ನಗರ ಮೋಹ ಬಿಟ್ಟು ಗ್ರಾಮೀಣ ಬದುಕಿನ ಮೌಲ್ಯ ಅರಿಯಿರಿ
Team Udayavani, Feb 13, 2019, 7:28 AM IST
ಸಂತೆಮರಹಳ್ಳಿ: ಇತ್ತೀಚೆಗೆ ವಿದ್ಯಾರ್ಥಿ ಗಳು, ಯುವಕರು ಗ್ರಾಮಗಳನ್ನು ತೊರೆದು ಪಟ್ಟಣ ಸೇರುವ ಪ್ರವೃತ್ತಿ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಗ್ರಾಮೀಣ ಬದುಕಿನ ಅರಿವು ಮೂಡಿಸಿಕೊಳ್ಳಬೇಕು, ಇದರಲ್ಲಿನ ಮೌಲ್ಯಗಳನ್ನು ಅರಿತು ಕೊಳ್ಳಬೇಕು ಎಂದು ಆಹಾರ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ. ಎಸ್.ಈ. ಮಹದೇವಪ್ಪ ಸಲಹೆ ನೀಡಿದರು.
ಯಳಂದೂರು ತಾಲೂಕಿನ ಟಿ. ಹೊಸೂರು ಗ್ರಾಮದಲ್ಲಿ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ಮಾತನಾಡಿದ ಅವರು, ಬಿಳಿಗಿರಿ ಏಜುಕೇಷನ್ ಸೊಸೈಟಿ ಕಳೆದ 26 ವರ್ಷಗಳಿಂದಲೂ ಗ್ರಾಮೀಣ ಭಾಗದಲ್ಲಿ ಪದವಿ ಶಿಕ್ಷಣ ನೀಡುತ್ತಿದೆ.
ಪ್ರತಿ ವರ್ಷವೂ ಎನ್ಎಸ್ಎಸ್ ಶಿಬಿರ ಆಯೋಜಿಸುತ್ತದೆ. ಇದರಲ್ಲಿ ಗ್ರಾಮ ನೈರ್ಮಲೀಕರಣ, ರಸ್ತೆ, ಸ್ವಚ್ಛತೆ, ಗಿಡ ನೆಡುವುದು, ಆರೋಗ್ಯ ಅರಿವು, ಕಾನೂನು, ಶಿಕ್ಷಣ ಅರಿವು ಹಾಗೂ ಮತ ದಾನದ ಮಹತ್ವದ ಬಗ್ಗೆ ಗ್ರಾಮೀಣರನ್ನು ಶಿಕ್ಷಿತರಾಗಿ ಮಾಡುವಲ್ಲಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಪ್ರಾಂಶುಪಾಲ ಎಂ.ವಿ. ಪುಷ್ಪ ಕುಮಾರ್ ಮಾತನಾಡಿ, ಸರ್ಕಾರಿ ಬಸ್, ಆಸ್ಪತ್ರೆ, ಶಾಲೆಗಳು ಯಾರಿಗೂ ಬೇಡ ವಾಗಿದೆ. ಆದರೆ, ಸರ್ಕಾರಿ ಉದ್ಯೋಗ ಬೇಕು ಎನ್ನುವತ್ತ ಯುವ ಪೀಳಿಗೆ ಯೋಚಿಸುತ್ತಿದೆ. ಇಂತಹ ಆಲೋಚನೆ ಯಿಂದ ಹೊರಬರಬೇಕಿದೆ ಎಂದರು.
ಸಂಸ್ಥೆಯ ಸದಸ್ಯರಾದ ರಾಚಪ್ಪ, ಪತ್ರಕರ್ತರಾದ ಯರಿಯೂರು ನಾಗೇಂದ್ರ, ಎಸ್ಡಿಎಂಸಿ ಅಧ್ಯಕ್ಷ ಶಿವರಾಮೇಗೌಡ, ಮರಿಸ್ವಾಮಿ ಗೌಡ, ಮಹಾದೇವೇಗೌಡ, ಮಹದೇವ ಸ್ವಾಮಿ, ರಂಗಸ್ವಾಮಿ ಎನ್ಎಸ್ಎಸ್ ಅಧಿಕಾರಿ ಶಿವರುದ್ರಪ್ಪ, ಪ್ರಕಾಶ್ಮೂರ್ತಿ, ಸ್ವಯಂಸೇವಕ ಪ್ರದೀಪ್ಕುಮಾರ್ ಇತರರು ಹಾಜರಿದ್ದರು.