ಕಾಲಮಿತಿಯಲ್ಲಿ ಹಕ್ಕು ಪತ್ರ- ಪಹಣಿ ವಿತರಿಸಿ: ಸಚಿವ ರವಿ
Team Udayavani, Aug 12, 2020, 3:22 PM IST
ಕೊಪ್ಪ: ಕಾಲಮಿತಿಯಲ್ಲಿ ಹಕ್ಕುಪತ್ರ, ಪಹಣಿ ವಿತರಣೆಗೆ ಕ್ರಮ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ತಾಲೂಕಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ತಾಲೂಕು ಕಚೇರಿಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಕಳೆದ 2 ವರ್ಷ 3 ತಿಂಗಳ ಹಿಂದೆ ಅಕ್ರಮ- ಸಕ್ರಮ ಸಮಿತಿಯಲ್ಲಿ ಮಂಜೂರಾದ ಹಕ್ಕುಪತ್ರ ಇನ್ನೂ ವಿತರಿಸಿಲ್ಲ. ವಿತರಣೆಯಾದ ಹಕ್ಕುಪತ್ರಗಳಿಗೆ ಪಹಣಿ ಹಾಕಿಲ್ಲ. ಇದರಿಂದ ರೈತರಿಗೆ ಸರ್ಕಾರದ ಯಾವುದೇ ಸವಲತ್ತು ಸಿಗುತ್ತಿಲ್ಲ. ಬೆಳೆಹಾನಿ ಪರಿಹಾರಕ್ಕೆ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ನಿಂದ ಸಾಲ ಪಡೆಯಲು ಅವಕಾಶವಿರುವುದಿಲ್ಲ. ಇದರ ಜೊತೆಗೆ 94(ಸಿ) ಅರ್ಜಿಗಳು ವಿಲೇವಾರಿಯಾಗದೇ ಉಳಿದಿವೆ. ಫಲಾನುಭವಿಗಳು ತಾಲೂಕು ಕಚೇರಿಗೆ 2 ವರ್ಷದಿಂದ ಬರುತ್ತಲೇ ಇದ್ದಾರೆ. ವಿನಾಃಕಾರಣ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಸ್ಥಳದಲ್ಲಿದ್ದ ಮಾಜಿ ಸಚಿವ ಡಿ.ಎನ್. ಜೀವರಾಜ್ ಸಿ.ಟಿ. ರವಿ ಅವರ ಗಮನಕ್ಕೆ ತಂದರು. ಕುಂಟು ನೆಪ ನೀಡಿ ಹಕ್ಕುಪತ್ರ ಮತ್ತು ಪಹಣಿಗೆ ಸತಾಯಿಸುವುದು ಸರಿಯಲ್ಲ. ದಾಖಲೆ ಸರಿಯಿಲ್ಲದಿದ್ದರೆ ಅರ್ಜಿಗಳನ್ನು ತಿರಸ್ಕರಿಸಿ, ಸರಿಯಿರುವುದನ್ನು ಅಂಗೀಕರಿಸಿ ಹಕ್ಕುಪತ್ರಗಳನ್ನು ಕಾಲಮಿತಿಯೊಳಗೆ ವಿತರಿಸಬೇಕು. ಹಕ್ಕುಪತ್ರಕ್ಕೆ ಯಾವುದೇ ಸಬೂಬು ಹೇಳದೇ ಪಹಣಿ ಹಾಕಿಕೊಡಬೇಕು ಎಂದು ಸಿ.ಟಿ. ರವಿ ಸೂಚಿಸಿದರು.
ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಈಗಾಗಲೇ ಸಾಕಷ್ಟು ಹಕ್ಕಪತ್ರಗಳನ್ನು ಕೊಟ್ಟಿದ್ದೇವೆ. ಸರ್ಕಾರ ಈಗಾಗಲೇ ಅಕ್ರಮ- ಸಕ್ರಮ ಸಮಿತಿ ರಚನೆ ಮಾಡಿದೆ. ಮುಂದಿನ ದಿನಗಳಲ್ಲಿ ಸಮಿತಿ ಸಭೆ ಕರೆಯುವ ಮೂಲಕ ಫಾರಂ 50, 53 ಮತ್ತು 57 ಅಡಿ ಅರ್ಜಿ ಸಲ್ಲಿಸಿದ ರೈತರಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಒಟ್ಟು 34 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಸಭೆಗೂ ಮುನ್ನ ತಾಲೂಕಿನ ಉತ್ತಿನಗದ್ದೆ ಮತ್ತು ನೈಬೀ ರಸ್ತೆ ಮುಂತಾದ ಕಡೆ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಸದಸ್ಯರಾದ ಎಸ್.ಎನ್. ರಾಮಸ್ವಾಮಿ, ದಿವ್ಯ ದಿನೇಶ್, ತಾಪಂ ಅಧ್ಯಕ್ಷೆ ಜಯಂತಿ ನಾಗರಾಜ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಅಕ್ಷಯ್, ಉಪವಿಭಾಗಾಧಿಕಾರಿ ಡಾ| ನಾಗರಾಜ್, ತಹಶೀಲ್ದಾರ್ ಪರಮೇಶ್ವರ್, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ನವೀನ್ಕುಮಾರ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ