ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ: 58 ಲಕ್ಷ ರೂ. ಜಪ್ತಿ
Team Udayavani, May 10, 2023, 9:32 AM IST
ಚಿತ್ರದುರ್ಗ: ನಗರದ ಹೊರವಲಯದ ಕ್ಯಾದಿಗೆರೆ ಬಳಿಯಿರುವ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಮನೆಯ ಮೇಲೆ ದಾಳಿ ನಡೆಸಿರುವ ಚುನಾವಣಾಧಿಕಾರಿಗಳು 58.83 ಲಕ್ಷ ರೂ. ವಶಕ್ಕೆ ಪಡೆದುಕೊಂಡಿದ್ದರೆ.
ಮತದಾರರಿಗೆ ಹಂಚುವ ಉದ್ದೇಶದಿಂದ ಕವರ್ ಗಳಿಗೆ ಹಾಕಿದ್ದ 50 ಲಕ್ಷ ರೂ. ಹಾಗೂ ಪ್ರತ್ಯೇಕವಾಗಿದ್ದ 8.83 ಲಕ್ಷ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳವಾರ ರಾತ್ರಿ ದಾಳಿ ನಡೆಸಿದ್ದ ಅಧಿಕಾರಿಗಳು ಇಂದೂ ಕೂಡಾ ತಪಾಸಣೆ ಮುಂದುವರೆಸಿದ್ದಾರೆ.ವಿಚಕ್ಷಣಾ ದಳದ ಅಧಿಕಾರಿ ರಾಘವೇಂದ್ರ, ಅಬಕಾರಿ ಅಧಿಕಾರಿ ಇಮ್ರಾನ್, ನೋಡೆಲ್ ಅಧಿಕಾರಿ ಮಧುಸೂದನ್ ನೇತೃತ್ವ ದಲ್ಲಿ ದಾಳಿ ನಡೆದಿದೆ.
ಇದನ್ನೂ ಓದಿ:ದೇವರೇ ಚುನಾವಣೆಯಲ್ಲಿ ನಮ್ಮನ್ನೇ ಗೆಲ್ಲಿಸು: ಮತದಾನದ ಮುನ್ನಾದಿನ ಗಣ್ಯರ ದೇಗುಲ ಸುತ್ತಾಟ
ಮತದಾರರಿಗೆ ಹಂಚುವ ಉದ್ದೇಶದಿಂದ ಕವರ್ ಗಳಿಗೆ ಹಣ ಹಾಕಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದರೊಟ್ಟಿಗೆ ರಘುಆಚಾರ್ ನಿವಾಸದಲ್ಲಿ 239 ಲೀಟರ್ ಬಿಯರ್ ಹಾಗೂ 9 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.
ಇದರೊಟ್ಟಿಗೆ ಮತ್ತೆರಡು ಪ್ರತ್ಯೇಕ ಪ್ರಕರಣಗಳಲ್ಲಿ ಚಿತ್ರದುರ್ಗದ ಸಾಧಿಕ್ ನಗರದಲ್ಲಿ 1.08 ಲಕ್ಷ ಹಾಗೂ ಹೊಸದುರ್ಗ ತಾಲೂಕು ವ್ಯಾಪ್ತಿಯಲ್ಲಿ 4.25 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಟ್ಟಿಗೆ ಅಂಚೆ ಮತದಾರರ ಪಟ್ಟಿಯೂ ಲಭ್ಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.