ಮಂಗಳೂರು ವಿ.ವಿ ಶೈಕ್ಷಣಿಕ ಮಂಡಳಿ ಸಭೆ: ನಾಲ್ಕು ಹೊಸ ಕಾಲೇಜುಗಳಿಗೆ ಅನುಮತಿ
Team Udayavani, Jun 17, 2022, 6:59 AM IST
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಿವಿಧ ಕೋರ್ಸ್ಗಳ ಕೆಲವು ಪಠ್ಯಕ್ರಮ ಪರಿಷ್ಕರಣೆ ಹಾಗೂ ನಾಲ್ಕು ಹೊಸ ಕಾಲೇಜುಗಳ ಆರಂಭಕ್ಕೆ ಮಂಗಳೂರು ವಿ.ವಿ. ಶೈಕ್ಷಣಿಕ ಮಂಡಳಿ ಅನುಮತಿ ನೀಡಿದೆ.
ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ಗುರುವಾರ ಮಂಗಳಗಂಗೋತ್ರಿಯಲ್ಲಿ ನಡೆದ ಮಂಗಳೂರು ವಿ.ವಿ. 2022-23ನೇ ಸಾಲಿನ ಶೈಕ್ಷಣಿಕ ಮಂಡಳಿಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಹೊಸ ಕಾಲೇಜುಗಳಾಗಿ ಮಂಗಳೂರಿನ ಅಶೋಕನಗರದಲ್ಲಿ ಎಸ್ಸಿಎಸ್ ಪ್ರಥಮ ದರ್ಜೆ ಕಾಲೇಜು (ಬಿಕಾಂ, ಬಿಬಿಎ, ಬಿಎಸ್ಸಿ ಸಹಿತ 7 ವಿಷಯ), ಮಂಗಳೂರಿನ ಅಡ್ಯಾರ್ನಲ್ಲಿ ಬರಖಾ ಡಿಗ್ರಿ ಕಾಲೇಜು (ಬಿಎ, ಬಿಕಾಂ, ಬಿಎಸ್ಸಿ), ಉಡುಪಿ ಕುಂಜಿಬೆಟ್ಟುವಿನಲ್ಲಿ ಮಹಾತ್ಮಾ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜು (ಬಿಕಾಂ, ಬಿಸಿಎ) ಹಾಗೂ ಎಡ್ವರ್ಡ್ ಆ್ಯಂಡ್ ಸಿಂಥಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಕಾಲೇಜಿಗೆ (ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್)ಅನುಮೋದನೆ ನೀಡಲಾಗಿದೆ.
ಜತೆಗೆ 2022-23 ಸಾಲಿಗೆ 146 ಕಾಲೇಜಿನ ಸಂಯೋಜನೆ ನವೀಕರಣ, 28 ಕಾಲೇಜಿನ ಸಂಯೋಜನೆ ವಿಸ್ತರಣೆ, 8 ಕಾಲೇಜಿನ ಶಾಶ್ವತ ಸಂಯೋಜನೆಯನ್ನು ಅನುಮೋದಿಸಲಾಯಿತು. ಈ ಬಾರಿ ದ.ಕ., ಉಡುಪಿ ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯ 27 ಕಾಲೇಜುಗಳು ವಿವಿಧ ಕಾರಣ ನೀಡಿ ಮಂಗಳೂರು ವಿ.ವಿ. ಜತೆ ಸಂಯೋಜನೆಗೆ ಅರ್ಜಿ ಸಲ್ಲಿಸಿಲ್ಲ.
18 ಮಂದಿಯ ಸಂಶೋಧನಾ ಅವಧಿ ವಿಸ್ತರಣೆ :
ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಸಂಶೋಧನ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡು ಸಂಶೋಧನೆ ಮುಂದುವರಿಸಲು, ನಿಗದಿತ ಸಮಯದಲ್ಲಿ ಪ್ರಬಂಧ ಮಂಡಿಸಲು ಅಸಾಧ್ಯವಾಗಿರುವ 18 ಮಂದಿ ಸಂಶೋಧನ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಅವಧಿಗೆ ಷರತ್ತುಬದ್ಧ ಅನುಮತಿ ನೀಡಲು ತೀರ್ಮಾನಿಸಲಾಯಿತು. ಈ ರೀತಿ ಅವಧಿ ವಿಸ್ತರಣೆ ನೀಡುವುದು ಶೈಕ್ಷಣಿಕ ಶಿಸ್ತಿಗೆ ವಿರುದ್ಧ. ಆದರೆ ವಿದ್ಯಾರ್ಥಿಗಳ ಹಿತದ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಂದೆ ಇಂತಹ ರಿಯಾಯಿತಿ ಇರುವುದಿಲ್ಲ ಎಂದು ಪ್ರೊ| ಯಡಪಡಿತ್ತಾಯ ತಿಳಿಸಿದರು.
ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸುವ ಕಾಲೇಜುಗಳಿಗೆ ವಿಧಿಸಿದ ನಿಯಮವನ್ನು ಕನಿಷ್ಠ 10 ವರ್ಷದ ಬದಲು 5 ವರ್ಷಗಳ ಕಾಲ ಮಂಗಳೂರು ವಿ.ವಿ. ಸಂಯೋಜನೆಯಲ್ಲಿ ಇರಬೇಕು ಎಂದು ಮಾರ್ಪಾಡು ಮಾಡಲಾಯಿತು. ಬ್ಯಾರಿ ಭಾಷೆ ಹಾಗೂ ಕಲೆಗಳ ಪ್ರಕಾರದಲ್ಲಿ ಸರ್ಟಿಫಿಕೆಟ್, ಡಿಪ್ಲೊಮಾ, ಪಿಜಿ ಡಿಪ್ಲೊಮಾ ಕೋರ್ಸ್ಗೆ ಅನುಮೋದನೆ, ಕೊಡವ ಭಾಷೆಯಲ್ಲೂ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಅವಕಾಶ ನೀಡಲು ತೀರ್ಮಾನಿಸಲಾಯಿತು.
ಯುವ ರೆಡ್ಕ್ರಾಸ್ ಸೆಮಿಸ್ಟರ್ ಕೋರ್ಸ್ :
ದ್ವಿತೀಯ ಸೆಮಿಸ್ಟರ್ ಬಿಎ, ಬಿಸಿಎ, ಬಿಬಿಎ, ಬಿಎಸ್ಸಿ, ಬಿಕಾಂ ಪದವಿಗಳ ಇಂಗ್ಲಿಷ್ ಭಾಷಾ ವಿಷಯಗಳ ಪಠ್ಯಕ್ರಮ ಮತ್ತು ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಲಾಯಿತು. ಸ್ನಾತಕೋತ್ತರ ಸಂಖ್ಯಾಶಾಸ್ತ್ರದ ಸಾಫ್ಟ್ ಕೋರ್ ಕೋರ್ಸ್ ಮತ್ತು ಪಿಎಚ್ಡಿ ಕಾರ್ಯಕ್ರಮಕ್ಕೆ ಪರಿಷ್ಕೃತ ಪಠ್ಯ, ಪದವಿ ಮಟ್ಟದಲ್ಲಿ ಬಿಎಸ್ಸಿ (ಹಾಸ್ಪಿಟಾಲಿಟಿ ಸೈನ್ಸ್) ಕಾರ್ಯಕ್ರಮದಲ್ಲಿ ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್ಗೆ ಹೆಚ್ಚುವರಿಯಾಗಿ ಎರಡನೇ ಮುಕ್ತ ಆಯ್ಕೆ ಕೋರ್ಸ್ ಆಗಿ ಸೇರ್ಪಡೆ, ಸ್ನಾತಕೋತ್ತರ ವೈದ್ಯಕೀಯ ಭೌತಶಾಸ್ತ್ರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರವೇಶಕ್ಕೆ ಪೂರ್ವ ಎರಡು ವರ್ಷ ಕಲಿಕೆ ಇದ್ದುದನ್ನು ಒಂದು ವರ್ಷಕ್ಕೆ ಸೀಮಿತ, ಯುವ ರೆಡ್ಕ್ರಾಸ್ ಬಗ್ಗೆ ಎರಡು ಸೆಮಿಸ್ಟರ್ ಕೋರ್ಸ್ ಕಲಿಕೆಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ವಿ.ವಿ. ಕುಲಸಚಿವರಾದ (ಆಡಳಿತ) ಡಾ| ಕಿಶೋರ್ ಕುಮಾರ್, (ಪರೀಕ್ಷಾಂಗ) ಪ್ರೊ| ಪಿ.ಎಲ್. ಧರ್ಮ, ಹಣಕಾಸು ಅಧಿಕಾರಿ ಕೆ.ಎಸ್. ಜಯಪ್ಪ ಉಪಸ್ಥಿತರಿದ್ದರು.
ಬೆಳಪು ಸಂಶೋಧನ ಕೇಂದ್ರಕ್ಕೆ 8 ಕೋ.ರೂ :
ಉಡುಪಿಯ ಬೆಳಪುವಿನಲ್ಲಿ ಸುಧಾರಿತ ಸಂಶೋಧನ ಕೇಂದ್ರ ನಿರ್ಮಾಣಕ್ಕೆ 8 ಕೋ.ರೂ., ವಿ.ವಿ. ಆವರಣದಲ್ಲಿ ಅಂತಾರಾಷ್ಟ್ರೀಯ ವಸತಿ ನಿಲಯ, ತರಗತಿ ಕೊಠಡಿ ಸಂಕೀರ್ಣ, ಒಳಾಂಗಣ ಕಾಮಗಾರಿಗೆ 8 ಕೋ.ರೂ., ಕ್ಯಾಂಪಸ್ನಲ್ಲಿ ಬಾಸ್ಕೆಟ್ಬಾಲ್ ಕೋರ್ಟ್ ನಿರ್ಮಾಣ, ಡಾ| ಬಿ.ಆರ್. ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರ ಪ್ರತಿಮೆ ಸ್ಥಾಪನೆ, ಈಜುಕೊಳ ಸೇರಿದಂತೆ ಹಲವು ಯೋಜನೆಗಳನ್ನು 2022-23ರಲ್ಲಿ ಕೈಗೊಳ್ಳಲು ವಿ.ವಿ. ನಿರ್ಧರಿಸಿದೆ.
64 ಲಕ್ಷ ರೂ.ಗಳ ಕೊರತೆ ಬಜೆಟ್ :
2022-23ನೇ ಸಾಲಿನ ಆಯವ್ಯಯವನ್ನು ಹಣಕಾಸು ಅಧಿಕಾರಿ ಕೆ.ಎಸ್. ಜಯಪ್ಪ ಮಂಡಿಸಿದರು. 2022-23ನೇ ಸಾಲಿಗೆ ಒಟ್ಟು 272.57 ಕೋ.ರೂ. ಆದಾಯ ಮತ್ತು 273.21 ಕೋ.ರೂ. ವೆಚ್ಚ ಅಂದಾಜಿಸಲಾಗಿದ್ದು, 64 ಲಕ್ಷ ರೂ.ಗಳ ಕೊರತೆ ಬಜೆಟ್ ಮಂಡಿಸಲಾಗಿದೆ. ಕಳೆದ ಬಾರಿ 2.05 ಕೋ.ರೂ. ಕೊರತೆಯಾಗಿತ್ತು. ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಧ್ಯಯನ ಪೀಠ ಸ್ಥಾಪನೆಗೆ ಸರಕಾರದಿಂದ 2 ಕೋ.ರೂ. ಅನುದಾನ ನಿರೀಕ್ಷಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ