1-8 ನೇ ತರಗತಿ ಪ್ರಾರಂಭ : ನಾಳೆ ತಜ್ಞರ ಜೊತೆ ಸಿಎಂ ಸಭೆ
Team Udayavani, Aug 29, 2021, 6:04 PM IST
ಚಿಕ್ಕಮಗಳೂರು : 1 ರಿಂದ 8 ನೇ ತರಗತಿ ಆರಂಭಿಸುವ ಕುರಿತು ನಾಳೆ ತಜ್ಞರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಲಿದ್ದಾರೆ. ಸಭೆಯ ನಂತರ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಣಯಕ್ಕೆ ಶಿಕ್ಷಣ ಇಲಾಖೆ ಬದ್ಧವಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.
ನಗರದಲ್ಲಿಂದು ಮಾಧ್ಯಮಗಳ ಜೊತೆ ಪ್ರಾಥಮಿಕ ಶಾಲೆ ಪ್ರಾರಂಭದ ಕುರಿತು ಮಾತನಾಡಿದ ಅವರು, ಮೊದಲು 6 ರಿಂದ 8, ನಂತರ 1 ರಿಂದ 5 ನೇ ತರಗತಿ ಪ್ರಾರಂಭಿಸುವ ಯೋಚನೆ ಇದೆ. ಆದರೆ, ಕೋವಿಡ್ ಕಾರಣ ತಜ್ಞರ ಅಭಿಪ್ರಾಯ ವಿಲ್ಲದೆ ನಿರ್ಣಯ ತೆಗೆದುಕೊಳ್ಳೋ ಪ್ರಯತ್ನ ಮಾಡ್ಲಿಲ್ಲ. ಆದ್ದರಿಂದ ನಾಳೆ ಮುಖ್ಯಮಂತ್ರಿಯವರು ತಜ್ಞರ ಜೊತೆ ಸಭೆ ನಡೆಸಲಿದ್ದಾರೆ ಎಂದರು.
ಹಲವು ಶಾಲೆಗಳಿಗೆ ಭೇಟಿ ನೀಡಿದಾಗ ಬಹುತೇಕ ವಿದ್ಯಾರ್ಥಿಗಳ ಅಭಿಪ್ರಾಯವೂ ಪೂರ್ಣವಾಗಿ ಶಾಲೆಯನ್ನು ತೆರೆಯುವಂತೆ ಹೇಳಿದ್ದಾರೆ. 9 ರಿಂದ 12 ರವರೆಗೆ ಶಾಲೆ ಪ್ರಾರಂಭವಾದ ನಂತರ ಪೋಷಕರು ಹಾಗೂ ಮಕ್ಕಳ ಉತ್ಸಾಹ ಚೆನ್ನಾಗಿತ್ತು.
ನಾಳೆ ಸಿಎಂ ನೇತೃತ್ವದಲ್ಲಿ ತಜ್ಞರ ಅಭಿಪ್ರಾಯ ಬಂದ ಮೇಲೆ ನಿರ್ಣಯ ತೆಗೆದುಕೊಳ್ಳುತ್ತೇವೆ. ಶಾಲೆ ತೆರೆಯೋಕೆ ಶಿಕ್ಷಣ ಇಲಾಖೆ ಪೂರ್ಣವಾಗಿ ತಯಾರಾಗಿದೆ. ತಜ್ಞರು ಗ್ರೀನ್ ಸಿಗ್ನಲ್ ನೀಡಿದ್ರೆ ತಕ್ಷಣವೇ ಶಾಲೆ ಪ್ರಾರಂಭಕ್ಕೆ ತಯಾರಿದ್ದೇವೆ ಎಂದರು.