ಮಂಗಳೂರು: ಗಾಂಜಾ ಸೇವನೆ: ಮೂವರು ಪೊಲೀಸರ ವಶಕ್ಕೆ
Team Udayavani, May 11, 2022, 12:00 AM IST
ಮಂಗಳೂರು: ಗಾಂಜಾ ಸೇವನೆ ಮಾಡಿದ ಹಿನ್ನೆಲೆಯಲ್ಲಿ ಮೂವರು ಯುವಕರನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ನಾಲ್ವರು ಯುವಕರು ಕರಂಗಲ್ಪಾಡಿ ಬಳಿ ಅಪಾರ್ಟ್ಮೆಂಟ್ನಲ್ಲಿದ್ದುಕೊಂಡು ಮಾದಕ ವಸ್ತು ಸೇವಿಸಿ ಅನುಮಾನಾಸ್ಪದ ರೀತಿಯಲ್ಲಿ ಸುತ್ತಾಡುತ್ತಿರುವ ಬಗ್ಗೆ ಮಂಗಳವಾರ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.
ಈ ಪೈಕಿ ಕೇರಳದ ಬಿಲಾಲ್ ಅಹ್ಮದ್(19), ಸನು(21) ಮತ್ತು ಅಮೆನ್ ಅರ್ಶದ್(20) ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದ್ದು ಅವರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿದ್ಯಾರ್ಥಿ ಅನುಮಾನಾಸ್ಪದ ಸಾವು
ಮಂಗಳೂರು: ನಗರದ ಮೆಡಿಕಲ್ ಕಾಲೇಜೊಂದರ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಮೂಲತಃ ಕೇರಳದ ರೋಸನ್ ಜೋಸ್(21) ಮೃತಪಟ್ಟ ವಿದ್ಯಾರ್ಥಿ. ಈತ ಸೋಮವಾರ ರಾತ್ರಿ ಊಟ ಮಾಡಿ ಹಾಸ್ಟೆಲ್ ರೂಮ್ನಲ್ಲಿ ಮಲಗಿದ್ದ. ಮಂಗಳವಾರ ಬೆಳಗ್ಗೆ ಈತನ ತಂದೆ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಅವರು ಬೇರೆ ವಿದ್ಯಾರ್ಥಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ವಿದ್ಯಾರ್ಥಿಗಳು ರೂಮಿನ ಬಾಗಿಲು ಒಡೆದು ನೋಡಿದಾಗ ರೋಸನ್ ಜೋಸ್ ಮಲಗಿದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ. ತಪಾ ಸಣೆಗೆ ಒಳಪಡಿಸಿದಾಗ ಆತ ಮೃತಪಟ್ಟಿರುವುದು ತಿಳಿದು ಬಂದಿದೆ. ಪಾಂಡೇಶ್ವರ ಪೊಲೀಸರು ಅನು ಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ
ಬೆಳ್ತಂಗಡಿ: ಇಂದಬೆಟ್ಟ ಗ್ರಾಮದ ಬೈರೊಟ್ಟು ನಿವಾಸಿ ಬೌತಿಶ್ ಪಿಂಟೋ (70) ಅವರು ವಿಷ ಪದಾರ್ಥ ಸೇವಿಸಿ ಮೇ 9ರಂದು ಮೃತಪಟ್ಟಿದ್ದಾರೆ.
ಮೇ 9ರಂದು ಮಗ ಸ್ಟ್ಯಾನಿ ಪಿಂಟೋ ಕೆಲಸಕ್ಕೆ ಹೋಗಿ ಸಂಜೆ ಮರಳಿ ಬಂದಾಗ ಮನೆಯ ಬಚ್ಚಲು ಕೋಣೆಯ ಬಳಿ ತಂದೆ ಬಿದ್ದಿರುವುದನ್ನು ಕಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದರು. ಅಲ್ಲದೇ ಕಾಯಿಲೆಯಿಂದ ಬಳಲುತ್ತಿದ್ದು, ಕೈ ಕಾಲಿನಲ್ಲಿ ಊತ ಬಂದು ನಡೆದಾಡಲು ಆಗುತ್ತಿರಲಿಲ್ಲ. ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಇದರಿಂದಾಗಿ ಜೀವನದಲ್ಲಿ ಜುಗುಪ್ಸೆಗೊಂಡು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮಗ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಣ್ಣನಿಂದ ತಮ್ಮನ ಕೊಲೆ
ವಿಟ್ಲ: ಕನ್ಯಾನ ಗ್ರಾಮದ ನಂದರಬೆಟ್ಟು ಎಂಬಲ್ಲಿ ಅಣ್ಣ ತಮ್ಮನನ್ನು ಕೊಲೆ ಮಾಡಿದ ಘಟನೆ ಸಂಭವಿಸಿದೆ.
ನಂದರಬೆಟ್ಟು ಬಾಳಪ್ಪ ನಾಯ್ಕ (35) ಮೃತಪಟ್ಟ ದುರ್ದೈವಿ. ನಂದರಬೆಟ್ಟು ಐತ್ತಪ್ಪ ನಾಯ್ಕ(40) ನೊಗದಿಂದ ಬಡಿದು ಬಾಳಪ್ಪ ನಾಯ್ಕ ಅವರನ್ನು ಕೊಲೆ ಮಾಡಿದ್ದಾನೆ. ಕಂಠಪೂರ್ತಿ ಕುಡಿದ ಮತ್ತಿನಿಂದ ಅಣ್ಣತಮ್ಮಂದಿರೊಳಗೆ ಜಗಳ ಆರಂಭವಾಗಿ ಕೊಲೆಯಲ್ಲಿ ಪ್ರಕರಣ ಅಂತ್ಯವಾಯಿತೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೈಕ್ಗಳ ನಡುವೆ ಢಿಕ್ಕಿ; ಸವಾರರಿಗೆ ಗಾಯ
ಕುಂದಾಪುರ: ಕನ್ಯಾನ ಗ್ರಾಮದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ಇಂಗ್ಲಿಷ್ ಮಾಧ್ಯಮ ಶಾಲೆಯ ಬಳಿ ಬೈಕ್ಗಳೆರಡು ಢಿಕ್ಕಿಯಾಗಿವೆ.
ಚೆನ್ನಯ್ಯ ಪೂಜಾರಿ ಅವರು ಬೈಕ್ನಲ್ಲಿ ತಲ್ಲೂರು ಕಡೆಯಿಂದ ನೇರಳಕಟ್ಟೆ ಕಡೆಗೆ ಹೋಗುವಾಗ ಗುಲ್ವಾಡಿ ಕಡೆಯಿಂದ ತಲ್ಲೂರು ಕಡೆಗೆ ಸುರೇಶ ಅವರು ಚಂದ್ರ ಅವರನ್ನು ಸಹ ಸವಾರರಾಗಿ ಕರೆದೊಯ್ಯುತ್ತಿದ್ದ ಬೈಕ್ಗೆ ಢಿಕ್ಕಿಯಾಗಿದೆ.
ಮೂರೂ ಜನರಿಗೆ ಗಾಯವಾಗಿದ್ದು ಸುರೇಶ ಅವರು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇರಿಜೆಡ್ಡು: ವ್ಯಕ್ತಿ ಆತ್ಮಹತ್ಯೆ
ಸಿದ್ದಾಪುರ: ಮಚ್ಚಟ್ಟು ಗ್ರಾಮದ ಇರಿಜೆಡ್ಡು ರವೀಂದ್ರ ಆಚಾರ್ (38) ಅವರು ವಿಪರೀತ ಕುಡಿತದ ಚಟ ಹೊಂದಿದ್ದು, ಜೀವನದಲ್ಲಿ ಜುಗುಪ್ಸೆಗೊಂಡು ಮನೆ ಸಮೀಪದ ಗೇರುಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹೋದರ ಪ್ರಶಾಂತ ಆಚಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ