ಕೋವಿಡ್ 19 : ಗ್ರಾಮಗಳಿಗೆ ದಿಗ್ಬಂಧನ
Team Udayavani, Mar 27, 2020, 3:27 PM IST
ಯಳಂದೂರು: ಕೋವಿಡ್ 19 ಹಿನ್ನೆಲೆಯಲ್ಲಿ ಇಡೀ ರಾಷ್ಟ್ರವೇ ಲಾಕ್ ಔಟ್ ಆಗಿದೆ. ಹೀಗಾಗಿ ಕೆಲ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಅನ್ಯರಿಗೆ ಪ್ರವೇಶವನ್ನು ನಿರ್ಬಂಧಿಸಿ, ದಿಗ್ಬಂಧನ ಹಾಕಿಕೊಂಡಿದ್ದಾರೆ.
ತಾಲೂಕಿನ ವೈ.ಕೆ.ಮೋಳೆ, ಕೃಷ್ಣಾಪುರ, ಯರಿಯೂರು ಗ್ರಾಮಗಳಲ್ಲಿ ಗ್ರಾಮಸ್ಥರು ತಮ್ಮ ಬೀದಿಗಳಿಗೆ ತೆರಳುವ ರಸ್ತೆಗಳಿಗೆ ಯಾರೂ ಬರದಂತೆ ರಸ್ತೆ ಮುಂಭಾಗದಲ್ಲಿ ಮುಳ್ಳು, ಬಿದಿರಿನ ಏಣಿಗಳು, ಮರಗಳನ್ನು ಕಟ್ಟಿ ಬೇರೆಯವರು ಯಾರೂ ಗ್ರಾಮದೊಳಗೆ ಬರಬಾರದು ಎಂದು ನಾಮ ಫಲಕವನ್ನು ಹಾಕಿದ್ದಾರೆ. ಈ ಗ್ರಾಮಗಳಿಂದ ಬೆಂಗಳೂರಿಗೆ ಹೋಗಿ ಕೆಲಸ ಮಾಡಿ, ವಾಪಸ್ಸಾಗುತ್ತಿರುವವರಿಗೂ ಕೆಲ ಗ್ರಾಮಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ, ಗ್ರಾಮಸ್ಥರನ್ನು ಹೊರತುಪಡಿಸಿ ಬೇರೆಯವರು ಯಾರೂ ಬರಬಾರದೆಂದು ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಯರಿಯೂರು ಗ್ರಾಮದ ಕಿರಣ್ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ದೇಶಾ ದ್ಯಂತ ಲಾಕ್ಡೌನ್ ಮಾಡಲಾಗಿದೆ. ನಮ್ಮನ್ನು ನಾವೇ ಮನೆಯಲ್ಲೇ ಉಳಿದುಕೊಂಡು ನಿಷೇಧಿಸಿಕೊಳ್ಳುವ ಪರಿಸ್ಥಿತಿ ಇದೆ.
ಮೈಸೂರು, ಬೆಂಗಳೂರಿ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿಂದ ಬರುವವರಿಗೆ ನೀವು ಇಲ್ಲಿಗೆ ಬರಬಾರದು ಎಂದು ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ. ಅಲ್ಲದೆ, ನಾವು ಕೂಡ ಗ್ರಾಮದಲ್ಲಿ ಮನೆಯೊ ಳಗೆ ಇದ್ದು, ಕೊರೊನಾ ವಿರುದ್ಧ ಸಮರವನ್ನು ಸಾರಿಕೊಂಡಿದ್ದೇವೆ ಎಂದರು.