ಕಾಫಿನಾಡಿನಲ್ಲಿ ಮಳೆ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ; ತುಂಬಿ ಹರಿಯುತ್ತಿರುವ ನದಿಗಳು
ಕಳಸ ತಾಲೂಕು ತನೂಡಿ ಗ್ರಾಮದ ಉಮೇಶ್ ಎಂಬುವವರ ಮನೆ ಕುಸಿದು ಬಿದ್ದಿದೆ.
Team Udayavani, Jul 12, 2022, 6:24 PM IST
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆನಾಡು ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಅನೇಕ ಕಡೆಗಳಲ್ಲಿ ಗುಡ್ಡ ಕುಸಿದಿದೆ. ಕಲ್ಲು- ಮಣ್ಣು ರಸ್ತೆಯ ಮೇಲೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಗುಡ್ಡ ಕುಸಿತದಿಂದ ಕಾಫಿತೋಟಗಳಿಗೆ ಹಾನಿಯಾಗಿದೆ. ಅನೇಕ ಮನೆಗಳು ಕುಸಿದು ಬಿದ್ದಿವೆ. ವಿದ್ಯುತ್ ಕಂಬಗಳು, ಸೇತುವೆಗಳಿಗೆ ಹಾನಿಯಾಗಿದೆ.
ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಅಲ್ಲಲ್ಲಿ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದಿದ್ದು, ಜಿಲ್ಲಾಡಳಿತ ಪ್ರವಾಸಿಗರಿಗೆ ನಿರ್ಬಂಧಗಳನ್ನು ವಿಧಿ ಸಿದೆ. ಬಾಳೆಹೊನ್ನೂರು- ಮಾಗೋಡು ಸಮೀಪ ಅರೆನೂರು ಗ್ರಾಮದಲ್ಲಿ 100 ಅಡಿ ಎತ್ತರದಿಂದ ಗುಡ್ಡ ಕುಸಿದಿದ್ದು, ರಾಮು ಎಂಬುವವರಿಗೆ ಸೇರಿದ ಕಾಫಿ, ಅಡಕೆ, ಕಾಳುಮೆಣಸು ಬೆಳೆಗಳಿಗೆ ಹಾನಿಯಾಗಿದೆ.
ಚಿಕ್ಕಮಗಳೂರು ತಾಲೂಕು ಆವತಿ ಹೋಬಳಿ ಕಸ್ಕೆಮನೆಯಲ್ಲಿ ಗುಡ್ಡ ಕುಸಿದ ಪರಿಣಾಮ ಧರ್ಮೇಗೌಡ ಎಂಬುವವರಿಗೆ ಸೇರಿದ ಕಾಫಿತೋಟದಲ್ಲಿ ಗುಡ್ಡ ಕುಸಿದು ಕಾಫಿಗಿಡಗಳು ಮಣ್ಣು ಪಾಲಾಗಿವೆ.
ಕಳಸ ತಾಲೂಕು ತನೂಡಿ ಗ್ರಾಮದ ಉಮೇಶ್ ಎಂಬುವವರ ಮನೆ ಕುಸಿದು ಬಿದ್ದಿದೆ. ಮನೆ ಕುಸಿಯುವ ಶಬ್ದವನ್ನು ಅಂದಾಜಿಸಿ ಮನೆಯವರು ಮನೆಯಿಂದ ಹೊರ ಬಂದಿದ್ದು, ಕ್ಷಣ ಮಾತ್ರದಲ್ಲಿ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರೀ ಗಾಳಿ-ಮಳೆಗೆ ಮೂಡಿಗೆರೆ ತಾಲೂಕು ಸಬ್ಬಿ ಗ್ರಾಮದ ರಾಮಮ್ಮ ಎಂಬುವವರ ಮನೆ ಸಂಪೂರ್ಣ ಕುಸಿದು ಹೋಗಿದೆ. ಮನೆಯವರು ನೆಂಟರಮನೆಗೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
24 ಗಂಟೆಯಲ್ಲಿ 33 ಮನೆಗಳಿಗೆ ಹಾನಿ
ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 33 ಮನೆಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 3 ಮನೆಗಳು ಸಂಪೂರ್ಣ ಹಾನಿಯಾಗಿ ದ್ದರೆ 12 ಮನೆಗಳು ಭಾಗಶಃ ಹಾನಿಯಾಗಿವೆ. ಮೂಡಿಗೆರೆ ತಾಲೂಕಿನಲ್ಲಿ 1ಮನೆ ಸಂಪೂರ್ಣ ಹಾನಿಯಾದರೇ, 5 ಮನೆಗಳು ಭಾಗಶಃ ಹಾನಿಯಾಗಿವೆ. ಕೊಪ್ಪ ತಾಲೂಕಿನಲ್ಲಿ 1ಮನೆಗೆ ಸಂಪೂರ್ಣ ಹಾನಿಯಾಗಿದೆ. 3 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ನರಸಿಂಹರಾಜಪುರ ತಾಲೂಕಿನಲ್ಲಿ 5 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅಜ್ಜಂಪುರ ತಾಲೂಕಿನಲ್ಲಿ 2ಮನೆಗಳು ಭಾಗಶಃ ಹಾನಿಯಾಗಿವೆ. ಕಳಸ ತಾಲೂಕಿನಲ್ಲಿ 1ಮನೆ ಸಂಪೂರ್ಣ ಹಾನಿಯಾಗಿದೆ. ಜೂ.1ರಿಂದ ಇದುವರೆಗೂ ಜಿಲ್ಲಾದ್ಯಂತ 163 ಮನೆಗಳಿಗೆ ಹಾನಿಯಾಗಿದೆ.
19.40 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
ಭಾರೀ ಮಳೆಯಿಂದ ಇದುವರೆಗೂ 19.40 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳಿಗೆ ಹಾನಿಯಾಗಿದೆ. 147 ವಿದ್ಯುತ್ ಕಂಬ, 143.52 ಕಿ.ಮೀ. ರಸ್ತೆ, 9 ಸೇತುವೆ ಹಾಗೂ 2.9.ಕಿ.ಮೀ. ವಿದ್ಯುತ್ ತಂತಿ ಹಾಳಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು
Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು
ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ
LS Polls: ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳಿಂದ ಮತಗಟ್ಟೆಯಲ್ಲಿ ಮೊದಲ ಮತದಾನ