ಗುಂಬಳ್ಳಿ ಗ್ರಾಮ ಪಂಚಾಯಿತಿಗೆ 3ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ
Team Udayavani, Sep 24, 2021, 3:26 PM IST
ಯಳಂದೂರು: ತಾಲೂಕಿನ ಗುಂಬಳ್ಳಿ ಗ್ರಾಮ ಪಂಚಾಯಿತಿಗೆ 2020-21 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಮೂರನೇ ಬಾರಿ ರಾಜ್ಯಮಟ್ಟದ ಪ್ರಶಸ್ತಿ ಪಡೆಯುತ್ತಿರುವುದು ವಿಶೇಷವಾಗಿದೆ.
ಬಿಳಿಗಿರಿರಂಗನಬೆಟ್ಟದ ತಪ್ಪಲಿನಲ್ಲಿರುವ ಈ ಪಂಚಾಯಿತಿಯು ಗುಂಬಳ್ಳಿ, ಕೃಷ್ಣಾಪುರ, ಉಪ್ಪಿನ ಮೋಳೆ, ಕೊಮಾರಪುರ ಗ್ರಾಮಗಳನ್ನು ಒಳಗೊಂಡಿದೆ. 17 ಜನ ಸದಸ್ಯ ಬಲದ ಪಂಚಾಯಿತಿ ಯಲ್ಲಿ 2011ರ ಜನಗಣತಿ ಪ್ರಕಾರ 7,979 ಜನಸಂಖ್ಯೆ ಇದೆ. ನರೇಗಾದಡಿ 2021-21 ನೇ ಸಾಲಿನಲ್ಲಿ 39,838 ಮಾನವ ದಿನಗಳನ್ನು ಸೃಜಿಸಲಾಗಿದೆ. ಕೆರೆ, ಕಟ್ಟೆ, ಕಾಲುವೆ ಸೇರಿದಂತೆ 84 ಸಮುದಾಯ ಕಾಮಗಾರಿ ಗಳು, ವೈಯುಕ್ತಿ ಕಾಮಗಾರಿಗಳಲ್ಲಿ 45 ಇಂಗುಗುಂಡಿ, 85 ಕೈ ತೋಟ, 12 ದನದ ಕೊಟ್ಟಿಗೆ, 15 ವಸತಿ ಯೋಜನೆ ಹಾಗೂ 1 ಗೊಬ್ಬರದ ಗುಂಡಿ, 79 ಶೌಚಗೃಹ ನಿರ್ಮಿಸಲಾಗಿದೆ.
ಕುಡಿಯುವ ನೀರು, ಸುಗಮ ಆಡಳಿತದ ಸಾಧನೆ, ಗ್ರಾಮಸಭೆಗಳ ಆಯೋಜನೆ, ಸ್ವಚ್ಛ ಭಾರತ್, ಮಿಷಿನ್ ತೆರಿಗೆ ವಸೂಲಾತಿ, 14 ನೇ ಹಣಕಾಸು ನೀತಿ, ಅರ್ಥಿಕ ಪ್ರಗತಿ, ವಿಶೇಷ ವಾರ್ಡ್, ಗ್ರಾಮ ಸಭೆ, ಜಮಾಬಂಧಿ, ಸಾಮಾಜಿಕ ಲೆಕ್ಕ ತಪಾಸಣೆ, ವಾರ್ಷಿಕ ವರದಿಯಲ್ಲಿ ಗ್ರಾಪಂ ಪ್ರಗತಿ ಸಾಧಿಸಿದೆ. 2000 ಗಿಡ: ಗ್ರಾಮ ಪಂಚಾಯಿತಿಯಲ್ಲಿ ಪ್ರಸಕ್ತ ವರ್ಷದಲ್ಲಿ 2000 ಗಿಡ ನೆಡಲಾಗಿದೆ. ಇದರೊಂದಿಗೆ ಹಸರೀಕರಣಕ್ಕೆ ಒತ್ತು ನೀಡ ಲಾಗಿದೆ. ಕೋವಿಡ್ ವೇಳೆ ಅಂಗನ ವಾಡಿ, ಆಶಾ ಕಾರ್ಯಕರ್ತೆಯರಿಗೆ, ವಾರಿ ಯರ್ಸ್ಗಳಿಗೆ ಆಹಾರ ಕಿಟ್ ವಿತರಿಸಲಾಗಿದೆ. ಸಕಾಲ ಯೋಜನೆಯಲ್ಲಿ 1,616 ಅರ್ಜಿಗಳು ಬಂದಿದ್ದು ಎಲ್ಲಾ ಅರ್ಜಿ ವಿಲೇವಾರಿ ಮಾಡಲಾಗಿದೆ. 118 ಇ-ಸ್ವತ್ತು, ಬಾಪೂಜಿ ಸೇವಾ ಕೇಂದ್ರದಿಂದ ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ವಾಸಸ್ಥಳ ದೃಢೀಕರಣ ಮತ್ತಿತರ ಸೇವೆಗಳನ್ನು ಒದಗಿಸಲಾಗಿದೆ.
ಇದನ್ನೂ ಓದಿ:ಕನಸು ನನಸಾಗಿಸಲು ವಯಸ್ಸಿನ ಹಂಗೇಕೆ?82ನೇ ವಯಸ್ಸಿನಲ್ಲಿ ಬಾಹ್ಯಾಕಾಶ ಪ್ರಯಾಣ…
ಅಭಿವೃದಿ ದೂರದೃಷ್ಟಿ ಗೆ ತೊಡಕಾಗಲಿಲ್ಲ ದೃಷ್ಟಿ ದೋಷ
ಗುಂಬಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ಗೆ ದೃಷ್ಟಿ ದೋಷವಿದೆ. ದಿವ್ಯಾಂಗರಾಗಿರುವ ಇವರು ಪಂಚಾಯಿತಿಯ ಅಭಿವೃದ್ಧಿ ಕೆಲಸಗಳಲ್ಲಿ ಸದಾ ಮುಂದಿರುತ್ತಾರೆ. ಪ್ರತಿ ಕೆಲಸವನ್ನು ಖುದ್ದು ನಿಂತು ಪರಿಶೀಲಿಸಿ ಕ್ರಮ ವಹಿಸುವ ಇವರ ಕಾರ್ಯವೈಖರಿ ಇತರರಿಗೆ ಮಾದರಿಯಾಗಿದೆ. ಪಂಚಾಯಿತಿಗೆ 203 ಅಂಕ ಪಡೆಯುವುದರೊಂದಿಗೆ ಮೂರನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿದೆ. ಅ.2 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ನಮ್ಮ ಪಂಚಾಯಿತಿಗೆ 203 ಅಂಕಗಳು ಲಭಿಸಿವೆ. ಈ ಹಿಂದೆ 2016-17 ನೇ ಸಾಲು ಹಾಗೂ 17-18 ನೇ ಸಾಲಿನಲ್ಲಿ ಪ್ರಶಸ್ತಿಗೆ ನಮ್ಮ ಪಂಚಾಯಿತಿ ಭಾಜನವಾಗಿದ್ದು ಈಗ 3ನೇ ಬಾರಿ ಪ್ರಶಸ್ತಿ ಲಭಿಸಿದೆ. ಇದಕ್ಕೆ ನಿಗದಿಯಾಗಿದ್ದ ಬಹುತೇಕ ಮಾನದಂಡಗಳಲ್ಲಿ ಪಂಚಾಯಿತಿ ಪ್ರಗತಿ ಸಾಧಿಸಿದೆ. ಇದಕ್ಕೆ ಸಹಕರಿಸಿದ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಲಾಗುವುದು.
– ಮಹೇಶ್, ಪಿಡಿಒ ಗುಂಬಳ್ಳಿ ಗ್ರಾಪಂ