ಶೇ.30ರಷ್ಟು ಮಕ್ಕಳ ಹಾಜರಾತಿ
Team Udayavani, Jan 2, 2021, 6:59 PM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ರೂಪಾಂತರಗೊಂಡಿರುವ ಕೋವಿಡ್ ಸೋಂಕಿನ ಭೀತಿಯ ನಡುವೆಯೂ ಜಿಲ್ಲಾದ್ಯಂತ ಹೊಸ ವರ್ಷ ಮೊದಲ ದಿನದಿಂದ ಸರ್ಕಾರಿ ಶಾಲೆಗಳು ಆರಂಭಗೊಂಡರೂ ಸಹ ವಿದ್ಯಾರ್ಥಿಗಳು ನಿರೀಕ್ಷಿತ ಪ್ರಮಾಣದಲ್ಲಿ ಹಾಜರಾಗಿರಲಿಲ್ಲ.
ಹಿಂಜರಿಕೆ: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸರ್ಕಾರಿ ಶಾಲೆಗಳನ್ನು ಆರಂಭಿಸಿ ವಿದ್ಯಾಗಮ ಯೋಜನೆ ಪುನಃ ಆರಂಭಿಸಲಾಗಿದೆ. ಆದರೆ ಕೊರೊನಾ ಸೋಂಕಿನ ಭೀತಿಯಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿದಿದ್ದು, ಶಾಲೆಗಳಲ್ಲಿ ಹಾಜರಾತಿ ಪ್ರಮಾಣ ಮಾತ್ರ ಕ್ಷೀಣಿಸಿದೆ. ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆ ಆರಂಭಿ ಸಿರುವುದಕ್ಕೆ ಹಾಜರಾದ ವಿದ್ಯಾರ್ಥಿಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಹಲವು ತಿಂಗಳಿಂದ ಶಾಲೆಗಳಿಲ್ಲದೇ ಬೇಜಾರಾಗಿತ್ತು. ಇದೀಗ ಆರಂಭಿಸಿದ್ದರಿಂದ ಒಳ್ಳೆಯದಾಗಿದೆ. ಯಾವುದೇ ಆತಂಕವಿಲ್ಲದೆ ಪಾಠದ ವ್ಯವಸ್ಥೆಯನ್ನು ಶಿಕ್ಷಕರು ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನೀರಸ: ಶಾಲೆಗಳ ಆರಂಭಕ್ಕೆ ಜಿಲ್ಲಾಡಳಿತ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ(ಚಿನ್ನಿ)ರ ಮೂಲಕ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಕೆಂದು ಗುರುವಾರ ಮನವಿ ಮಾಡಲಾಗಿತ್ತು. ಆದರೂ ಸಹ ಮೊದಲ ದಿನ ನಿರೀಕ್ಷಿತ ಮಟ್ಟದಲ್ಲಿ ಬಂದಿರಲಿಲ್ಲ. ಕೆಲವೊಂದು ತಾಲೂಕುಗಳಲ್ಲಿ ಹಾಜರಾತಿ ತೃಪ್ತಿದಾಯಕವಾಗಿದೆ. ಆದರೆ ಬಹುತೇಕ ತಾಲೂಕುಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪೋಷಕರಿಂದ ಅನುಮತಿ ಪತ್ರ: ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ ಪೋಷಕರಿಂದ ಅನುಮತಿ ಪತ್ರ ಪಡೆಯಲು ಸೂಚನೆ ನೀಡಿದ್ದರಿಂದ ಶಿಕ್ಷಕರು ಮಕ್ಕಳಿಗೆಪೋಷಕರ ಅನುಮತಿ ಪತ್ರ ಪಡೆದುಕೊಂಡು ಶಾಲೆಗೆ ಪ್ರವೇಶ ಮಾಡುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮೂಲಕ ಆರೋಗ್ಯ ತಪಾಸಣೆ ಮಾಡುವ ವ್ಯವಸ್ಥೆ ಮಾಡಿದರು. ಹಾಜರಾತಿ ಸಂಖ್ಯೆ ಕಡಿಮೆಯಾದರೂ ಸಹ ಶಿಕ್ಷಕರು ಬಂದ ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರದಿಂದ ಪಾಠ ಪ್ರವಚನಮಾಡಿದರು. ಹಾಜರಾದ ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಆತಂಕ ಕಂಡುಬಂದಿಲ್ಲ.
ಮಾರ್ಗಸೂಚಿ ಪಾಲಿಸಿ: ವಿದ್ಯಾಗಮ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಿಕ್ಷಕರು ಸಹ ಇದಕ್ಕೆ ಪೂರಕವಾಗಿ ಸಿದ್ಧತೆ ಮಾಡಿಕೊಂಡಿದ್ದರು. ಶಾಲೆಯ ಕೊಠಡಿಗಳನ್ನು ಸ್ಯಾನಿಟೈಸ್ಗೊಳಿಸಲಾಗಿದ್ದು, ವಿದ್ಯಾರ್ಥಿಗಳುಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿತ್ತು.
ದಾಖಲಾತಿ ಹೆಚ್ಚುವ ವಿಶ್ವಾಸ: ಶಾಲೆ ಆರಂಭಗೊಂಡಿದ್ದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿಲ್ಲ. ಹೊಸ ವರ್ಷ ಆಗಿರುವುದರಿಂದ ವಿದ್ಯಾರ್ಥಿಗಳು ಭಾಗವಹಿ ಸಿಲ್ಲ ಎಂದು ಅಂದಾಜಿಸಲಾಗಿದ್ದು, ಮುಂದಿನ ದಿನಗಳಲ್ಲಿವಿದ್ಯಾ ರ್ಥಿಗಳಲ್ಲಿ ಮತ್ತು ಪೋಷಕರ ಮನದಲ್ಲಿ ಮನೆ ಮಾಡಿರುವ ಆತಂಕ ನಿವಾರಣೆಯಾಗಿ ಶಾಲೆಗಳಲ್ಲಿ ದಾಖಲಾತಿಗಳ ಸಂಖ್ಯೆ ಹೆಚ್ಚಾಗಲಿದೆ ಎಂಬ ವಿಶ್ವಾಸವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಖಾಸಗಿ ಶಾಲೆಗಳಲ್ಲಿ ಶೇ.50 ಹಾಜರಿ : ಜಿಲ್ಲಾದ್ಯಂತ ಶುಕ್ರವಾರದಿಂದ ಶಾಲೆಗಳು ಆರಂಭಗೊಂಡರೂ ಸಹ ಸರ್ಕಾರಿ ಶಾಲೆಗಳಲ್ಲಿ ಉತ್ಸಾಹ ಕಂಡು ಬಂದಿಲ್ಲ. ಆದರೆ ಖಾಸಗಿ ಶಾಲೆಗಳಲ್ಲಿ ಶೇ.50 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಈಗಾಗಲೇ ವಾಟ್ಸ್ಆಪ್ ಮೂಲಕ ಟೀಚಿಂಗ್ ಮೆಟೀರಿಯಲ್ ಕಳುಹಿಸಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಿಕೊಂಡಿರುವ ಖಾಸಗಿ ಶಾಲಾ ಆಡಳಿತ ಮಂಡಳಿಯವರಿಗೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕೋವಿಡ್ ಸೋಂಕಿನ ಭೀತಿಯ ನಡುವೆಯೂ ಜಿಲ್ಲೆಯಲ್ಲಿ ಶಾಲೆ ಆರಂಭಕ್ಕೆಉತ್ತಮ ಸ್ಪಂದನೆ ಸಿಕ್ಕಿದೆ. ಜಿಲ್ಲಾದ್ಯಂತ ಸುಮಾರು 30-40% ವಿದ್ಯಾರ್ಥಿ ಗಳು ಹಾಜರಾಗಿದ್ದಾರೆ. ಪೋಷಕರು ಸಹ ಶಿಕ್ಷಣ ಇಲಾಖೆ ಮತ್ತುಸರ್ಕಾರದ ಮೇಲೆ ವಿಶ್ವಾಸಯಿಟ್ಟು ಮಕ್ಕಳನ್ನು ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. –ನಾಗೇಶ್, ಡಿಡಿಪಿಐ, ಸಾರ್ವಜನಿಕ ಶಿಕ್ಷಣ ಇಲಾಖೆ
ಶಾಲೆಗಳು ಮುಚ್ಚಿದ್ದರಿಂದ ಬೇಜಾರಾಗಿತ್ತು. ಸರ್ಕಾರ ಕೆಲವೊಂದು ನಿಯಮಗಳನ್ನುಜಾರಿಗೊಳಿಸಿ ಶಾಲೆ ಆರಂಭಿಸಿರುವುದರಿಂದ ಅನುಕೂಲವಾಗಿದೆ. ಕೋವಿಡ್ ಹಿನ್ನೆಲೆ ಪೋಷಕರಲ್ಲಿ ಆತಂಕಯಿದೆ. ಕೋವಿಡ್ ಮಾರ್ಗಸೂಚಿ ಪಾಲಿಸಿದರೆ ಯಾವುದೇ ಅಪಾಯ ಇಲ್ಲ. –ಮುಸ್ಕಾನ್ ಖಾನಂ, ಒಂಬತ್ತನೇ ತರಗತಿ, ಸ.ಪ್ರೌ. ಶಾಲೆ, ಶಿಡ್ಲಘಟ್ಟ
ಕೋವಿಡ್-19ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಲೆಗಳು ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಕಡಿಮೆಸಂಖ್ಯೆಯಲ್ಲಿ ಹಾಜರಾಗಿದ್ದಾರೆ.ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ. –ಮಂಜುಳಾ, ಸಹಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ, ಶಿಡ್ಲಘಟ್ಟ
ಮಕ್ಕಳನ್ನು ಶಾಲೆಗೆ ಕಳುಹಿಸಿದ್ದೇವೆ. ನಿರ್ಲಕ್ಷ್ಯ ವಹಿಸದೆ ಶಾಲೆಗಳು ನಡೆದರೆ ಮಕ್ಕಳು ಆರೋಗ್ಯವಾಗಿ ರುತ್ತಾರೆ. ಜೊತೆಗೆ ಪೋಷಕರು ಸಹ ಶಾಲೆಗಳ ವ್ಯವಸ್ಥೆಗಳನ್ನು ಪರಿಶೀಲಿಸಬೇಕು. ಆಗ ಮಾತ್ರ ಆತಂಕ ನಿವಾರಣೆಯಾಗುತ್ತದೆ. –ಜಬೀನ್ ತಾಜ್, ಪೋಷಕರು, ಶಿಡ್ಲಘಟ್ಟ
ಹಲವು ತಿಂಗಳ ನಂತರ ಶಾಲೆ ಆರಂಭಗೊಂಡಿರುವುದು ಸಂತೋಷ ವಾಗಿದೆ. ಕೋವಿಡ್ ಮಾರ್ಗಸೂಚಿ ಪಾಲಿಸುತ್ತಿದ್ದೇವೆ. ಶಿಕ್ಷಕರು ನಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. –ಎಂ.ಸಾನಿಯಾ, ಒಂಬತ್ತನೇ ತರಗತಿ, ಸರ್ಕಾರಿ ಪ್ರೌಢ ಶಾಲೆ ಶಿಡ್ಲಘಟ್ಟ