ಪ್ರವೀಣ್ ನೆಟ್ಟಾರು ಪ್ರಕರಣ: ಮಂಪರು ಪರೀಕ್ಷೆ ಮಾಡಿದರೆ ನಳಿನ್ ಸಿಕ್ಕಿಬೀಳ್ತಾರೆ; ಹರಿಪ್ರಸಾದ್
Team Udayavani, Jan 6, 2023, 7:10 AM IST
ಉಳ್ಳಾಲ: ಧರ್ಮ ಏನಿದ್ದರೂ ಮನೆಯಲ್ಲಿ, ಸಾರ್ವಜನಿಕವಾಗಿ ಸಂವಿಧಾನ ಧರ್ಮ ಪಾಲಿಸು ವುದು ಪ್ರತಿಯೊಬ್ಬರ ಕರ್ತವ್ಯ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಕುರಿತು ಸಂಸದ ನಳಿನ್ ಕುಮಾರ್ ಅವರನ್ನು ಮಂಪರು ಪರೀಕ್ಷೆಗೊಳಪಡಿಸಿದರೆ ಸಿಕ್ಕಿ ಬೀಳ್ತಾರೆ ಎಂದರು ವಿಧಾನ ಪರಿಷತ್ನ ವಿಪಕ್ಷ ನಾಯಕ ಹರಿಪ್ರಸಾದ್ ಹೇಳಿದ್ದಾರೆ.
ಮಂಗಳೂರು ಕೋಮುವಾದ ಲ್ಯಾಬ್: ಸಿದ್ದರಾಮಯ್ಯ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ. ಕೋಮುವಾದ ಹುಟ್ಟುವ ಲ್ಯಾಬ್ ಮಂಗಳೂರು. ಕೋಮುವಾದಿ ಬಿಜೆಪಿಯನ್ನು ಬೇರು ಸಹಿತ ಕಿತ್ತೆಸೆವ ಕೆಲಸ ಇಲ್ಲಿಂದಲೇ ಆಗಬೇಕಾಗಿದೆ ಎಂದು ವಿಧಾನಸಭಾ ವಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಹರೇಕಳ ಗ್ರಾಮದ ಕಡವಿನ ಬಳಿ ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ನಡೆದ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿಗೆ ಅಂಬೇಡ್ಕರ್ ಅವರ ಸಂವಿದಾನದಲ್ಲಿ ನಂಬಿಕೆ ಇಲ್ಲ. ಅವರಿಗೆ ಅಸಮಾನತೆ, ಜಾತಿ ವ್ಯವಸ್ಥೆ, ಧರ್ಮದ ಆಧಾರದಲ್ಲಿ ಎತ್ತಿ ಕಟ್ಟುವ ಕೆಲಸ ಆಗಬೇಕು. ಬಿಜೆಪಿಯವರ ಬಂಡವಾಳವೇ ಇದಾಗಿದ್ದು, ಮುಖ್ಯ ಮಂತ್ರಿ ಬೊಮ್ಮಾಯಿ ಆರೆಸ್ಸೆಎಸ್ನ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದು, ಜಿಲ್ಲೆಯಲ್ಲಿ ಹತ್ಯೆಗಳಾದಾಗ ಒಂದು ಧರ್ಮದ ಕೊಲೆಯಾದ ಜಾಗಕ್ಕೆ ತೆರಳಿ ಪರಿಹಾರ ಘೋಷಣೆ ಮಾಡುವ ಕಾರ್ಯ ಆಗುತ್ತಿದೆ. ಇನ್ನೊಂದು ಧರ್ಮದಲ್ಲಿ ಹಾಗಾದರೆ ಅತ್ತ ಹೋಗುವುದಿಲ್ಲ, ಪರಿಹಾರವನ್ನೂ ಘೋಷಿಸುವುದಿಲ್ಲ ಎಂದರು.
ಬಿಜೆಪಿಯವರು ಚುನಾವಣೆ ಸಂದರ್ಭ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಳಿಕ ಮರೆತು ಸಮಾಜ ಒಡೆಯುವ ಕೆಲಸ ಮಾಡುತ್ತಾರೆ. ಮಂಗಳೂರು, ಉಡುಪಿ ಜನ ರಾಜಕೀಯವಾಗಿ ಪ್ರಬುದ್ಧರಾಗಿದ್ದು ಈ ಬಾರಿ ಸರಿಯಾದ ತೀರ್ಮಾನ ಮಾಡಲಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ ಜೆ.ಆರ್. ಲೋಬೋ, ಮೊದಿನ್ ಬಾವಾ, ಕೋಡಿಜಾಲ್ ಇಬ್ರಾಹಿಂ, ಐವನ್ ಡಿ’ಸೋಜಾ, ಕಣಚೂರು ಮೋನು, ಲಿಖೀತ್ರಾಜ್ ಮೌರ್ಯ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಮುಖಂಡರಾದ ಮಿಥುನ್ ರೈ, ಹರ್ಷರಾಜ್ ಮುದ್ಯ, ಮಹಮ್ಮದ್ ಮೋನು, ಇನಾಯತ್ ಆಲಿ,ರಕ್ಷಿತ್ ಶಿವರಾಂ, ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ರಾಕೇಶ್ ಮಲ್ಲಿ, ಅಶ್ವಿನ್ ಕುಮಾರ್ ರೈ, ಹರೇಕಳ ಗ್ರಾ.ಪಂ. ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಉಂಬುದ ಮೊದ ಲಾದವರು ಉಪಸ್ಥಿತರಿದ್ದರು.
ಜಿ.ಪಂ. ಮಾಜಿ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಸ್ವಾಗತಿಸಿದರು. ಶಾಸಕ ಯು.ಟಿ. ಖಾದರ್ ಪ್ರಸ್ತಾವನೆಗೈದರು. ತಾ.ಪಂ. ಮಾಜಿ ಸದಸ್ಯ ಮುಸ್ತಫಾ ಮಲಾರ್ ಹಾಗೂ ಅಬ್ದುಲ್ ರಝಾಕ್ ಕುಕ್ಕಾಜೆ ನಿರೂಪಿಸಿದರು.