್ಕೆ ಸೇರಿದದವರನ್ನು ಎತ್ತಿಕಟ್ಟಲಾಗುತ್ತಿರುವ ಕಾರಣ, ನಿಜವಾದ ದಲಿತರು ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯರಾದ ಬಿ.ಕೆ.ಬೊಮ್ಮಯ್ಯ, ಹಂಗಳ ನಾಗರಾಜು, ಮುಖಂಡರಾದ ಸಿ.ನಂಜುಂಡಸ್ವಾಮಿ, ಸೋಮಹಳ್ಳಿ ರವಿ, ಲಕ್ಕೂರು ಗಿರೀಶ್ ಇತರರು ಹಾಜರಿದ್ದರು.