ರಾಜ್ಯದಲ್ಲಿ ಉತ್ತಮ ಮಳೆಯಾಗಲು ಬಿ.ಎಸ್.ವೈ. ಕಾಲ್ಗುಣ ಕಾರಣವಂತೆ!
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿದ 20 ವರ್ಷಗಳಲ್ಲಿ 15 ವರ್ಷ ಬರ ಪರಿಸ್ಥಿತಿ ಇತ್ತು ಎಂದ ಕಾರಜೋಳ
Team Udayavani, Nov 8, 2019, 5:55 PM IST
ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾಲ್ಗುಣದಿಂದ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ಆಗುತ್ತಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಿದ 20 ವರ್ಷಗಳಲ್ಲಿ 15 ವರ್ಷ ಬರ ಪರಿಸ್ಥಿತಿ ಇತ್ತು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. 2008ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಉತ್ತಮ ಮಳೆ ಸುರಿದಿತ್ತು ಇದರ ಪರಿಣಾಮ ಸಮೃದ್ಧ ಬೆಳೆಯೂ ಬಂದಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕೇವಲ 05 ವರ್ಷ ಮಾತ್ರವೇ ಉತ್ತಮ ಮಳೆಯಾಗಿತ್ತು ಇನ್ನುಳಿದ 15 ವರ್ಷಗಳಲ್ಲಿ ಬರಗಾಲ ಪರಿಸ್ಥಿತಿ ರಾಜ್ಯವನ್ನು ಕಾಡಿತ್ತು ಎಂದು ಕಾರಜೋಳ ವಿಶ್ಲೇಷಿಸಿದರು.
ನಾವು ಈ ಬಾರಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ರಾಜ್ಯದಲ್ಲೆಡೆ ಪ್ರವಾಹ ಸ್ಥಿತಿ ಇದ್ದ ಕಾರಣ, ನಮಗೆ ಕಳೆದ ಮೂರು ತಿಂಗಳುಗಳಿಂದ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುವುದರಲ್ಲೇ ಕಾಲ ಕಳೆದುಹೋಯಿತು. ಅದಲ್ಲದೇ ಹೋಗಿದ್ದಿದ್ದರೆ ಇವತ್ತು ರಾಜ್ಯದ ಚಿತ್ರಣವೇ ಬದಲಾಗುತ್ತಿತ್ತು. ಇನ್ನು ಮುಂದಿನ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಚುರುಕು ಪಡೆದುಕೊಳ್ಳಲಿವೆ ಎಂದು ಕಾರಜೋಳ ಹೇಳಿದರು.