ಭಾರತದಲ್ಲಿ ಆರ್ ಎಸ್ ಎಸ್ ನವರೇ ನೈಜ ತಾಲಿಬಾನಿಗಳು : ಧ್ರುವನಾರಾಯಣ ಟೀಕೆ
Team Udayavani, Aug 18, 2021, 6:18 PM IST
ಚಾಮರಾಜನಗರ : ಭಾರತ ದೇಶದಲ್ಲಿ ಆರ್ ಎಸ್ ಎಸ್ ನವರೇ ನೈಜ ತಾಲಿಬಾನಿಗಳು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಟೀಕಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ವಿರೋಧಿಗಳು ಆಪ್ಘಾನಿಸ್ತಾನ ನೋಡಿ ತಿಳಿಯಲಿ ಎಂಬ, ಮೈಸೂರು ಸಂಸದ ಪ್ರತಾಪಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದರು.
ತಾಲಿಬಾನ್ಗಳು ಪ್ರಗತಿಪರತೆಗೆ ವಿರುದ್ಧವಾಗಿ ಯಾವಾಗಲೂ ಧಾರ್ಮಿಕ ದೃಷ್ಟಿಯಿಂದಲೇ ಎಲ್ಲವನ್ನೂ ಮಾಡುತ್ತಿದ್ದಾರೋ ಅದೇ ರೀತಿ ಭಾರತದಲ್ಲಿ ಆರ್ ಎಸ್ ಎಸ್ ಸಹ ಕೇವಲ ಧರ್ಮವನ್ನೇ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ. ಆಪ್ಘಾನಿಸ್ತಾನದ ರೀತಿಯೇ ಇಲ್ಲಿ ಆರ್ಎಸ್ಎಸ್ನವರು ವರ್ತಿಸುತ್ತಿದ್ದಾರೆ.
ಇದನ್ನೂ ಓದಿ : ಪ್ರವಾಹ ಪರಿಹಾರಕ್ಕಾಗಿ ಮುಖ್ಯಮಂತ್ರಿ ಭೇಟಿ ಮಾಡಿದ ಮಾಜಿ ಸಚಿವ ಹುಕ್ಕೇರಿ ನೇತೃತ್ವದ ನಿಯೋಗ
ತಾಲಿಬಾನ್ ಗಳ ರೀತಿಯ ವರ್ತನೆಯಿಂದ ದೇಶಕ್ಕೆ ಆಗುವ ಅನಾಹುತದ ಬಗ್ಗೆ ಕಟ್ಟೆಚ್ಚರ ವಹಿಸುವ ಕುರಿತು ಸಂಸದರು ಯೋಚಿಸಲಿ ಎಂದು ಸಲಹೆ ನೀಡಿದರು.
ತಾಲಿಬಾನ್ಗಳಿಗೂ ಸಿಎಎಗೂ ಹೇಗೆ ಸಂಬಂಧ ಕಲ್ಪಿಸುತ್ತಾರೆ? ಅಸ್ಸಾಂಗೆ ಬಾಂಗ್ಲಾದೇಶದಿಂದ ಮುಸ್ಲಿಂರೇ ಜಾಸ್ತಿ ಬಂದಿದ್ದಾರೆಂಬ ದೃಷ್ಟಿಕೋನದಿಂದ ಸಿಎಎ,ಎನ್ ಆರ್ ಸಿ ಜಾರಿಗೆ ತಂದರು.
ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ತಿಳಿದ ಬಳಿಕ ಸುಮ್ಮನಾದರು. ಬಿಜೆಪಿ ಒಂದು ಕೋಮುವಾದಿ ಪಕ್ಷ, ಆ ಪಕ್ಷ ತನ್ನಲ್ಲೇ ಕೋಮುವಾದಿತನವನ್ನು ಇಟ್ಟುಕೊಂಡು , ಇನ್ನೊಂದು ಧರ್ಮದ ಕೋಮುವಾದದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಟೀಕಿಸಿದರು.
ಮಾನ ಇದ್ದರೇ ಮಾನನಷ್ಟ ಮೊಕದ್ದಮೆ ಹಾಕಲಿ: ಮಾನ ಇದ್ದರೆ ಮಾನನಷ್ಟ ಮೊಕದ್ದಮೆ ಹೂಡಲಿ. ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಧ್ರುವ ವ್ಯಂಗ್ಯವಾಡಿದರು.
ಕಾಂಗ್ರೆಸ್ ಮುಖಂಡರಾದ ರಾಮಲಿಂಗಾರೆಡ್ಡಿ, ಲಕ್ಷ್ಮಣ್ ಮತ್ತಿತರರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆಂಬ ಅವರ ಹೇಳಿಕೆ ನೋಡಿದ್ದೇನೆ. ಮಾನದ ಬಗ್ಗೆ ನಿಜವಾಗಲೂ ಯೋಚನೆ ಮಾಡುವವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ನೆಹರೂ ಕುಟುಂಬದ ವಿರುದ್ಧ ಮಾತನಾಡುವ ಮುನ್ನ ಮಾನದ ಬಗ್ಗೆ ಯೋಚಿಸಬೇಕಿತ್ತು, ಅವರಾಡಿದ ಮಾತುಗಳು ಪಕ್ಷದ ಪ್ರಧಾನ ಕಾರ್ಯದರ್ಶಿ ಬಾಯಲ್ಲಿ ಬರುವ ಮಾತುಗಳೇ ? ಎಂದು ಕಿಡಿಕಾರಿದರು.
ಮೊದಲು ದುರಂಹಕಾರದ ಪರಮಾವಧಿ ಬಿಟ್ಟು ನಡೆ-ನುಡಿಗಳು ಸರಿಯಿರಲಿ. ಬಿಜೆಪಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಆಡ್ವಾಣಿ ಅವರ ಬಗ್ಗೆ ನಮಗೆ ಗೌರವವಿದೆ, ಅವರನ್ನು ನೋಡಿ ಕಲಿಯಿರಿ ಎಂದು ಸಿಟಿ ರವಿ ಅವರಿಗೆ ಸಲಹೆ ನೀಡಿದರು.
ಇದನ್ನೂ ಓದಿ : ISI ಸೂತ್ರಧಾರಿ! ತಾಲಿಬಾನ್ ನಿಂದ ಅಫ್ಘಾನ್ ಕೈವಶ…ಪಾಕ್ ನ ಲಷ್ಕರ್, ಜೈಶ್ ಉಗ್ರರಿಂದ ಲೂಟಿ