Ganesh Festival: ಲಕ್ಕಿಡಿಪ್ ಬಹುಮಾನ ಮದ್ಯದ ಬಾಟಲ್; ಯುವಕನಿಗೆ ಪೊಲೀಸರ ಎಚ್ಚರಿಕೆ
Team Udayavani, Sep 23, 2023, 4:54 PM IST
ಸುಳ್ಯ: ಗಣೇಶ ಚತುರ್ಥಿ ಹಬ್ಬದ ನಿಮಿತ್ತ ಲಕ್ಕಿಡಿಪ್ ಮಾಡಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಮದ್ಯದ ಬಾಟಲ್ ಗಳನ್ನು ನೀಡುವುದಾಗಿ ಘೋಷಿಸಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಜೇತರಿಗೆ ಮದ್ಯವನ್ನು ಬಹುಮಾನವಾಗಿ ನೀಡುವ ಕುರಿತು ಆಕ್ರೋಶಗೊಂಡ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಪೊಲೀಸ್ ದೂರು ದಾಖಲಿಸಿದ್ದರು.
ಸುಳ್ಯದ ನಿವಾಸಿಯೊಬ್ಬ 100 ರೂ. ಬೆಲೆಯ ಲಕ್ಕಿಡಿಪ್ ಕೂಪನ್ಗಳನ್ನು ಮಾರಾಟ ಮಾಡಿ ಶೀಘ್ರ ಹಣ ಗಳಿಸಿದ್ದಾರೆ ಎಂದು ವರದಿಯಾಗಿದೆ. ಡ್ರಾದಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ವಿಜೇತರಿಗೆ ಬ್ಲಾಕ್ ಅಂಡ್ ವೈಟ್ ಮದ್ಯದ ಫುಲ್ ಬಾಟಲ್ ಮತ್ತು ಒಂದು ಕಾರ್ಟನ್ ಬಿಯರ್ ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು.
ದೂರಿನ ಮೇರೆಗೆ ಪೊಲೀಸರು ಯುವಕನನ್ನು ಪತ್ತೆ ಹಚ್ಚಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ಷಮೆಯಾಚಿಸಲು ಯುವಕನನ್ನು ಕೇಳಲಾಗಿದ್ದು, ಕೃತ್ಯವನ್ನು ಪುನರಾವರ್ತಿಸುವುದಿಲ್ಲ ಎಂದು ಪೊಲೀಸರು ಅವನಿಂದ ಮುಚ್ಚಳಿಕೆಯನ್ನು ತೆಗೆದುಕೊಂಡಿದ್ದಾರೆ.