ನಾರಾಯಣಗೌಡ ಬಿಟ್ಟು ನಾವ್ಯಾರೂ ಕಾಂಗ್ರೆಸ್ ಸೇರಲ್ಲ: ಸಚಿವ ಬಿ.ಸಿ.ಪಾಟೀಲ್
Team Udayavani, Mar 7, 2023, 6:40 AM IST
ಚಿತ್ರದುರ್ಗ: ಬಿಜೆಪಿಗೆ ವಲಸೆ ಬಂದ 17 ಶಾಸಕರ ಪೈಕಿ ಸಚಿವ ನಾರಾಯಣಗೌಡ ಮಾತ್ರ ಕಾಂಗ್ರೆಸ್ಗೆ ಹೋಗುತ್ತಾರೆ ಎನ್ನುವ ಮಾಹಿತಿಯಿದೆ. ನಾವ್ಯಾರೂ ಕಾಂಗ್ರೆಸ್ ಸೇರುವುದಿಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದಲೇ ಅನೇಕರು ಬಿಜೆಪಿಗೆ ಬರಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ನವರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಮಾ.9ರಂದು ಬಂದ್ ಮಾಡಲು ಹೊರಟಿದ್ದಾರೆ. ಅವರು ನಿರುದ್ಯೋಗಿಗಳು, ಜೀವಂತ ಇದ್ದೇವೆ ಎನ್ನುವುದನ್ನು ತೋರಿಸಲು ಪ್ರತಿಭಟಿಸುತ್ತಾರೆ. ಆದರೆ ನಮಗೆ ಮಾಡಲು ಸಾಕಷ್ಟು ಅಭಿವೃದ್ಧಿ ಕೆಲಸಗಳಿವೆ. ಡಿ.ಕೆ. ಶಿವಕುಮಾರ್ ಕಲೆಕ್ಷನ್ ಶೂರರು. ಸಿಎಂ ಬಗ್ಗೆ ಅವರಾಡುವ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಯಾವ ಬೆಂಬಲಿಗರಿಗೂ ಟಿಕೆಟ್ ತಪ್ಪುವ ಭೀತಿ ಇಲ್ಲ. ಇದು ಸತ್ಯಕ್ಕೆ ದೂರವಾದ ಮಾತು.
ಯಡಿಯೂರಪ್ಪ ನಮ್ಮ ಪಕ್ಷದ ಭೀಷ್ಮ. ಮಾಡಾಳು ವಿರೂಪಾಕ್ಷಪ್ಪ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಲೋಕಾಯುಕ್ತ ಸಂಸ್ಥೆ ಸ್ವತಂತ್ರವಾಗಿ ತನಿಖೆ ಮಾಡುತ್ತಿದೆ ಎಂದರು.