ಲವ್ ಜಿಹಾದ್ ತಡೆಗೆ ವಿಶೇಷ ಕಾನೂನು ಅಗತ್ಯ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ
Team Udayavani, Dec 14, 2022, 9:53 AM IST
ಚಿತ್ರದುರ್ಗ: ಮತಾಂತರ ತಡೆ ಕಾಯ್ದೆಯಲ್ಲೇ ಲವ್ ಜಿಹಾದ್ ತಡೆಯುವ ಅಂಶಗಳು ಸೇರಿವೆ. ಹೀಗಾಗಿ ಪ್ರತ್ಯೇಕ ಕಾನೂನು ಅಗತ್ಯ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಘ ಪರಿವಾರದ ಕೆಲ ಸಂಘಟನೆಗಳು ಲವ್ ಜಿಹಾದ್ ತಡೆಗೆ ಹೊಸ ಕಾನೂನು ರೂಪಿಸಲು ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯಿಸಿ, ಲವ್ ಜಿಹಾದ್ ತಡೆಗೆ ರಾಜ್ಯದಲ್ಲಿ ಪ್ರತ್ಯೇಕ ಕಾನೂನು ರೂಪಿಸುವ ಹಾಗೂ ವಿಶೇಷ ಕಾರ್ಯಪಡೆ ರಚಿಸುವ ಅಗತ್ಯ ಇಲ್ಲ ಎಂದರು.
ರಾಜ್ಯದಲ್ಲಿ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆಯಲ್ಲಿ ಈ ಅಂಶ ಅಡಕವಾಗಿದೆ. ಹೀಗಾಗಿ, ಪ್ರತ್ಯೇಕ ಕಾನೂನು ಅಥವಾ ಕಾರ್ಯಪಡೆಯ ಅಗತ್ಯ ಬರುವುದಿಲ್ಲ. ಆದರೂ, ಈ ವಿಚಾರದಲ್ಲಿ ಪರಿಶೀಲನೆ ನಡೆಸುತ್ತೇವೆ ಎಂದರು.
ಇಷ್ಟವಾದ ಧರ್ಮ ಅನುಸರಿಸಲು ಸಂವಿಧಾನದಲ್ಲಿ ಅವಾಕಶವಿದೆ. ಮತ್ತೊಂದು ಧರ್ಮ ಅನುಸರಿಸುವ ಮುನ್ನ ಅರ್ಜಿ ಸಲ್ಲಿಸಬೇಕು. ಆಮಿಷವೇ ಅಥವಾ ಬಲವಂತದ ಮತಾಂತರವೇ ಎಂಬುದನ್ನು ಪರಿಶೀಲಿಸಿ ಅನುಮತಿ ನೀಡಲಾಗುವುದು. ಚಿತ್ರದುರ್ಗ ಸೇರಿ ರಾಜ್ಯದ ಹಲವೆಡೆ ಆಮಿಷದ ಮತಾಂತರ ಅವ್ಯಾಹತವಾಗಿ ನಡೆಯುತ್ತಿದೆ. ಮಠಾಧೀಶರ ಕೋರಿಕೆ ಮೇರೆಗೆ ಕಾನೂನು ರೂಪಿಸಲಾಗಿದೆ. ಮತಾಂತರಕ್ಕೆ ಸಂಬಂಧಿಸಿದಂತೆ ರಕ್ತ ಸಂಬಂಧಿಗಳು ದೂರು ನೀಡಬೇಕು ಎಂದು ಹೇಳಿದರು.
ಗಡಿ ವಿವಾದದ ಚರ್ಚೆಗೆ ದೆಹಲಿ ಪ್ರವಾಸ:
ಇಂದು ಮಧ್ಯಾಹ್ನ ದೆಹಲಿಗೆ ತೆರಳುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರ- ಕರ್ನಾಟಕದ ಗಡಿ ಮತ್ತು ಗೃಹ ಇಲಾಖೆಯ ವಿಚಾರವಾಗಿ ಚರ್ಚಿಸಲು ಆಹ್ವಾನ ಬಂದಿರುವ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿದ್ದೇನೆ. ದೆಹಲಿ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದರು.
ಕಾಂಗ್ರೆಸ್ ಯಾತ್ರೆಯಿಂದ ಪ್ರಯೋಜನ ಇಲ್ಲ:
ಕಾಂಗ್ರೆಸ್ ನ 60 ವರ್ಷದ ಆಡಳಿತ ಸಾಕು ಎನ್ನುವುದು ಜನರ ಅಭಿಪ್ರಾಯ. ಹೀಗಾಗಿ, ಕಾಂಗ್ರೆಸ್ ನಾಯಕರು ಬಸ್ ಯಾತ್ರೆ ಅಥವಾ ತಿರುಪತಿ ಯಾತ್ರೆ ಯಾವುದು ಮಾಡಿದರೂ ಪ್ರಯೋಜನ ಆಗುವುದಿಲ್ಲ. ಕಾಂಗ್ರೆಸ್ ಸೋಲಿಸಲು ಜನ ನಿಶ್ಚಯಿಸಿದ್ದಾರೆ ಎಂದರು.