ಇ-ಲೋಕ ಅದಾಲತ್ನಲ್ಲಿ 3671 ಪ್ರಕರಣ ಇತ್ಯರ್ಥ
Team Udayavani, Sep 20, 2020, 6:52 PM IST
ಚಿತ್ರದುರ್ಗ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಶನಿವಾರ ಆಯೋಜಿಸಿದ್ದ ಮೆಗಾ ಇ-ಲೋಕ ಅದಾಲತ್ನಲ್ಲಿ 3671 ಪ್ರಕರಣಗಳು ರಾಜಿಯಾಗಿದ್ದು, ಇದರಿಂದ 5,79,21,387 ರೂ.ಗಳನ್ನು ಸಂಗ್ರಹಿಸಲಾಗಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ಮೆಗಾ ಇ-ಲೋಕ ಅದಾಲತ್ ಆಯೋಜಿಸಲಾಗಿತ್ತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮನಗೊಳಿ ಪ್ರೇಮಾವತಿ ಎಂ. ಅದಾಲತ್ ನೇತೃತ್ವ ವಹಿಸಿಕೊಂಡಿದ್ದರು. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತೆಗೆದುಕೊಂಡಿದ್ದು, ಇದರಲ್ಲಿ ರಾಜಿಯಾಗಬಲ್ಲ ಅಪರಾಧ ಪ್ರಕರಣ, ಮೋಟಾರು ವಾಹನ ಅಪಘಾತ ಪರಿಹಾರ, ಕಂದಾಯ ಪ್ರಕರಣ, ಚೆಕ್ ಬೌನ್ಸ್, ಬ್ಯಾಂಕ್ ವಸೂಲಾತಿ, ವಿದ್ಯುತ್ ಹಾಗೂ ನೀರಿನ ಶುಲ್ಕ ಪ್ರಕರಣಗಳು, ಕೌಟುಂಬಿಕ ಕಲಹ, ಬಾಡಿಗೆ ಅನುಭೋಗದ ಹಕ್ಕು ಹಾಗೂ ಭೂ ಪರಿಹಾರ ಕೇಸುಗಳು ಸೇರಿ ಹಲವು ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಲಾಗಿತ್ತು. ಚಿತ್ರದುರ್ಗ ನ್ಯಾಯಾಲಯದಲ್ಲಿ 31,564 ಬಾಕಿ ಪ್ರಕರಣಗಳಿದ್ದು, ಇದರಲ್ಲಿ ಇ-ಲೋಕ ಅದಾಲತ್ನಲ್ಲಿ 6173 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. 3671 ಪ್ರಕರಣಗಳನ್ನು ರಾಜಿ ಮಾಡಿಸಿದ್ದು ಇದರಿಂದ 5,79,21,387 ರೂ. ಸಂಗ್ರಹವಾಗಿದೆ.
ಇದೇ ರೀತಿ ವ್ಯಾಜ್ಯ ಪೂರ್ವ 21ಪ್ರಕರಣಗಳಲ್ಲಿ 1 ಪ್ರಕರಣವನ್ನು ಮಾತ್ರ ರಾಜಿ ಮಾಡಿದ್ದು, ಇದರಿಂದ 5.30 ಲಕ್ಷ ರೂ.ಗಳನ್ನು ಸಂಗ್ರಹ ಮಾಡಲಾಗಿದೆ. ಮೆಗಾ ಇ-ಲೋಕ ಅದಾಲತ್ನಲ್ಲಿ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ಬನ್ನಿಕಟ್ಟಿ ಆರ್. ಹನುಮಂತಪ್ಪ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧಿಧೀಶರು ಹಾಗೂಸಿಜೆಎಂ ಟಿ. ಶಿವಣ್ಣ, ಹಿರಿಯ ಸಿವಿಲ್ ನ್ಯಾಯಾ ಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಗಿರೀಶ ಬಿ.ಕೆ. ಸೇರಿದಂತೆ ಇತರೆ ನ್ಯಾಯಾಲಯಗಳ ನ್ಯಾಯಾಧೀಶರು ಉಪಸ್ಥಿತರಿದ್ದರು.