Students: ಶಾಲಾ ಮಕ್ಕಳಿಗೆ ಕರ್ನಾಟಕ ದರ್ಶನ ಯಾವಾಗ?
Team Udayavani, Nov 29, 2023, 2:52 PM IST
ಚಿಕ್ಕಬಳ್ಳಾಪುರ: ಪ್ರತಿ ವರ್ಷ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ಏರ್ಪಡಿಸುವ ಕರ್ನಾಟಕ ದರ್ಶನ ಶೈಕ್ಷಣಿಕ ಅಧ್ಯಯನ ಪ್ರವಾಸ ವರ್ಷಾಂತ್ಯಕ್ಕೆ ಕಾಲಿಟ್ಟರೂ ಶಿಕ್ಷಣ ಇಲಾಖೆ ಪ್ರವಾಸಕ್ಕೆ ಅನುಮತಿ ಸಿಗದೇ ಇರುವುದು ಶಾಲಾ ಮಕ್ಕಳಿಗೆ ಕರ್ನಾಟಕ ದರ್ಶನ ಕೈ ತಪ್ಪುವುದೇ ಎಂಬ ಚರ್ಚೆ ಮುನ್ನಲೆಗೆ ಬಂದಿದೆ.
ರಾಜ್ಯದಲ್ಲಿ 8ನೇ ತರಗತಿಯಲ್ಲಿ ಓದುವ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿ ವರ್ಷ ಶಿಕ್ಷಣ ಇಲಾಖೆ ಕರ್ನಾ ಟಕ ದರ್ಶನ ಪ್ರವಾಸವನ್ನು ಕೈಗೊಳ್ಳು ತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ 2020 ಹಾಗೂ 2021 ರಲ್ಲಿ ಕರ್ನಾಟಕ ದರ್ಶನ ಪ್ರವಾಸವನ್ನು ಸ್ಥಗಿತಗೊಳಿಸಿತ್ತು. ಕಳೆದ ವರ್ಷ 2022 ರಲ್ಲಿ ಕೊನೆ ಕ್ಷಣದಲ್ಲಿ ಪ್ರವಾಸಕ್ಕೆ ಅನುಮತಿ ನೀಡಿತ್ತು. 2023 ರಲ್ಲಿ ಕರ್ನಾಟಕ ದರ್ಶನ ಪ್ರವಾಸದ ಬಗ್ಗೆ ಜಿಲ್ಲೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಜಿಲ್ಲೆಯಲ್ಲಿ 8 ನೇ ತರಗತಿ ಓದುತ್ತಿರುವ ಮಕ್ಕಳ ಪಟ್ಟಿ ಕಳುಹಿಸಿದರೂ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿದ್ಯಾರ್ಥಿ ಪೋಷಕರಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕ್ರಮ ವಹಿಸದ ಇಲಾಖೆ: ಈ ಮೊದಲು ಕರ್ನಾಟಕ ದರ್ಶನ ಪ್ರವಾಸ ಆರಂಭಿಸಿದಾಗ ಕೇವಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಗಂಡ ವಿದ್ಯಾರ್ಥಿಗಳನ್ನು ಮಾತ್ರ ಪ್ರವಾಸಕ್ಕೆ ಪರಿಗಣಿಸಲಾಗಿತ್ತು. ಸರ್ಕಾರದ ತಾರತಾ ಮ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇ ಪಣೆ, ಟೀಕೆ ಟಿಪ್ಪಣಿ ಹೆಚ್ಚಾಗಿ ಕೇಳಿದ ಬಂದ ಬಳಿಕ ಕಳೆದ ವರ್ಷದಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೂ ಕರ್ನಾಟಕ ದರ್ಶನವನ್ನು ಸರ್ಕಾರ ಏರ್ಪಡಿಸುತ್ತಾ ಬಂದಿದೆ.
ಆದರೆ ಈ ವರ್ಷ ವರ್ಷಾಂತ್ಯಕ್ಕೆ ಕಾಲಿಟ್ಟರೂ ಪ್ರವಾಸದ ಬಗ್ಗೆ ಇಲಾಖೆ ಕ್ರಮ ವಹಿಸದೇ ಇರುವುದು ಎದ್ದು ಕಾಣುತ್ತಿದೆ. ಡಿಸೆಂಬರ್ ಕಳೆದರೆ ವಾರ್ಷಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ಧರಾಗಬೇಕು. ಜೊತೆಗೆ ಸರ್ಕಾರವೇ ಹೇಳುವಂತೆ ಡಿಸೆಂಬರ್ ವೇಳೆಗೆ ಎಲ್ಲಾ ರೀತಿಯ ಶೈಕ್ಷಣಿಕ ಪ್ರವಾಸವನ್ನು ಶಾಲೆಗಳು ಮುಗಿಸಿ ಕೊಳ್ಳ ಬೇಕೆಂದು ಸುತ್ತೋಲೆಯಲ್ಲಿ ಸೂಚಿಸಿದೆ.
ಆದರೆ ಕರ್ನಾಟಕ ದರ್ಶನ ವಿಚಾರದಲ್ಲಿ ನವೆಂಬರ್ ಕಳೆಯುತ್ತಾ ಡಿಸೆಂಬರ್ಗೆ ಕಾಲಿಟ್ಟರೂ ಯಾವುದೇ ಕ್ರಮ ವಹಿಸಿಲ್ಲ. ಒಟ್ಟಿನಲ್ಲಿ ಪ್ರತಿ ವರ್ಷ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುವ 8 ನೇ ತರಗತಿ ಮಕ್ಕಳಿಗೆ ಉಚಿತವಾಗಿ ಕರ್ನಾಟಕ ದರ್ಶನದ ಮೂಲಕ ರಾಜ್ಯದ ಇತಿಹಾಸ, ಪರಂಪರೆ, ಸಂಸ್ಕೃತಿ, ಹಾಗೂ ಧಾರ್ಮಿಕ ಹಾಗೂ ಐತಿಹಾಸಿಕ ಶ್ರದ್ದಾ ಕೇಂದ್ರಗಳ ದರ್ಶನ ಮಾಡಿಸುವ ಮೂಲಕ ಕರ್ನಾಟಕವನ್ನು ಪರಿಚಯಿಸುವ ದಿಕ್ಕಿನಲ್ಲಿ ನಡೆಯುತ್ತಿದ್ದ ಕರ್ನಾಟಕ ದರ್ಶನ ಪ್ರವಾಸವನ್ನು ಸರ್ಕಾರ ಎಂದಿನಂತೆ ಮುಂದುವರೆಸಲಿ ಎನ್ನುವ ಆಗ್ರಹ ವಿದ್ಯಾರ್ಥಿ ಪೋಷಕರಿಂದ ಕೇಳಿ ಬರುತ್ತಿದೆ.
ಕಳೆದ ವರ್ಷ ತರಾತುರಿಯಲ್ಲಿ ಪ್ರವಾಸ ಕಳುಹಿಸಿದ ಶಿಕ್ಷಣ ಇಲಾಖೆ!:
ಕಳೆದ ವರ್ಷ ಕರ್ನಾಟಕ ದರ್ಶನ ಪ್ರವಾಸವನ್ನು ಮಕ್ಕಳಿಗೆ ತರಾತುರಿಯಲ್ಲಿ ಕೈಗೊಂಡಿದ್ದು ಶಿಕ್ಷಕ ಹಾಗೂ ವಿದ್ಯಾರ್ಥಿ ಪೋಷಕರಿಂದ ಶಿಕ್ಷಣ ಇಲಾಖೆ ಸಾಕಷ್ಟು ವಿರೋಧ ಎದುರಿಸಿತು. ಶಿಕ್ಷಣ ಇಲಾಖೆ ಡಿಸೆಂಬರ್ ಒಳಗೆ ಪ್ರವಾಸ ಮುಗಿಸಬೇಕೆಂದು ಆದೇಶ ಹೊರಡಿಸುತ್ತದೆ. ಆದರೆ ಕರ್ನಾಟಕ ದರ್ಶನ ಪ್ರವಾಸವನ್ನು ಪರೀಕ್ಷೆಗಳ ಸಮೀಪ ಇರುವ ಫೆಬ್ರವರಿ ತಿಂಗಳಲ್ಲಿ ಏರ್ಪಡಿಸುವುದು ಎಷ್ಟು ಮಾತ್ರ ಸಮಂಜಸ ಎಂದು ಶಿಕ್ಷಕರೊಬ್ಬರು ಪ್ರಶ್ನಿಸಿದರು. ಕಳೆದ ಬಾರಿ ಕರ್ನಾಟಕ ದರ್ಶನವನ್ನು ಫೆಬ್ರವರಿಯಲ್ಲಿ ಹಮ್ಮಿಕೊಂಡಿದ್ದರಿಂದ ಪರೀಕ್ಷಾ ದಿನಗಳು ಹತ್ತಿರ ಇದ್ದಾಗ ಪ್ರವಾಸ ಕಳುಹಿಸಲು ಸಾಕಷ್ಟು ವಿದ್ಯಾರ್ಥಿ ಪೋಷಕರು ಹಿಂದೇಟು ಹಾಕಿದರು. ಪ್ರವಾಸ ಹೊರಡಲಿಕ್ಕೆ ಶಿಕ್ಷಕರಿಗೂ ಇಷ್ಟ ಇರಲಿಲ್ಲ. ಕೊನೆ ಕ್ಷಣದಲ್ಲಿ ಇಲಾಖೆ ಆದೇಶವನ್ನು ಪಾಲಿಸಬೇಕಿದ್ದರಿಂದ ಮಕ್ಕಳ ಮನವೊಲಿಸಿ ಕರ್ನಾಟಕ ದರ್ಶನ ಪ್ರವಾಸವನ್ನು ಒಲ್ಲದ ಮನಸ್ಸಿನಿಂದ ತರಾತುರಿಯಲ್ಲಿ ಕೈಗೊಳ್ಳಬೇಕಾಯಿತು ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.
ಆರು ತಾಲೂಕುಗಳಿಂದ 424 ಮಕ್ಕಳ ಪಟ್ಟಿ ಕಳುಹಿಸಿದರೂ ಅನುಮತಿ ಸಿಕ್ಕಿಲ್ಲ:
ಜಿಲ್ಲೆಯಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳನ್ನು ಮಾತ್ರ ಕರ್ನಾಟಕ ದರ್ಶನ ಪ್ರವಾಸಕ್ಕೆ ಕಳುಹಿಸಲಾಗುತ್ತದೆ. ಜಿಲ್ಲೆಯಲ್ಲಿ 8ನೇ ತರಗತಿಯಲ್ಲಿ ಓದುವ ಕ್ರಿಯಾಶೀಲ ಅದರಲ್ಲೂ ಪ್ರತಿಭೆ, ಕ್ರೀಡೆಗಳ ಬಗ್ಗೆ ಆಸಕ್ತಿ ಇರುವ ಮಕ್ಕಳನ್ನು ಮಾತ್ರ ಪ್ರವಾಸ ಕಳುಹಿಸಲಾಗುತ್ತದೆ. ಈಗಾಗಲೇ ಜಿಲ್ಲೆಯ 6 ತಾಲೂಕುಗಳಿಂದ 424 ಮಕ್ಕಳ ಪಟ್ಟಿಯನ್ನು ಇಲಾಖೆಗೆ ಕಳುಹಿಸಲಾಗಿದೆ. ಆದರೆ ಇನ್ನೂ ಪ್ರವಾಸ ಹೊರಡಲಿಕ್ಕೆ ಅನುಮತಿ ಸಿಕ್ಕಿಲ್ಲ. ಅನುಮತಿ ಸಿಕ್ಕಿ ಕೂಡಲೇ ಕರ್ನಾಟಕ ದರ್ಶನ ಪ್ರವಾಸ ಹಮ್ಮಿಕೊಳ್ಳಲಾಗುವುದೆಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-ಕಾಗತಿ ನಾಗರಾಜಪ್ಪ