ಕರಾವಳಿಯಲ್ಲಿ ಉದ್ಯೋಗ ಕ್ಷೇತ್ರಗಳಿಗೆ ಕುತ್ತು
Team Udayavani, Mar 17, 2020, 6:33 AM IST
ಪುರಭವನ ಬಳಿ ತಿಂಡಿ-ತಿನಿಸು, ಫಾಸ್ಟ್ಫುಡ್ ಗಾಡಿಗಳನ್ನು ಮುಚ್ಚಲಾಗಿದೆ.
ಮಂಗಳೂರು: ಕೊರೊನಾ ಆತಂಕದಿಂದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್, ಕ್ಯಾಟರಿಂಗ್, ಬೀದಿಬದಿಯ ತಿಂಡಿತಿನಸು ವ್ಯಾಪಾರ, ಮಾಲ್ಗಳು, ಸಭೆ, ಸಮಾರಂಭಗಳಿಗೆ ಅವಶ್ಯಕ ಸಾಮಗ್ರಿ ಪೂರೈಸುವ ಕ್ಷೇತ್ರಗಳ ಮೇಲೆ ನೇರ ಪರಿಣಾಮ ಬೀರಿದೆ.
ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಕ್ಷೇತ್ರ ತಲ್ಲಣ
ಪ್ರವಾಸಿಗರ ಆಗಮನ ಇಳಿಮುಖ ವಾಗಿರುವುದು, ಮದುವೆ ಸಹಿತ ಶುಭ ಸಮಾರಂಭಗಳ ಮುಂದೂಡಿಕೆ ಮತ್ತು ಸರಳ ಆಚರಣೆಯಿಂದ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ನವರು ಶೇ. 60ರಿಂದ 80ರಷ್ಟು ಬಾಡಿಗೆ ಕುಸಿದಿದೆ ಎನ್ನುತ್ತಾರೆ ಉಭಯ ಜಿಲ್ಲಾ ಅಸೋಸಿಯೇಶನ್ಗಳ ಪ್ರಧಾನ ಕಾರ್ಯದರ್ಶಿಗಳಾದ ಆನಂದ್ ಮತ್ತು ರಮೇಶ್ ಕೋಟ್ಯಾನ್. ರಿಕ್ಷಾ ಚಾಲಕರ ಸ್ಥಿತಿಯೂ ಭಿನ್ನವಾಗಿಲ್ಲ.
ಶುಭ ಸಮಾರಂಭಗಳ ಸರಳ ಆಚರಣೆಗೆ ಸರಕಾರ ಸೂಚಿಸಿದ್ದು ಕ್ಯಾಟರಿಂಗ್ ಕ್ಷೇತ್ರಕ್ಕೂ ಹೊಡೆತ ನೀಡಿದೆ. ಸಮಾ ರಂಭಗಳು ನಡೆದರೂ ಸಾವಿರ ಜನರ ಆರ್ಡರನ್ನು 100-150ಕ್ಕೆ ಇಳಿಸಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ದೊಡ್ಡ ಮತ್ತು 300ಕ್ಕೂ ಅಧಿಕ ಕ್ಯಾಟರಿಂಗ್ ಸಂಸ್ಥೆಗಳಿದ್ದು, 10,000ಕ್ಕೂ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸಿದೆ. ಉಡುಪಿ ಜಿಲ್ಲೆಯಲ್ಲಿ 400ಕ್ಕೂ ಮೇಲ್ಪಟ್ಟು ಕ್ಯಾಟರಿಂಗ್ ಸಂಸ್ಥೆಗಳಿದ್ದು 11,000ಕ್ಕೂ ಮೇಲ್ಪಟ್ಟು ಮಂದಿ ದುಡಿಯುತ್ತಿದ್ದಾರೆ ಎಂದು ಕ್ಯಾಟರಿಂಗ್ಮಾಲಕರ ಸಂಘ ತಿಳಿಸಿದೆ.
ಬೀದಿಬದಿ ಆಹಾರ ವ್ಯಾಪಾರ
ಸಾರ್ವಜನಿಕ ಆರೋಗ್ಯ ಮತ್ತು ಸ್ವತ್ಛತೆ ದೃಷ್ಟಿಯಿಂದ ಬೀದಿಬದಿಯ ತಿಂಡಿ, ತಿನಿಸು, ಫಾಸ್ಟ್ಫುಡ್ ವ್ಯಾಪಾರ ವನ್ನು ಸ್ಥಗಿತಗೊಳಿಸಲು ನಗರಾಡಳಿತ ಸಂಸ್ಥೆಗಳು ಸೂಚಿಸಿವೆ,
ಇದರಿಂದ ಉಭಯ ಜಿಲ್ಲೆಗಳ ಬೀದಿಬದಿಯಲ್ಲಿನ ಫಾಸ್ಟ್ ಫುಡ್, ತಿಂಡಿತಿನಿಸುಗಳ ವ್ಯಾಪಾರಿಗಳ ಸಹಿತ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.
ಸರಕಾರ ನೆರವಿಗೆ ಬರಲಿ
ಕೊರೊನಾ ಆತಂಕದಿಂದ ಬಾಧಿತವಾಗಿರುವ ಕ್ಷೇತ್ರಗಳಲ್ಲಿ ದುಡಿಯು ತ್ತಿರುವವರ ನೆರವಿಗೆ ಸರಕಾರ ಬರಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಬಹುತೇಕ ಮಂದಿ ಬ್ಯಾಂಕಿನಿಂದ ಸಾಲ ಪಡೆದು ಮಾಡುತ್ತಿದ್ದಾರೆ. ಅಂಥವರ ನೆರವಿಗೆ ಸರಕಾರ ಮುಂದಾಗಬೇಕು.
– ಆನಂದ್, ಪ್ರಧಾನ ಕಾರ್ಯದರ್ಶಿ ದ.ಕ. ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್