ಸಮಾನ ಶಿಕ್ಷಣದಿಂದ ದೇಶದ ಪ್ರಗತಿ: ಡಾ| ಗಿರೀಶ್
ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಿದರೆ ಅದೇ ಸಮಾನತೆ
Team Udayavani, Mar 1, 2020, 5:15 PM IST
ಚಿತ್ರದುರ್ಗ: ಎಲ್ಲರಿಗೂ ಸಮನಾದ ಶಿಕ್ಷಣ ದೊರೆತಾಗ ಮಾತ್ರ ದೇಶದಲ್ಲಿ ಸಮಾನತೆ ಹಾಗೂ ಅಭಿವೃದ್ಧಿ ಸಾಧಿ ಸಲು ಸಾಧ್ಯ. ಹಾಗಾಗಿ ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕು ಎಂದು ಕಬೀರಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|
ಟಿ. ಗಿರೀಶ್ಹೇಳಿದರು.
ನಗರದ ಬಾಪೂಜಿ ಸಮೂಹ ಸಂಸ್ಥೆ ಆವರಣದಲ್ಲಿ ಶನಿವಾರ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ಹತ್ತು ಬೆಳದಿಂಗಳು ಹಾಗೂ ವಿದ್ಯಾರ್ಥಿ ಸಂಘ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಪ್ರಜಾಪ್ರಭುತ್ವ ಹಾಗೂ ದೇಶದ ಸಂವಿಧಾನ ಹಾಗೂ ಕಾನೂನುಗಳ ಅಡಿಯಲ್ಲಿ ಬದುಕುತ್ತಿದ್ದೇವೆ. ಕಾನೂನಿನ ಆರಿವಿನೊಂದಿಗೆ ಪ್ರಜಾಪ್ರಭುತ್ವದ ಸಿದ್ಧಾಂತಗಳನ್ನು ತರಗತಿಯಲ್ಲಿ ಹೇಗೆ ಪ್ರತಿಪಾದನೆ ಮಾಡಬೇಕು, ಹೇಗೆ ಜಾರಿಗೊಳಿಸಬೇಕು, ನಮ್ಮ ಜವಾಬ್ದಾರಿಗಳು ಏನು ಎನ್ನುವುದನ್ನು ತಿಳಿಯಬೇಕು. ಡಾ|
ಸರ್ವಪಲ್ಲಿ ರಾಧಾಕೃಷ್ಣನ್ ಹೇಳುವಂತೆ ದೇಶದ ಅಭಿವೃದ್ಧಿ ಆಗುವುದು ಶಾಲೆಯ ನಾಲ್ಕು ಗೋಡೆಗಳ ಮಧ್ಯೆ. ನಾವು ಯಾವ ರೀತಿಯ ಶಿಕ್ಷಣ ಅಭಿವೃದ್ಧಿ ಮಾಡುತ್ತೇವೆ, ಅದೇ ರೀತಿ ದೇಶ ಅಭಿವೃದ್ಧಿಯಾಗುತ್ತದೆ. ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಎಲ್ಲ ವರ್ಗದವರಿಗೂ ಶಿಕ್ಷಣ ಸಿಗುವಂತೆ ಮಾಡಿದರೆ ಅದೇ ಸಮಾನತೆ ಎಂದರು.
ಬಾಪೂಜಿ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ವೀರೇಶ್ ಮಾತನಾಡಿ, ಶಿಕ್ಷಣದಲ್ಲಿ ಎಲ್ಲರೂ ಸಮಾನರು. ಎಲ್ಲ ವರ್ಗದ ಜನರಿಗೂ ಶಿಕ್ಷಣ ಸಿಗಬೇಕು. ಶಿಕ್ಷಕರಾಗುವ ನೀವು ಶಿಕ್ಷಣದಲ್ಲಿ ತಾರತಮ್ಯ ಮಾಡದೆ ಎಲ್ಲರುಗೂ ಒಂದೇ ಭಾವನೆಯಲ್ಲಿ ಶಿಕ್ಷಣ ನೀಡಬೇಕು ಎಂದು ತಿಳಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಸ್.ಟಿ. ಸ್ವಾಮಿ, ಬಾಪೂಜಿ ದೂರ ಶಿಕ್ಷಣ ವಿಭಾಗದ ಪ್ರೊ| ಎ.ಎಂ. ರುದ್ರಪ್ಪ, ಸಂಸ್ಥೆಯ ಶೈಕ್ಷಣಿಕ ಸಂಯೋಜಕ ಶಿವಕುಮಾರ್, ನಿರ್ದೇಶಕ ಕೆ.ಎಂ. ಚೇತನ್, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಎಂ.ಆರ್. ಜಯಲಕ್ಷ್ಮೀ, ಉಪನ್ಯಾಸಕರಾದ ಮಾರುತೇಶ್, ಮಂಜುನಾಥಪ್ಪ, ಪದ್ಮಶ್ರೀ, ಎ.ಎಂ. ಅರ್ಚನಾ, ಮಂಜುನಾಥ್ ಮತ್ತಿತರರು ಇದ್ದರು.