ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ವಿತರಣೆ
Team Udayavani, Jun 6, 2020, 4:55 AM IST
ಚಾಮರಾಜನಗರ: ಕೋವಿಡ್ 19 ವೈರಸ್ ತಡೆಗೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆರಿಗೆ ಪ್ರೋತ್ಸಾಹಧನದ ಚೆಕ್ ಹಾಗೂ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲವನ್ನು ಸಹಕಾರ ಸಚಿವ ಸೋಮಶೇಖರ್ ವಿತರಿಸಿದರು.
ನಗರದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿತರಿಸಿದರು. ಶಾಸಕ ನರೇಂದ್ರ ಮಾತನಾಡಿ, ಕೋವಿಡ್ ವೈರಾಣು ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸಿದ್ದಾರೆ.
ಸರ್ಕಾರ ಅವರ ಸೇವೆ ಗುರುತಿಸಿ ಜಿಲ್ಲೆಯ 2,500 ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ. ಪ್ರೋತ್ಸಾಹಧನ ನೀಡುತ್ತಿದೆ ಎಂದರು. ಶಾಸಕ ಮಹೇಶ್ ಮಾತನಾಡಿ, ಆಶಾ ಕಾರ್ಯಕರ್ತೆಯರ ಅವಿರತ ಸೇವೆಗೆ ಸರ್ಕಾರ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡ ಬೇಕು. ಸರ್ಕಾರ ರೈತರಿಗೆ 75 ಕೋಟಿ ರೂ. ಸಾಲ ಶೂನ್ಯ ಬಡ್ಡಿದರದಲ್ಲಿ ವಿತರಿಸುತ್ತಿರುವುದು ಉತ್ತಮಬೆಳವಣಿಗೆ ಎಂದರು.
ಶಾಸಕ ನಿರಂಜನಕುಮಾರ್, ಜಿಪಂ ಅಧ್ಯಕ್ಷೆ ಅಶ್ವಿನಿ, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಎಸ್ಪಿ ಆನಂದಕುಮಾರ್, ಸಹಕಾರ ಇಲಾಖೆ ಉಪನಿಬಂಧಕ ವಿಕ್ರಮ ರಾಜೇ ಅರಸ್, ಚಾಮುಲ್ ಅಧ್ಯಕ್ಷ ನಂಜುಂಡಪ್ರಸಾದ್, ಗೌರವ ನಿರ್ದೇಶಕ ರವಿಶಂಕರ್, ನಿರ್ದೇಶಕ ಬಸವ ರಾಜು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್ಗೌಡ ಮತ್ತಿತರರಿದ್ದರು.