ರಸ್ತೆಗೆ ಹಾಕಿದ್ದ ಡಾಂಬರನ್ನು ಕಿತ್ತು ಪ್ರತಿಭಟನೆ
Team Udayavani, Sep 1, 2020, 1:55 PM IST
ಗುಂಡ್ಲುಪೇಟೆ: ತಾಲೂಕಿನ ತೊಂಡವಾಡಿ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿ, ರಸ್ತೆಗೆ ಹಾಕಿದ್ದ ಡಾಂಬರನ್ನು ಕಿತ್ತು ಪ್ರತಿಭಟಿಸಿದರು.
ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಪಕ್ಕದಲ್ಲಿರುವ ತೊಂಡವಾಗಿ ಗೇಟ್ ನಿಂದ ಗ್ರಾಮಕ್ಕೆ ತೆರಳುವ ರಸ್ತೆಯನ್ನು ಡಾಂಬರು ಮಾಡಿ, ಅಭಿ ವೃದ್ಧಿ ಕಾಮಗಾರಿಯನ್ನು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. ಇತ್ತೀಚಿಗೆ ಶಾಸಕ ನಿರಂಜನಕುಮಾರ್ ಭೂಮಿ ಪೂಜೆ ನಡೆಸಿದ್ದರು. ಆದರೆ, ನಂಜ ನಗೂಡು ಮೂಲ ಗುತ್ತಿಗೆದಾರರು ಈ ಕಾಮಗಾರಿಯನ್ನು ಗುತ್ತಿಗೆ ಪಡೆದು ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡುತ್ತಿದ್ದಾರೆ. ಡಾಂಬರು ಮಾಡಿ ಕೇವಲ 2 ದಿನಗಳು ಕಳೆದಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಡಾಂಬರು ಕಿತ್ತು ಬರುತ್ತಿದೆ ಎಂದು ಆರೋಪಿಸಿದರು.
ಕೇವಲ ರಸ್ತೆಯ ಮೇಲೆ ಅರ್ಧ ಇಂಚಿನಷ್ಟು ಮಾತ್ರ ಡಾಂಬರು ಲೇಪನ ಮಾಡಲಾಗುತ್ತಿದೆ. ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ರಸ್ತೆಯನ್ನು ಕಳಪೆ ಗುಣಮಟ್ಟದಲ್ಲಿ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಬರಿಗೈನಲ್ಲಿ ಡಾಂಬರನ್ನು ಕಿತ್ತು ಕಳಪೆ ಕಾಮಗಾರಿಯನ್ನು ತೋರಿಸಿದರು. ಇನ್ನಾದರೂ ಗುತ್ತಿಗೆದಾರರು ಅಂದಾಜುಪಟ್ಟಿಯಲ್ಲಿ ಅಳವಡಿಸಿಕೊಂಡಿರುವ ಸಾಮಗ್ರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಬಳಸಿ, ಗ್ರಾಮಕ್ಕೆ ರಸ್ತೆಯನ್ನು ನಿರ್ಮಿಸಿಕೊಡಬೇಕು ತಪ್ಪಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.