ಶಾಸಕರಿಂದ ಮಾದಪ್ಪನಿಗೆ ವಿಶೇಷ ಪೂಜೆ
Team Udayavani, Jun 10, 2020, 5:25 AM IST
ಹನೂರು: ಶ್ರೀ ಕ್ಷೇತ್ರದಲ್ಲಿ ದಾಸೋಹದ ಬದಲು ಕಾಗದ ತಟ್ಟೆಗಳಲ್ಲಿಯೇ ಲಘು ಉಪಾಹಾರ ನೀಡಬೇಕು ಎಂದು ಶಾಸಕ ಆರ್.ನರೇಂದ್ರ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು. ಮಲೆ ಮಹದೇಶ್ವರ ಬೆಟ್ಟಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಲಾಕ್ ಡೌನ್ ಬಳಿಕ ದೇವಾಲಯದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಕಲ್ಪಿಸಿರುವ ಸೌಲಭ್ಯ ಗಳನ್ನು ಪರಿಶೀಲಿಸಿದರು.
ದೇಗುಲಕ್ಕೆ ಆಗಮಿಸುವ ಭಕ್ತರು ಭೌತಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸುತ್ತಿರುವ ಬಗ್ಗೆ ಪರಿಶೀಲಿಸಿದರು. ಬಳಿಕ ಲಾಡು ತಯಾರಿಕಾ ಘಟಕದಲ್ಲಿ ಸಿಬ್ಬಂದಿ ಗೆ ಗ್ಲೌಸ್ ನೀಡಲು ಸೂಚಿಸಿದರು. ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ದಾಸೋಹ ವ್ಯವಸ್ಥೆ ರದ್ದುಮಾಡಿ ಈ ಹಿಂದೆ ಜಿಲ್ಲಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಕಾಗ ದದ ತಟ್ಟೆಗಳಲ್ಲಿಯೇ ಲಘು ಉಪಾಹಾರ ವಿತರಿಸಬೇಕು.
ಅಗತ್ಯ ಸ್ವತ್ಛತಾ ಕ್ರಮ ಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧೀಕ್ಷಕ ಬಸವರಾಜು, ದೇವಾಲಯದ ಅರ್ಚಕ ವೃಂದ, ಪ್ರಾಧಿಕಾರದ ನೌಕರರು, ಸಿಬ್ಬಂದಿ ಹಾಜರಿದ್ದರು.