ಕುತೂಹಲ ಕೆರಳಿಸಿರುವ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ
Team Udayavani, Mar 9, 2023, 3:10 PM IST
ಚಾಮರಾಜನಗರ: ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳಿರುವಾಗಲೇ, ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳು ನಡೆಸುತ್ತಿರುವ ಚಟುವಟಿಕೆಗಳು ತೀವ್ರ ಕುಮೂಡಿಸಿವೆ. ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದರೂ, ಬಿಎಸ್ಪಿ ಹಾಗೂ ಜೆಡಿಎಸ್ ಪಕ್ಷಗಳು ಮೇಲಿನೆರಡು ಪಕ್ಷಗಳ ಅಭ್ಯರ್ಥಿಗಳ ಹಣೆಬರಹವನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿವೆ.
ಬಿಜೆಪಿ: ಬಿಎಸ್ಪಿಯಿಂದ ಬಂದ ಶಾಸಕ ಎನ್ ಮಹೇಶ್ ಅವರು ಈಗ ಸಂಪೂರ್ಣ ಆರ್ಎಸ್ಎಸ್ ಪ್ರಣೀತ ಬಿಜೆಪಿ ನಾಯಕರಂತೆಯೇ ಆಗಿ ಹೋಗಿದ್ದಾರೆ. ಬಿಎಸ್ ಪಿಯಲ್ಲಿದ್ದಾಗ ಯಾವ ರೀತಿ ಎಡಪಂಥೀಯ ವಿಚಾರಧಾರೆಗಳನ್ನು ಪ್ರತಿಪಾದಿಸುತ್ತಿದ್ದರೋ, ಈಗ ಬಿಜೆಪಿಯಲ್ಲಿ ಅಷ್ಟೇ ಪ್ರಖರವಾಗಿ ಆರ್ಎಸ್ಎಸ್ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಬಿಜೆಪಿಗೆ ಬರುವ ಮುಂಚೆ ಟಿಕೆಟ್ ಖಚಿತಪಡಿಸಿಕೊಂಡೇ ಬಂದಿದ್ದರಿಂದ ಈಗ ಅವರೇ ಈ ಬಾರಿಯ ಬಿಜೆಪಿ ಅಭ್ಯರ್ಥಿ ಎಂಬುದರಲ್ಲಿ ಯಾರಿಗೂ ಅನುಮಾನವಿಲ್ಲ. ಬಿಎಸ್ಪಿಯಲ್ಲಿ ಅವರ ಬೆಂಬಲಿಗರಾಗಿದ್ದವರಲ್ಲಿ ಕೆಲವರು ಬಿಎಸ್ಪಿಯಲ್ಲಿದ್ದು, ಇನ್ನು ಕೆಲವರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಅಣ್ಣ ಎಂದು ಅವರನ್ನು ನಂಬಿದ್ದ ಬಿಎಸ್ಪಿಯ ಬೆಂಬಲಿಗರಿಗೆ ನೀಲಿ ಬಾವುಟದ ಕ್ರಾಂತಿಕಾರಿ ನಾಯಕ, ಕೇಸರಿ ಬಾವುಟ ಹಿಡಿದದ್ದು ಅರಗಿಸಿಕೊಳ್ಳಲಾಗದ ತುತ್ತಾಗಿದೆ.
ಅಂಥವರು ಮಹೇಶ್ ಅವರ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ. ಫೇಸ್ಬುಕ್ನಲ್ಲಿ ಅವರನ್ನು ಟ್ರೋಲ್ ಮಾಡುವುದರಿಂದ ಹಿಡಿದು ಕೆಲವು ಗ್ರಾಮಗಳಲ್ಲಿ ಅವರ ಪೋಸ್ಟರ್ ಗಳನ್ನು ವಿರೂಪ ಗೊಳಿಸುವವರೆಗೆ ಪ್ರತಿರೋಧ ನಡೆಸುತ್ತಿದ್ದಾರೆ. ಇತ್ತೀಚಿಗೆ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮುಖಂಡರ ಸಮ್ಮುಖದಲ್ಲೇ ಯುವಕನೊಬ್ಬ ಮಹೇಶ್ ವಿರುದ್ಧ ಕಿಡಿಕಾರಿದ್ದೂ ಆಯಿತು. ಆದರೆ ಇದಕ್ಕೆಲ್ಲ ಮಹೇಶ್ ಅವರು ತಲೆಕೆಡಿಸಿಕೊಂಡಿಲ್ಲ. ಇನ್ನೊಂದೆಡೆ ಮಹೇಶ್ಗೆ ಟಿಕೆಟ್ ಖಚಿತ ಎಂಬುದು ತಿಳಿಯುತ್ತಿದ್ದಂತೆ ಬಿಜೆಪಿಯ ಮಾಜಿ ಶಾಸಕ, ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿ ಜಿ.ಎನ್. ನಂಜುಂಡಸ್ವಾಮಿ ಬಿಜೆಪಿಗೆ ಗುಡ್ಬೈ ಹೇಳಿ ಕಾಂಗ್ರೆಸ್ ಸೇರಿದ್ದಾರೆ.
ಕಾಂಗ್ರೆಸ್: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ತೀವ್ರ ಪೈಪೋಟಿ ಇರುವುದು ಕಾಂಗ್ರೆಸ್ ಪಕ್ಷದಲ್ಲಿ. ಅಲ್ಲಿ ಈಗಾಗಲೇ ಮೂವರು ಮಾಜಿ ಶಾಸಕರ ನಡುವೆ ಟಿಕೆಟ್ಗೆ ತೀವ್ರ ಪೈಪೋಟಿ ಇದೆ. ಇದೀಗ ಇನ್ನೋರ್ವ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಪಾಳಯಕ್ಕೆ ಬಂದಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಜಿಎನ್ಎನ್. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಲ್ಲ. ಆದರೂ ಅಲ್ಲಿ ಅಭ್ಯರ್ಥಿಯಾಗುವ ಅರ್ಹತೆ ಪಡೆದಿರುವ ನಾಲ್ವರು ಮಾಜಿ ಶಾಸಕರು ಇರುವುದು ಒಂದು ವಿಶೇಷವೆಂದೇ ಹೇಳಬೇಕು. ಜಿಲ್ಲೆಯ ಮೂರು ಕ್ಷೇತ್ರಗಳ ಪೈಕಿ ಟಿಕೆಟ್ ನೀಡುವಲ್ಲಿ ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿರುವ ಕ್ಷೇತ್ರವೆಂದರೆ, ಅದು ಕೊಳ್ಳೇಗಾಲ. ಅಲ್ಲಿ ಎ.ಆರ್.ಕೃಷ್ಣಮೂರ್ತಿ, ಎಸ್. ಜಯಣ್ಣ ಮತ್ತು ಎಸ್. ಬಾಲರಾಜ್ ನಡುವೆ ಟಿಕೆಟ್ಗಾಗಿ ಪ್ರಬಲ ಪೈಪೋಟಿಯಿದೆ. ಅದರಲ್ಲೂ ಕೃಷ್ಣಮೂರ್ತಿ ಮತ್ತು ಬಾಲರಾಜ್ ನಡುವೆ ಟಿಕೆಟ್ ಗಾಗಿ ಟಗ್ ಆಫ್ ವಾರ್ ನಡೆಯುತ್ತಿದೆ. ಸಂತೆಮರಹಳ್ಳಿ ಕ್ಷೇತ್ರದಲ್ಲಿ 1 ಓಟಿನ ಸೋಲಿನ ನಂತರ ಮತ್ತಾವುದೇ ಚುನಾವಣೆಯಲ್ಲೂ ಗೆಲ್ಲಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಚುನಾವಣೆಯಲ್ಲಿ ನನಗೆ ಒಂದು ಅವಕಾಶ ನೀಡಿ ಎಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರ ಸಮಕ್ಷಮದಲ್ಲೇ ಎಆರ್ಕೆ ಹೇಳಿಕೊಂಡರು.
ಬಾಲರಾಜ್ ಮತ್ತು ಜಯಣ್ಣ ಸಹ ಪರೋಕ್ಷವಾಗಿ ತಮಗೇ ಟಿಕೆಟ್ ನೀಡಬೇಕೆಂಬ ಧಾಟಿಯಲ್ಲಿ ಮಾತನಾಡಿದರು. ಎ.ಆರ್. ಕೃಷ್ಣಮೂರ್ತಿ ಮತ್ತು ಜಯಣ್ಣ ವಿಪಕ್ಷ ನಾಯಕ ಸಿದ್ದರಾಮಯ್ಯ ರನ್ನು ನೆಚ್ಚಿಕೊಂಡರೆ, ಬಾಲರಾಜ್ ಅವರು ತಮ್ಮ ಗೆಳೆಯ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣರನ್ನು ನೆಚ್ಚಿ ಕೊಂಡಿದ್ದಾರೆ. ಅಂತಿಮವಾಗಿ ಯಾರಿಗೆ ಟಿಕೆಟ್ ದೊರಕ ಬಹುದೆಂಬುದು ತೀವ್ರ ಕುತೂಹಲಕಾರಿಯಾಗಿದೆ.
ಜೆಡಿಎಸ್: ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್ಗೆ ಪೈಪೋಟಿ ಇರುವುದು ಸಹಜ. ಆದರೆ ಕೊಳ್ಳೇಗಾಲದಲ್ಲಿ ಜೆಡಿಎಸ್ ಟಿಕೆಟ್ ಗೂ ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟಿದೆ! ಕೊಳ್ಳೇಗಾಲದಲ್ಲಿ ಕೋಟಿ ವೆಚ್ಚದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆ ನಿರ್ಮಿಸಿ ವೃತ್ತ ಮಾಡಿ, ಜನಪ್ರಿಯತೆ ಗಳಿಸಿದ ಓಲೆ ಮಹದೇವ ಅವರು ಅಭ್ಯರ್ಥಿಯಾಗುವ ಉದ್ದೇಶ ದಿಂದಲೇ ಜೆಡಿಎಸ್ ಸೇರಿದರು.
ಇನ್ನೇನು ಪಕ್ಷದಲ್ಲಿ ಅವರ ಚಟುವಟಿಕೆ ಶುರುವಾಗಬೇಕು ಎನ್ನುವಾಗಲೇ ಅವರ ಆಸೆಗೆ ಮಾಜಿ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ತಣ್ಣೀರೆರಚಿದ್ದಾರೆ. ಅದ್ಯಾವುದೋ ಲೆಕ್ಕಾಚಾರದಲ್ಲಿ ಬಿಜೆಪಿ ಟಿಕೆಟ್ ಸಿಗಬಹುದು ಎಂಬ ದೂರದ ಆಸೆ ಇಟ್ಟುಕೊಂಡು, ಸರ್ಕಾರಿ ಗೌರವದ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗೆ ರಾಜೀನಾಮೆ ನೀಡಿ ಪುಟ್ಟಸ್ವಾಮಿ ರಾಜಕೀಯಕ್ಕೆ ಧುಮುಕಿದರು. ಆದರೆ ಹಾಲಿ ಶಾಸಕ ಎನ್. ಮಹೇಶ್ ಅವರಿಗೆ ಟಿಕೆಟ್ ಖಚಿತವಾಗುತ್ತಿದ್ದಂತೆ ಅದರ ಆಸೆ ಬಿಟ್ಟು, ಜೆಡಿಎಸ್ಗೆ ಸೇರ್ಪಡೆಯಾದರು. ಟಿಕೆಟ್ ಖಚಿತಪಡಿಸಿಕೊಂಡೇ ಅವರು ಜೆಡಿಎಸ್ ಸೇರಿದ್ದಾರೆ ಎನ್ನಲಾಗುತ್ತಿದ್ದು, ಇದು ಸಿಂಗಲ್ ಆಸ್ಪಿರೆಂಟ್ ಆಗಿದ್ದ ಓಲೆ ಮಹದೇವ ಅವರಿಗೆ ಇರುಸು ಮುರುಸು ಉಂಟುಮಾಡಿದೆ. ನನಗೇ ಟಿಕೆಟ್ ಖಚಿತ ಪುಟ್ಟಸ್ವಾಮಿಯವರಿಗೆ ಕೊಡುವುದಿಲ್ಲ ಎಂದು ಅವರು ಸುದ್ದಿಗೋಷ್ಠಿಯನ್ನೂ ಮಾಡಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿಗೆ ಮಗ್ಗುಲ ಮುಳ್ಳಾಗಿರುವ ಬಿಎಸ್ಪಿ-ಜೆಡಿಎಸ್ ಅಭ್ಯರ್ಥಿಗಳು! : ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಪೈಪೋಟಿ ಇದ್ದರೂ, ಬಿಎಸ್ಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಇವರೆಡೂ ಪಕ್ಷದ ಅಭ್ಯರ್ಥಿಗಳಿಗೆ ಮಗ್ಗಲು ಮುಳ್ಳಾಗಲಿದ್ದಾರೆ. ಬಿಎಸ್ಪಿ ಅಭ್ಯರ್ಥಿ ಕಾಂಗ್ರೆಸ್ ಬುಟ್ಟಿಗೆ ಬೀಳುವ ಮತಗಳಲ್ಲಿ ಯಥಾನುಶಕ್ತಿ ಸೆಳೆಯಲಿದ್ದಾರೆ. ಕಾಂಗ್ರೆಸ್ಗೆ ಹೆಚ್ಚಿನ ಪ್ರಮಾಣದಲ್ಲಿ ಹೋಗುತ್ತಿದ್ದ ದಲಿತರ ಮತಗಳಲ್ಲಿ ಒಂದಷ್ಟು ಮತಗಳನ್ನು ಬಿಎಸ್ಪಿ ಕಸಿಯಲಿದೆ. ಇನ್ನು ಜೆಡಿಎಸ್ನಲ್ಲಿ ಪೊಲೀಸ್ ಪುಟ್ಟಸ್ವಾಮಿಯವರೇನಾದರೂ ಅಭ್ಯರ್ಥಿಯಾದರೆ, ಅದು ಬಿಜೆಪಿ ಓಟ್ ಬ್ಯಾಂಕ್ ಗೆ ಡಿಸ್ಟರ್ಬ್ ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಪುಟ್ಟಸ್ವಾಮಿ ಲಿಂಗಾಯತ ಸಮುದಾಯದ ಒಂದಷ್ಟು ಓಟುಗಳನ್ನಾದರೂ ಸೆಳೆಯಲಿದ್ದಾರೆ. ಒಂದೊಂದು ಮತವೂ ಅಮೂಲ್ಯವಾಗಿರುವ ಈ ಸಂದರ್ಭದಲ್ಲಿ ಪುಟ್ಟಸ್ವಾಮಿ ಪಡೆದುಕೊಳ್ಳಲಿರುವ ಮತಗಳು ಬಿಜೆಪಿ ಮೇಲೆ ಪರಿಣಾಮ ಬೀರಲಿವೆ.
ಬಿಎಸ್ಪಿ ಟಿಕೆಟ್ಗೆ ಪೈಪೋಟಿಯೇ ಇಲ್ಲ : ಕೊಳ್ಳೇಗಾಲ ಕ್ಷೇತ್ರ ಬಿಎಸ್ಪಿಯ ಭದ್ರನೆಲೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎನ್. ಮಹೇಶ್ ಅವರ ಗೆಲುವು ಅದನ್ನು ಸಾಬೀತು ಪಡಿಸಿದೆ. ಆದರೆ ಅವರು ಈಗ ಬಿಜೆಪಿ ಸೇರಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಮಲ್ ನಾಗರಾಜು ಅಲ್ಲಿ ಬಿಎಸ್ಪಿ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ. ಸದ್ಯದ ಮಟ್ಟಿಗೆ ಅವರಿಗೆ ಟಿಕೆಟ್ ಪೈಪೋಟಿಗರು ಇಲ್ಲ
– ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ