ಫಾಝಿಲ್ ಕೊಲೆ ಪ್ರಕರಣ: ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ
Team Udayavani, Aug 4, 2022, 7:03 AM IST
ಮಂಗಳೂರು: ಸುರತ್ಕಲ್ನಲ್ಲಿ ನಡೆದ ಮಹಮ್ಮದ್ ಫಾಝಿಲ್ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯವು 14 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಂಧಿತ ಆರೋಪಿಗಳಾದ ಸುಹಾಸ್ ಶೆಟ್ಟಿ, ಮೋಹನ್, ಅಭಿಷೇಕ್, ಶ್ರೀನಿವಾಸ್, ದೀಕ್ಷಿತ್ ಮತ್ತು ಗಿರಿಧರ್ನನ್ನು ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಮೊದಲು ಬಂಧಿಸಲ್ಪಟ್ಟ ಕಾರು ಮಾಲಕ ಅಜಿತ್ ಕ್ರಾಸ್ತಾನನ್ನು ಈ ಹಿಂದೆಯೇ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು.
ಮತ್ತೊಂದು ಕಾರು ಕೊಟ್ಟ
ಆ ವ್ಯಕ್ತಿ ಯಾರು?
ಪೊಲೀಸರು ಆರೋಪಿಗಳಿಂದ ಕೆಲವು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು, ಆರೋಪಿಗಳು ಒಂದು ಕಾರನ್ನು ಇನ್ನಾದಲ್ಲಿ ಬಿಟ್ಟು ಮತ್ತೊಂದು ಕಾರಿನಲ್ಲಿ ತೆರಳಲು ನೆರವಾದವರು ಯಾರು ಎನ್ನುವ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ಆರೋಪಿಗಳ ಪೈಕಿ ಶ್ರೀನಿವಾಸ್ ತನ್ನ ಗೆಳೆಯನಿಗೆ ಕರೆ ಮಾಡಿ ಕಾರು ತರಿಸಿಕೊಂಡಿದ್ದ.ಹಂತಕರು ವ್ಯವಸ್ಥಿತವಾಗಿಯೇ ಕೃತ್ಯವೆಸಗಿದ್ದು, ತಪ್ಪಿಸಿಕೊಳ್ಳುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿ ದ್ದರು. ಇನ್ನಾದಲ್ಲಿ ಬಿಟ್ಟು ಹೋಗಿದ್ದ ಕಾರಿನಲ್ಲಿ ರಕ್ತದ ಕಲೆಗಳು, ಸಿಮ್ಕಾರ್ಡ್ ಸಹಿತ ಕೆಲವು ಕುರುಹುಗಳು ಪತ್ತೆಯಾಗಿತ್ತು.